Shobha Karandlaje: ಭಜರಂಗದಳವನ್ನು ನಿಷೇಧ ಮಾಡಿ ತಾಕತ್ತು ತೋರಿಸಿ: ಕಾಂಗ್ರೆಸ್ಗೆ ಶೋಭಾ ಕರಂದ್ಲಾಜೆ ಸವಾಲ್
ಬೆಂಗಳೂರು, ಮೇ 2: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಭಜರಂಗದಳ ನಿಷೇಧಿಸುವ ಕುರಿತು ಪ್ರಸ್ತಾಪಿಸಿದೆ. ಇದು ರಾಜ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.
ಭಜರಂಗದಳ ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆಯ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೆಂಡಾಮಂಡಲರಾಗಿದ್ದು, ಕಾಂಗ್ರೆಸ್ನವರು ತಾಕತ್ ಇದ್ದರೆ ಭಜರಂಗದಳ ನಿಷೇಧಿಸಿ ಎಂದು ಸವಾಲು ಹಾಕಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶ ಮತ್ತು ವಿದೇಶದಲ್ಲಿ ರಾಷ್ಟ್ರ ಭಕ್ತಿಯನ್ನು ಮೂಡಿಸುವಂತಹ ಕೆಲಸವನ್ನು ಆರ್ಎಸ್ಎಸ್ ಮಾಡುತ್ತಿದೆ. ಆರ್ಎಸ್ಎಸ್ನ ಒಂದು ಭಾಗ ಬಿಜೆಪಿ. ಆರ್ಎಸ್ಎಸ್ನ ಯುವಕರ ಭಾಗ ಅದು ಭಜರಂಗದಳ ಎಂದರು.
ರಾಜಕೀಯ ಕ್ಷೇತ್ರದಲ್ಲಿ ಬಿಜೆಪಿ ಇದೆ. ಸಮಾಜ ಸೇವೆಗಾಗಿ ಹಿಂದೂ ಸೇವಾ ಪ್ರತಿಷ್ಠಾನ ಇದೆ. ವನವಾಸಿಗಳ ಜೊತೆ ಕೆಲಸ ಮಾಡಲು ವನವಾಸಿ ಕಲ್ಯಾಣ ಆಶ್ರಮ ಇದೆ. ವಿದ್ಯಾರ್ಥಿಗಳ ಜೊತೆ ಕೆಲಸ ಮಾಡಲು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಎವಿವಿಪಿ ಇದೆ. ಹಾಗೆಯೇ ಯುವಕರ ಮಧ್ಯೆ ಕೆಲಸ ಮಾಡುವುದಕ್ಕಾಗಿ ಭಜರಂಗದಳ ಇದೆ ಎಂದು ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗ ದಳವನ್ನು ಹಾಗೂ ಪಿಎಫ್ಐ ಸಂಘಟನೆಯನ್ನು ಒಂದೇ ತಕ್ಕಡಿಯಲ್ಲಿ ಇಟ್ಟಿದ್ದೀರಿ. ಅಂದರೆ ನಿಮ್ಮ ಉದ್ದೇಶ ಏನಿದೆ? ಒಂದು ದೇಶ ದ್ರೋಹಿ ಸಂಘಟನೆ, ಹಿಂದೂ ಯುವಕರ ಹತ್ಯೆಗೆ ಕಾರಣೀಕರ್ತರಾದ ಸಂಘಟನೆ. ಬಾಂಬ್ ಬ್ಲಾಸ್ಟ್ ಮಾಡುವಂತಹ ಸಂಘಟನೆ, ಹಿಂದೂ ಯುವತಿಯರನ್ನು ಲವ್ ಜಿಹಾದ್ ಹೆಸರಲ್ಲಿ ಮತಾಂತರ ಮಾಡುವ ಸಂಘಟನೆ. ಇಂತಹ ಸಂಘಟನೆ ಜೊತೆ ದೇಶ ಭಕ್ತಿಯಿಂದ ಕೂಡಿರುವ, ದೇಶಕ್ಕಾಗಿ ಹೋರಾಟ ಮಾಡುತ್ತಿರುವ ಭಜರಂಗದಳವನ್ನು ಹೋಲಿಕೆ ಮಾಡಿದಿರಿ ಹಾಗೂ ನಿಷೇಧದ ಮಾತನ್ನು ಆಡಿದೆ. ನಿಮ್ಮ ವಿನಾಶ ಕಾದಿದೆ. ಭಜರಂಗದಳವನ್ನು ನಿಷೇಧ ಮಾಡಿ ನಿಮ್ಮ ತಾಕತ್ತು ತೋರಿಸಿ ಎಂದು ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿರುವುದೇನು?
ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಭಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ, ಭಜರಂಗದಳ ಮತ್ತು ಪಿ.ಎಫ್.ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿದೆ.












Click it and Unblock the Notifications