ಜಾರಕಿಹೊಳಿ ಸಹೋದರರಿಗೆ ಸಿದ್ದರಾಮಯ್ಯ 5 ಪ್ರಶ್ನೆಗಳು
Recommended Video

ಬೆಂಗಳೂರು, ಸೆಪ್ಟೆಂಬರ್ 17 : 12 ದಿನಗಳ ವಿದೇಶ ಪ್ರವಾಸ ಮುಗಿಸಿ ಸಿದ್ದರಾಮಯ್ಯ ಅವರು ಭಾನುವಾರ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆದರೆ, ಕಳೆದ ಒಂದು ವಾರದಿಂದ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳಲ್ಲಿ ಸಿದ್ದರಾಮಯ್ಯ ಅವರ ಹೆಸರು ಕೇಳಿಬರುತ್ತಿದೆ.
ಜಾರಕಿಹೊಳಿ ಸಹೋದರರ ಅಸಮಾಧಾನದ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದಾರೆಯೇ?. ಸಿದ್ದರಾಮಯ್ಯ ಅವರು ವಿದೇಶದಲ್ಲಿದ್ದರೂ ಅವರ ಹೆಸರು ಪದೇ-ಪದೇ ಕೇಳಿ ಬಂದಿದ್ದು ಏಕೆ? ಎಂಬದು ಸದ್ಯದ ಪ್ರಶ್ನೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಸಹ ಈ ಬಗ್ಗೆ ಚಿಂತಿಸುತ್ತಿದ್ದಾರೆ. ಆದ್ದರಿಂದ, ಅವರು ಜಾರಕಿಹೊಳಿ ಸಹೋದರರಿಗೆ 5 ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ಸಹೋದದರರು ಉತ್ತರಿಸುವರೇ? ಕಾದು ನೋಡಬೇಕು.
ಜಾರಕಿಹೊಳಿ ಸಹೋದರರ ಜೊತೆ ಮಾತುಕತೆ ನಡೆಸಿ ಅಸಮಾಧಾನ ಬಗೆಹರಿಸುವ ಜವಾಬ್ದಾರಿಯನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಅವರ ಜೊತೆ ದೂರವಾಣಿ ಮೂಲಕ ಈಗಾಗಲೇ ಸಿದ್ದರಾಮಯ್ಯ ಒಂದು ಹಂತದ ಮಾತುಕತೆ ನಡೆಸಿದ್ದಾರೆ.

ಪ್ರಶ್ನೆ - 1
'ನಾನು ದೇಶದಲ್ಲಿ ಇಲ್ಲದಿರುವಾಗ ಕ್ಷಿಪ್ರವಾಗಿ ಇಷ್ಟು ಬೆಳವಣಿಗೆಗಳು ನಡೆಯಲು ಕಾರಣವೇನು?. ಸಹೋದರರು ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದು ಏಕೆ?' ಎಂದು ಸಿದ್ದರಾಮಯ್ಯ ಅವರು ಜಾರಕಿಹೊಳಿ ಸಹೋದರರನ್ನು ಪ್ರಶ್ನೆ ಮಾಡಿದ್ದಾರೆ.

ಪ್ರಶ್ನೆ - 2
ನಾನು ವಿದೇಶದಲ್ಲಿದ್ದೆ. ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ, ನೀವು ನಡೆಸಿದ ಚಟುವಟಿಕೆಗಳ ಹಿಂದೆ ನನ್ನ ಹೆಸರು ಏಕೆ ಕೇಳಿಬಂತು?. ನನ್ನ ಹೆಸರನ್ನು ತಂದವರು ಯಾರು? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಪ್ರಶ್ನೆ - 3
ಕರ್ನಾಟಕದಲ್ಲಿನ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಅಸ್ಥಿರಗೊಳಿಸಲು ನೀವು ಪ್ರಯತ್ನ ನಡೆಸಿದ್ದು ಹೌದೇ?. ಇಷ್ಟು ಅಸಮಾಧಾನವಾಗಲು ಕಾರಣವೇನು?. ನಿಮ್ಮ ಜೊತೆ 11 ಶಾಸಕರು ಇದ್ದಾರೆ ಎಂದು ವರದಿಗಳು ಬರುತ್ತಿವೆ. ಇಂತಹ ಪ್ರಯತ್ನವನ್ನು ಏಕೆ ಮಾಡಿದಿರಿ.

ಪ್ರಶ್ನೆ - 4
ಜಾರಕಿಹೊಳಿ ಸಹೋದರರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಇಂತಹ ವರದಿಗಳು ಏಕೆ ಬರುತ್ತಿವೆ? ನೀವು ಬಿಜೆಪಿ ಸೇರಲು ಮುಂದಾಗಿದ್ದು ಹೌದೇ, ಅದಕ್ಕೆ ಕಾರಣವೇನು? ಎಂದು ಸಿದ್ದರಾಮಯ್ಯ ಜಾರಕಿಹೊಳಿ ಸಹೋದರರನ್ನು ಪ್ರಶ್ನಿಸಿದ್ದಾರೆ.

ಪ್ರಶ್ನೆ - 5
ನಿಮ್ಮ ಚಟುವಟಿಕೆಗಳಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪಕ್ಷದ ಬಗ್ಗೆ ಚರ್ಚೆ ಆಗುತ್ತಿದೆ. ನಿಮ್ಮ ಬೇಡಿಕೆ ಏನು?. ಯಾವ ಬೇಡಿಕೆ ಈಡೇರಿಸಿಕೊಳ್ಳಲು ಪಕ್ಷದ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡಿದಿರಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.












Click it and Unblock the Notifications