ಬಿಜೆಪಿ ಸಮಾವೇಶದಲ್ಲಿ ಅಸಮಾಧಾನ ಬಯಲು: ಹಿರಿಯ ಮುಖಂಡರೇ ಗೈರು
ಬೆಂಗಳೂರು, ಅಕ್ಟೋಬರ್ 15: ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಇಷ್ಟೊಂದು ಇದೆಯೆ ಎಂದು ಪ್ರಶ್ನಿಸುವಂತೆ ಮಾಡಿದ್ದು ಶುಕ್ರವಾರ ನಡೆದ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಪಕ್ಷ ಸೇರ್ಪಡೆ ಕಾರ್ಯಕ್ರಮ. ಕೇಂದ್ರ ಗೃಹಸಚಿವ ರಾಜ್ ನಾಥ್ ಸಿಂಗ್ ಅವರೇ ಸ್ವತಃ ಬಂದಿದ್ದು, ದೊಡ್ಡ ಮಟ್ಟದ ಸಮಾವೇಶ ಆಗಬೇಕಿದ್ದದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತು.
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶಿವರಾಂ ಸೇರ್ಪಡೆ ಕಾರ್ಯಕ್ರಮ ಆಯೋಜಿಸಿದ್ದವರು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ. ಆದರೆ ಇದಕ್ಕೆ ಪಕ್ಷದ ಹಿರಿಯ ನಾಯಕರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಆರ್.ಅಶೋಕ್, ಪ್ರಹ್ಲಾದ್ ಜೋಶಿ ಅಂಥವರೇ ಗೈರಾದರು.[ಬಿಜೆಪಿಯೊಂದಿಗೆ ಕೆ.ಶಿವರಾಂ 'ಮಧುಚಂದ್ರ' ಆರಂಭ]
ಇದು ಹಲವರ ಹುಬ್ಬೇರುವಂತೆ ಮಾಡಿತು. ರಾಜ್ಯ ಬಿಜೆಪಿಯಲ್ಲಿ ನಿಜಕ್ಕೂ ಒಗ್ಗಟ್ಟಿದೆಯಾ ಎಂಬ ಪ್ರಶ್ನೆ ಹುಟ್ಟುಹಾಕಿತು. ಇನ್ನು ನಿರೀಕ್ಷೆಯಷ್ಟು ಜನರನ್ನು ಸೇರಿಸಲು ಸಾಧ್ಯವಾಗದೇ ಹೋದದ್ದು ಕೂಡ ಎದ್ದು ಕಾಣುತ್ತಿತ್ತು. ಆ ಕಾರಣಕ್ಕೆ ಇದೇ ನ್ಯಾಷನಲ್ ಕಾಲೇಜಿನಲ್ಲಿ ಈ ಹಿಂದೆ ಬಿಜೆಪಿಯಿಂದ ಆಯೋಜನೆಯಾಗಿದ್ದ ಕಾರ್ಯಕ್ರಮಗಳಿಗೆ ಇದನ್ನು ಹೋಲಿಸಲು ಸಾಧ್ಯವೇ ಇರಲಿಲ್ಲ.
ಶುಕ್ರವಾರದ ಕಾರ್ಯಕ್ರಮಕ್ಕೆ ಗೈರು ಹಾಜರಾದವರಿಂದ ಯಾವುದೇ ಅಧಿಕೃತ ಸ್ಪಷ್ಟನೆಯೂ ಬಂದಿಲ್ಲ. ವೇದಿಕೆ ಹಿಂಭಾಗದ ಹೋರ್ಡಿಂಗ್ ನಲ್ಲಿ ನಾಯಕರ ಚಿತ್ರಗಳಿದ್ದವೇ ಹೊರತು ಯಾರೂ ಬರಲಿಲ್ಲ. ಈ ಬಗ್ಗೆ ಸ್ವತಃ ಮತನಾಡಿರುವ ಕೆ.ಶಿವರಾಮ್, ನಾನು ಪಕ್ಷಕ್ಕೆ ಸೇರ್ಪಡೆಯಾಗಿದ್ದರ ಬಗ್ಗೆ ಯಾರಿಗಾದರೂ ಅಸಮಾಧಾನ ಇದ್ದರೆ ಅದನ್ನು ಹಿರಿಯ ನಾಯಕರು ನೋಡಿಕೊಳ್ತಾರೆ ಎಂದಿದ್ದಾರೆ.[ದಲಿತ ನಾಯಕ ಕೆ.ಶಿವರಾಂಗೆ ಬಿಜೆಪಿ ರೆಡ್ ಕಾರ್ಪೆಟ್!]
ಈಶ್ವರಪ್ಪನವರನ್ನು ಹಣಿಯುವ ಕಾರಣಕ್ಕೆ ಶಿವರಾಮ್ ನ ಕರೆತರಲಾಗಿದೆ ಎಂಬ ಮಾತು ಕಾರ್ಯಕ್ರಮದ ಮುನ್ನವೇ ಚಾಲ್ತಿಯಲ್ಲಿತ್ತು. ಶಿವರಾಮ್ ಮೂಲಕ ಪರಿಶಿಷ್ಟ ಜಾತಿ ಮತಗಳನ್ನು ಸೆಳೆಯಬಹುದು ಎಂಬುದು ಬಿಜೆಪಿಯ ನಂಬಿಕೆಯಾಗಿದೆ. ಇನ್ನೊಂದು ಕಡೆ ಈಶ್ವರಪ್ಪ ತಮ್ಮನ್ನು ಹಿಂದುಳಿದ ವರ್ಗಗಳ ನಾಯಕ ಎಂದು ಬಿಂಬಿಸುವ ಯತ್ನದಲ್ಲಿದ್ದಾರೆ.
ದಲಿತ ಹಾಗೂ ಹಿಂದುಳಿದ ವರ್ಗಗಳ ಮತ ಬುಟ್ಟಿಯನ್ನು ಗಟ್ಟಿ ಮಾಡಿಕೊಳ್ಳುವುದಕ್ಕಾಗಿಯೇ ಕೆ.ಶಿವರಾಮ್ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ಹೇಳಿದೆ. ಆದರೆ ಇದು ಬಿಎಸ್ ವೈ ಇಟ್ಟಿರುವ ರಾಜಕೀಯ ನಡೆ ಎಂದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.[ಈಶ್ವರಪ್ಪ ವಿರುದ್ದ 'ದಲಿತ ಬ್ರಹ್ಮಾಸ್ತ್ರ' ಪ್ರಯೋಗಿಸಲು ಬಿಎಸ್ವೈ ಸಜ್ಜು?]
ಇತ್ತೀಚೆಗೆ ಬಿಎಸ್ ವೈ ಹಾಗೂ ಈಶ್ವರಪ್ಪ ಮಧ್ಯದ ಸಂಬಂಧ ಹಳಸಿರುವುದು ಜಗಜ್ಜಾಹೀರಾದ ಸತ್ಯ. ದಲಿತರ ಪಾಲಿನ ನಾಯಕ ಎಂದು ಈಶ್ವರಪ್ಪ ಬಿಂಬಿಸಿಕೊಳ್ಳಲು ಯತ್ನಿಸುತ್ತಿರುವ ವೇಳೆಗೆ ಕೆ.ಶಿವರಾಮ್ ಅವರನ್ನು ಬಿಜೆಪಿಗೆ ಸೆಳೆದು ತರುವ ಮೂಲಕ ಯಡಿಯೂರಪ್ಪ ಸರಿಯಾದ ಏಟು ಹಾಕಿದ್ದಾರೆ.