ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಗಂಭೀರ ಆರೋಪ!
ಕೃಷಿ ಸಚಿವ ಚಲುವರಾಯಸ್ವಾಮಿ ಅವರ ಬಗ್ಗೆ ಜೆಡಿಎಸ್ ಗಂಭೀರ ಆರೋಪವನ್ನು ಮಾಡಿದೆ. ಮಂಡ್ಯ ಜಿಲ್ಲೆಯಲ್ಲಿ ಬೇಡಿಕೆ ಇಲ್ಲದಿದ್ದರೂ ಜಿಲ್ಲೆಯಲ್ಲಿ ಔಷಧಗಳನ್ನು ಅಕ್ರಮವಾಗಿ ಖರೀದಿಸುವ ಮೂಲಕ ಸಚಿವ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಮತ್ತು ಅವರ ಸಂಬಂಧಿಕರಾಗಿರುವ ಮಂಡ್ಯ ಡಿಹೆಚ್ಓ ಡಾ. ಕೆ. ಮೋಹನ್ ಲಕ್ಷಾಂತರ ರೂಪಾಯಿ ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ ಎಂದು ದೂರಲಾಗಿದೆ.
ಭ್ರಷ್ಟ ಅಧಿಕಾರಿ ಡಾ.ಕೆ. ಮೋಹನ್ ಅವರನ್ನು ಮಂಡ್ಯ ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಂಡು, ಜಿಲ್ಲೆಯಲ್ಲಿ ಔಷಧಿಗಳು, ವೈದ್ಯಕೀಯ ಸಲಕರಣೆಗಳು ಹಾಗೂ ಪರಿಕರಗಳ ಖರೀದಿಯಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಎಸಗಲಾಗಿದೆ. ಟೆಂಡರ್ ಕರೆಯದೆ ಬಿಡಿ ಬಿಡಿಯಾಗಿ ಕೆಲವೇ ದಿನಗಳ ಅಂತರದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಗಳು ಹಾಗೂ ಸರ್ಜಿಕಲ್ ಉಪಕರಣಗಳನ್ನು ಖರೀದಿಸಿ ಕೆಟಿಪಿಪಿ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ ಎಂದು ದೂರಲಾಗಿದೆ.

ಜೆಡಿಎಸ್ನ ಅಧಿಕೃತ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದ್ದು. ಅದರಲ್ಲಿ ಖರೀದಿಗೆ ಸಂಬಂಧಿಸಿದ ಕಡತಗಳಲ್ಲಿ ಮೂಲ ಬಿಲ್ ಕಾಣೆಯಾಗಿದೆ, ಖರೀದಿ ಪ್ರಕಟಣೆ ಹಾಗೂ ದರಪಟ್ಟಿಯಲ್ಲಿ ದಿನಾಂಕಗಳನ್ನು ತಿದ್ದುಪಡಿ ಮಾಡಿರುವುದು ಭ್ರಷ್ಟಾಚಾರಕ್ಕೆ ಸಾಕ್ಷಿ. ಕೃಷಿ ಸಚಿವ ಚಲುವರಾಯಸ್ವಾಮಿ ಮಂಡ್ಯ ಜಿಲ್ಲೆ ಬಿಟ್ಟು ಆಚೆ ಬರುತ್ತಿಲ್ಲ. ಪ್ರತಿಯೊಂದು ಯೋಜನೆಗಳಲ್ಲೂ ಇಂತಿಷ್ಟು % ವಸೂಲಿ ಮಾಡಿಕೊಂಡು ಮಂಡ್ಯದಲ್ಲೇ ಠಿಕಾಣಿ ಹೂಡಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಅವರ ವಿರುದ್ಧ ಮಾಡಲಾಗಿದೆ.
ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಖದೀಮರ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ಸೂಕ್ತ ಕ್ರಮ ಕೈಗೊಂಡು, ದುರುಪಯೋಗವಾಗಿರುವ ಹಣವನ್ನು ವಸೂಲಿ ಮಾಡಬೇಕು ಎಂದು ಜೆಡಿಎಸ್ ಆಗ್ರಹಿಸಿದೆ. ಇನ್ನು ಈ ಆರೋಪ ಮಂಡ್ಯ ಜಿಲ್ಲೆಯಾದ್ಯಂತ ಭಾರೀ ಸದ್ದು ಮಾಡುತ್ತಿದೆ.
ಹೈಟೆಕ್ ಹಾರ್ವೆಸ್ಟ್ ಹಬ್ ಮತ್ತು ಕೃಷಿ ಭಾಗ್ಯ ಯೋಜನೆ
ಇನ್ನು ಹೈಟೆಕ್ ಹಾರ್ವೆಸ್ಟ್ ಹಬ್ ಮತ್ತು ಕೃಷಿ ಭಾಗ್ಯ ಯೋಜನೆ ರಾಜ್ಯದಲ್ಲಿ ರೈತರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇವುಗಳ ಪ್ರಯೋಜನಗಳ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಯಾಂತ್ರೀಕರಣ ಯೋಜನೆಯ ಪರಿಣಾಮಕಾರಿ ಬಳಕೆ, ಹೊಸ ತಳಿಗಳ ಪರಿಚಯ, ಮತ್ತು ಎಲ್ಲಾ ಜಿಲ್ಲೆಗಳಲ್ಲಿ ಹಾರ್ವೆಸ್ಟರ್ ಹಬ್ಗಳ ಸ್ಥಾಪನೆಯನ್ನು ಸರ್ಕಾರ ಉದ್ದೇಶಿಸಿದೆ. ಮಣ್ಣಿನ ಪರೀಕ್ಷೆಯನ್ನು ತೀವ್ರಗೊಳಿಸಿ, ರಾಸಾಯನಿಕಗಳ ಕಡಿಮೆ ಬಳಕೆ, ಮತ್ತು ನ್ಯಾನೋ ಗೊಬ್ಬರದ ಪ್ರಯೋಜನಗಳ ಬಗ್ಗೆ ಜಾಗೃತಿ ಹೆಚ್ಚಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಮುಂದುವರಿದು ಅಧಿಕಾರಿಗಳು ರೈತರೊಂದಿಗೆ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳನ್ನು ಆಲಿಸಬೇಕು. ಬೆಳೆ ವಿಮೆ, ಕಬ್ಬಿನ ಗೊಣ್ಣೆಹುಳ ನಿಯಂತ್ರಣ, ಶೇಂಗಾದಲ್ಲಿ ಲಘು ಪೋಷಕಾಂಶಗಳ ಬಳಕೆ, ತೊಗರಿಯ ಇಳುವರಿ ವೃದ್ಧಿಗೆ ತಂತ್ರಜ್ಞಾನ, ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಯಲ್ಲಿ ಸ್ಪಷ್ಟತೆ ಕಾಪಾಡಲು ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.












Click it and Unblock the Notifications