ತಮಗೆ, ದೇವೇಗೌಡ್ರಿಗೆ ಮಾತ್ರ ಗೊತ್ತಿರುವ ಘಟನೆ ಬಹಿರಂಗ ಪಡಿಸಿದ ಸಿದ್ದರಾಮಯ್ಯ
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ವೇಳೆ ನಡೆದ ಘಟನೆಯೊಂದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಹಿರಂಗ ಪಡಿಸಿದ್ದಾರೆ. ಗೌಡ್ರು ಸಿಎಂ ಆಗಿದ್ದ ವೇಳೆ, ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರು.
ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, 1994ರಲ್ಲಿ ನಡೆದ ಮೀಸಲಾತಿ ವಿಚಾರದಲ್ಲಿ ನಡೆದಿದ್ದ ರಾಜಕೀಯ ವಿದ್ಯಮಾನದ ಬಗ್ಗೆ ಸಭೆಯಲ್ಲಿ ಮಾತನಾಡುತ್ತಿದ್ದರು. ಆ ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿತ್ತು.
ಮೀಸಲಾತಿಗೆ ಅಂದು ಬೆಂಬಲ ನೀಡಿದವರು, ವಿರೋಧಿಸಿದವರ ಬಗ್ಗೆ ಸಭೆಯಲ್ಲಿ ಪ್ರಸ್ತಾವಿಸಿದ ಸಿದ್ದರಾಮಯ್ಯ, ಮಹಿಳೆಯರು ಮತ್ತು ಸಮಾಜದ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವುದು ನಮ್ಮ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.
"ಮೀಸಲಾತಿ ವಿಚಾರದಲ್ಲಿ, ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ವೆಂಕಟಸ್ವಾಮಿ ಆಯೋಗ ರಚನೆಯಾಯಿತು. ಆಯೋಗ ವರದಿಯನ್ನೂ ನೀಡಿತು, ಆದರೆ ಅದನ್ನು ಜಾರಿಗೆ ತರಬಾರದೆಂದು ನಮ್ಮ ಸರಕಾರದಲ್ಲೇ ಇದ್ದಂಥ ಮುಂದುವರಿದ ಜಾತಿಯ ಸಚಿವರುಗಳು ವಿರೋಧ ವ್ಯಕ್ತ ಪಡಿಸಿದರು"ಎಂದು ಸಿದ್ದರಾಮಯ್ಯ ಅಂದಿನ ಘಟನೆಯನ್ನು ಮೆಲುಕು ಹಾಕಿದರು. ಮುಂದೆ ಓದಿ..

ಹಿಂದುಳಿದ ವರ್ಗದ ಮೀಸಲಾತಿ ವಿಚಾರ
"ಹಿಂದುಳಿದ ವರ್ಗದ ಮೀಸಲಾತಿ ವಿಚಾರದಲ್ಲಿ ಹಲವು ಸಮಿತಿ ರಚನೆಯಾಗಿ, ವರದಿ ನೀಡಿದ್ದರೂ ಯಾವುದೂ ಕಾರ್ಯರೂಪಕ್ಕೆ ಬಂದಿರಲಿಲ್ಲ. 1994ರಲ್ಲಿ ನಾನು ಹಣಕಾಸಿನ ಮಂತ್ರಿಯಾಗಿದ್ದೆ, ಗೌಡ್ರು ಸಿಎಂ ಆಗಿದ್ದರು. ಕೇಂದ್ರ ಸರಕಾರವೂ ಈ ವಿಚಾರದಲ್ಲಿ ಉತ್ಸುಕತೆಯನ್ನು ತೋರಿತ್ತು"ಎಂದು ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದರು. (ಆ ವೇಳೆ ಸಭೆಯಲ್ಲಿ ಭಾಗವಹಿಸಿದವನೊಬ್ಬ ಮೀಸಲಾತಿ ಏನೂ ಬಂದಿಲ್ಲ ಎಂದು ಉದ್ಘರಿಸಿದ). ಆಗ, ನಾನು ಒಂದೇ ಒಂದು ಪದ ಸುಳ್ಳು ಹೇಳಿಲ್ಲ ಎಂದು ಸಿದ್ದರಾಮಯ್ಯ ಸಮಜಾಯಿಷಿ ನೀಡಿದರು.

ಒಟ್ಟು 51% ಮೀಸಲಾತಿ ನೀಡಬೇಕೆಂದು ಶಿಫಾರಸನ್ನು ಮಾಡಿದ್ದೆವು
"ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಸಂವಿಧಾನಕ್ಕೆ ತಿದ್ದುಪಡಿಯನ್ನು ತಂದಿತು. ಚುನಾವಣೆ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ, ಹಿಂದುಳಿದ ವರ್ಗ, ದಲಿತರಿಗೆ ಮೀಸಲಾತಿ ಕೊಟ್ಟ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು. ನನ್ನ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು, ನಾವು ಸಿಎಂ ಆಗಿದ್ದ ದೇವೇಗೌಡ್ರಿಗೆ ವರದಿಯನ್ನು ನೀಡಿದೆವು. ಒಟ್ಟು 51% ಮೀಸಲಾತಿ ನೀಡಬೇಕೆಂದು ಶಿಫಾರಸನ್ನು ಮಾಡಿದ್ದೆವು" ಎಂದು ಸಿದ್ದರಾಮಯ್ಯ ಸಭೆಯಲ್ಲಿ ವಿವರಿಸಿದರು.

ದೇವೇಗೌಡ್ರು ಒಂದು ಮಾತನ್ನು ಹೇಳಿದರು
"ಆಗ ದೇವೇಗೌಡ್ರು ಒಂದು ಮಾತನ್ನು ಹೇಳಿದರು, 'ಸಿದ್ದರಾಮಯ್ಯ, ಮೇಲ್ವರ್ಗದವರ ವಿರೋಧ ಕಟ್ಟಿಕೊಳ್ಳುತ್ತಿದ್ದೇವೆ ಅಲ್ವಾ, ಏನು ಮಾಡೋದು' ಕೇಳಿದರು. ನಾನು ಹೇಳಿದೆ, ಮೀಸಲಾತಿ ಜಾರಿಗೆ ಬರದೇ ಹೋದಲ್ಲಿ, ಆ ಕ್ಷಣವೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದೆ. ಈ ವಿಚಾರ ನನಗೂ, ದೇವೇಗೌಡ್ರಿಗೂ ಬಿಟ್ಟರೆ ಇನ್ಯಾರಿಗೂ ತಿಳಿದಿರಲಿಲ್ಲ. ಈಗ ಹೇಳುತ್ತಿದ್ದೇನೆ"ಎಂದು ಸಿದ್ದರಾಮಯ್ಯ ಹೇಳುವ ಮೂಲಕ, ಅಂದಿನ ರಾಜಕೀಯ ಮೀಸಲಾತಿ ವಿದ್ಯಮಾನದ ಬಗ್ಗೆ ವಿವರಿಸಿದ್ದಾರೆ.
Recommended Video

ಇದಕ್ಕೆ ವಿರೋಧ ತೋರಿದವರು ಎಂದರೆ ಬಿಜೆಪಿಯ ಸದಸ್ಯ ರಾಮ ಜೋಯಿಶ್
"ಸದನದಲ್ಲೂ ಮೀಸಲಾತಿ ಮಸೂದೆ ಪಾಸ್ ಆಯಿತು. ಆಗ, ಇದಕ್ಕೆ ವಿರೋಧ ತೋರಿದವರು ಎಂದರೆ ಬಿಜೆಪಿಯ ಸದಸ್ಯ ರಾಮ ಜೋಯಿಶ್. ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಈ ರಾಜಕೀಯ ಮೀಸಲಾತಿ ಕಾನೂನು ಬಾಹಿರ ಎಂದು ಮಸೂದೆ ವಿರುದ್ದ ಅರ್ಜಿ ಸಲ್ಲಿಸುತ್ತಾರೆ. ಆಗ, ಯಡಿಯೂರಪ್ಪ ಅಥವಾ ಬಿಜೆಪಿಯ ಮುಖಂಡರು ಅರ್ಜಿ ವಾಪಸ್ ತೆಗೆದುಕೊಳ್ಳಿ ಎಂದು ಹೇಳಲಿಲ್ಲ. ಅದೃಷ್ವವಶಾತ್ ರಾಮಾ ಜೋಯಿಶ್ ಹಾಕಿದ ಅರ್ಜಿ ವಜಾ ಆಯಿತು" ಎಂದು ಸಿದ್ದರಾಮಯ್ಯ ಅಂದಿನ ಘಟನೆಯನ್ನು ಮೆಲುಕು ಹಾಕಿಕೊಂಡರು.












Click it and Unblock the Notifications