ಶಿರಾಡಿ ಘಾಟ್ ಸುರಂಗ ಮಾರ್ಗಕ್ಕೆ ಒಪ್ಪಿಗೆ ಕೊಟ್ಟ ಪರಿಸರ ಇಲಾಖೆ
ಬೆಂಗಳೂರು, ಜುಲೈ 06 : 'ಶಿರಾಡಿ ಘಾಟ್ನಲ್ಲಿ 19 ಕಿ.ಮೀ.ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಪರಿಸರ ಇಲಾಖೆ ಒಪ್ಪಿಗೆ ನೀಡಿದೆ. ಪರಿಸರ ಸ್ನೇಹಿಯಾಗಿ ನಿರ್ಮಾಣ ಮಾಡುವುದರಿಂದ ಕಾಡಿನ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ' ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ ಹೇಳಿದ್ದಾರೆ.
ಮಂಗಳವಾರ ವಿಧಾನಪರಿಷತ್ತಿನಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 'ಶಿರಾಡಿ ಘಾಟ್ನಲ್ಲಿ ಮಳೆ ಬಂದಾಗ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ 19 ಕಿ.ಮೀ.ಸುರಂಗ ಮಾರ್ಗ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ' ಎಂದರು. [ಏನಿದು ಶಿರಾಡಿ ಘಾಟ್ ಬೈಪಾಸ್ ಕಾಮಗಾರಿ?]
'ಶಿರಾಡಿಯಲ್ಲಿ 11 ತಿರುವುಗಳು ಬರಲಿದ್ದು, ಸಂಚಾರದ ವೇಳೆ ಅಪಘಾತಗಳಾಗುತ್ತಿವೆ. ಆದ್ದರಿಂದ ತಿರುವುಗಳ ಬದಲಿಗೆ ನೇರ ರಸ್ತೆ ನಿರ್ಮಾಣ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಪರಿಸರ ಇಲಾಖೆಯು ಇದಕ್ಕೆ ಒಪ್ಪಿಗೆ ನೀಡಿದೆ' ಎಂದು ಸಚಿವರು ವಿವರಣೆ ನೀಡಿದರು. [ಶಿರಾಡಿ ಘಾಟ್ ಸುರಂಗ ಮಾರ್ಗ ಕಾಮಗಾರಿ ಶೀಘ್ರ ಆರಂಭ]
ಕಾಮಗಾರಿ ಯಾವಾಗ? : '2016ರ ಡಿಸೆಂಬರ್ ಅಂತ್ಯದೊಳಗೆ ಶಿರಾಡಿ ಘಾಟ್ ನಲ್ಲಿ ಉದ್ದೇಶಿತ ಬೈಪಾಸ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು' ಎಂದು ಕೇಂದ್ರ ಬಂದರು ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು 2015ರ ಡಿಸೆಂಬರ್ನಲ್ಲಿ ಮಂಗಳೂರಿಗೆ ಭೇಟಿ ನೀಡಿದಾಗ ಹೇಳಿದ್ದರು. [ಚಿತ್ರಗಳು : ಶಿರಾಡಿ ಘಾಟ್ ರಸ್ತೆ ಸಂಚಾರಕ್ಕೆ ಮುಕ್ತ-ಮುಕ್ತ]
'ಕಾಮಗಾರಿಗೆ ಸಂಬಂಧಪಟ್ಟಂತೆ ಡಿಪಿಆರ್ ಸರ್ವೆ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 6 ಸುರಂಗಗಳು ಮತ್ತು 12 ಸೇತುವೆಗಳ ನಿರ್ಮಾಣಗೊಳ್ಳಲಿವೆ. ಯೋಜನೆಗೆ ಸುಮಾರು 12 ಸಾವಿರ ಕೋಟಿ ರೂ. ವೆಚ್ಚವಾಗಲಿದೆ' ಎಂದು ಸಚಿವರು ತಿಳಿಸಿದ್ದರು.