ಲೋಡ್ ಶೆಡ್ಡಿಂಗ್ ಮಾಡದಂತೆ ಸಿದ್ದರಾಮಯ್ಯ ಸೂಚನೆ
ಬೆಂಗಳೂರು, ಆಗಸ್ಟ್ 18 : 'ಎಂತಹ ಪರಿಸ್ಥಿತಿ ಎದುರಾದರೂ, ಯಾವುದೇ ಸಮಸ್ಯೆ ಬಂದರೂ ಅದನ್ನು ಸಮರ್ಪಕವಾಗಿ ನಿಭಾಯಿಸಿ. ಆದರೆ, ವಿದ್ಯುತ್ ಕಡಿತ ಮಾಡಿ ಜನರಿಗೆ ತೊಂದರೆ ನೀಡಬೇಡಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಧನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ಸಂಜೆ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ರೈತರಿಗೆ ಎರಡು ಹಂತದಲ್ಲಿ 7 ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿದೆ. ಅದನ್ನು ಮುಂದುವರೆಸಿ' ಎಂದು ನಿರ್ದೇಶನ ನೀಡಿದರು.[ಸೋಲಾರ್ ವಿದ್ಯುತ್ ನೀಡುವ ಆಲಮಟ್ಟಿ ಕಾಲುವೆಗಳು!]

ಸಭೆಯ ಬಳಿಕ ಮಾತನಾಡಿದ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು, 'ಮುಖ್ಯಮಂತ್ರಿಗಳ ಸೂಚನೆ ಪ್ರಕಾರ ಪರಿಸ್ಥಿತಿ ನಿಭಾಯಿಸಲು ನಾವು ಸನ್ನದ್ಧರಾಗಿದ್ದೇವೆ. ವಿದ್ಯುತ್ ಕಡಿತಕ್ಕೆ ಮುಂದಾಗುವುದಿಲ್ಲ' ಎಂದು ಹೇಳಿದರು.[ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಕುಸಿತ]
'ಜನ ಸಾಮಾನ್ಯರು, ರೈತರು ಮತ್ತು ಕೈಗಾರಿಕೆಗಳಿಗೆ ವಿದ್ಯುತ್ ಕಡಿತ ಮಾಡುವ ಸನ್ನಿವೇಶ ನಿರ್ಮಾಣ ಆಗುವುದಿಲ್ಲ. ವಿದ್ಯುತ್ ಕೊರತೆ ಉಂಟಾದರೆ ಅದನ್ನು ನೀಗಿಸಲು ಕ್ರಮ ಕೈಗೊಳ್ಳಲಾಗುವುದು. ಖರೀದಿ ಬಗ್ಗೆಯೂ ಯೋಜನೆ ರೂಪಿಸಲಾಗಿದೆ. ಆದರೆ, ತುರ್ತು ಸಂದರ್ಭದಲ್ಲಿ ಮಾತ್ರ ಖರೀದಿಗೆ ಮುಂದಾಗಲಾಗುವುದು' ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.[ಕರ್ನಾಟಕದಲ್ಲಿ ವಿದ್ಯುತ್ ದರಗಳು ಏರಿಕೆ]
'ಪ್ರಸ್ತುತ ರಾಜ್ಯದಲ್ಲಿ ಉತ್ಪಾದನೆ ಆಗುತ್ತಿರುವ ಮತ್ತು ಕೇಂದ್ರದಿಂದ ಸಿಗುತ್ತಿರುವ ವಿದ್ಯುತ್ ಅನ್ನು ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲಾಗುತ್ತಿದೆ. ಖಾಸಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಹ ವಿದ್ಯುತ್ ನೀಡಲು ಮುಂದೆ ಬಂದಿದ್ದಾರೆ' ಎಂದರು.
'ಸಕ್ಕರೆ ಕಾರ್ಖಾನೆಗಳ ಮಾಲೀಕರು ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಅರ್ಜಿ ಹಾಕಿಕೊಂಡಿದ್ದಾರೆ. ಅವರಿಂದ ಆಯೋಗ ನಿಗದಿ ಮಾಡುವ ದರದ ಅನ್ವಯ ಖರೀದಿ ಮಾಡುವ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು' ಎಂದು ಹೇಳಿದರು.












Click it and Unblock the Notifications