ಸಿದ್ದರಾಮಯ್ಯ ಹೊಡೆದ ಲಿಂಗಾಯತ ಶಾಟ್ : ಸಿಕ್ಸೋ, ಔಟೋ?
Recommended Video

ಅದು ಪಂದ್ಯದ ಕೊನೆಯ ಎಸೆತ, ಎರಗಿ ಬಂದ ಯಾರ್ಕರ್ ಅನ್ನು ಬ್ಯಾಟಿನಿಂದ ಬಲವಾಗಿ ಸಿದ್ದರಾಮಯ್ಯ ಬೀಸುತ್ತಾರೆ, ಆದರೆ ಏನಾಯಿತು ಎನ್ನುವುದು ಅವರಿಗೆ ಗೊತ್ತಾಗುವುದಿಲ್ಲ. ಬಾಲ್ ಬೌಂಡರಿಯ ಆಚೆಗೆ ಹೋಗಿರುತ್ತೆ ಎನ್ನುವ ಆತ್ಮವಿಶ್ವಾಸ ಅವರಲ್ಲಿದ್ದರೂ, ಅದು ಸಿಕ್ಸೋ ಅಥವಾ ಕ್ಯಾಚ್ ಆಯಿತೋ ಎನ್ನುವ ಗೊಂದಲ ಅವರಲ್ಲಿ ಹಾಗೇ ಮನೆಮಾಡುತ್ತೆ.
ಚುನಾವಣೆಗೆ ಇನ್ನೇನು ಚಿಲ್ಲರೆ ಒಂದೂವರೆ ತಿಂಗಳು ಬಾಕಿಯಿರುವ ಈ ಹೊತ್ತಿನಲ್ಲಿ ನಿರ್ಣಾಯಕ 'ಲಿಂಗಾಯತ ಪ್ರತ್ಯೇಕ ಧರ್ಮ' ಘೋಷಣೆ, ಇಲೆಕ್ಷನ್ ನಲ್ಲಿ ಯಾವ ರೀತಿ ಪಕ್ಷಕ್ಕೆ ವರ್ಕೌಟ್ ಆಗುತ್ತೆ ಎನ್ನುವ ಭಯ/ನಿರೀಕ್ಷೆ ಕಾಂಗ್ರೆಸ್ಸಿಗರಿಗೇ ಬಹುವಾಗಿ ಕಾಡುತ್ತಲೇ ಇದೆ.
ಅಸಲಿಗೆ, ವೀರಶೈವ ಮತ್ತು ಲಿಂಗಾಯತ ಧರ್ಮಗಳ ನಡುವಿನ ವ್ಯತ್ಯಾಸವೇನು, ಎಲ್ಲರೂ ಬಸವಣ್ಣನವರ ಅನುಯಾಯಿಗಳಾದರೂ, ಲಿಂಗಾಯತ ಪ್ರತ್ಯೇಕ ಧರ್ಮ ಘೋಷಣೆಯಿಂದ ಸಮುದಾಯಕ್ಕೆ ಆಗುವ ಲಾಭವೇನು, ವೀರಶೈವರಿಗೆ ಇದರಿಂದಾಗಿ ಆಗುವ ನಷ್ಟವೇನು? ಇದರ ಸ್ಪಷ್ಟ ಅರಿವು ಬಹುತೇಕ ಅ ಸಮುದಾಯದವರಿಗೆ ಇರುವುದು ಡೌಟು ಅಥವಾ ಅದು ಅವರಿಗೆ ಬೇಕಾಗಿಲ್ಲ.
ಯಾಕೆಂದರೆ ಹೋರಾಟಕ್ಕೆ ಜಯಸಿಕ್ಕಿತು ಎನ್ನುವ ಸಂತೋಷ ಲಿಂಗಾಯತರಿಗೆ (ಬಹುತೇಕ ಎನ್ನಲು ಸಾಧ್ಯವಿಲ್ಲ) ಎಷ್ಟು ಇದೆಯೋ, ಹಿಂದೂ ಧರ್ಮದಿಂದ ಇಬ್ಬಾಗ ಮಾಡಿದ ಸಿಟ್ಟು ಕೂಡಾ ಅಷ್ಟೇ ಸಿದ್ದರಾಮಯ್ಯನವರ ಸರಕಾರದ ಮೇಲೆ ಇದೆ ಎನ್ನುವುದು ಸ್ಪಷ್ಟ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಚುನಾವಣೆಗೆ ಮುನ್ನ ಜಾತಿ ಸಮೀಕರಣದ ಮೂಲಕ ಮತಬೇಟಿಯಾಡುವುದು ರಾಷ್ಟ್ರೀಯ ಪಕ್ಷಕ್ಕೇನೂ ಹೊಸದೇನೂ ಅಲ್ಲ. ಅದಕ್ಕೆ ಕೊಡಬಹುದಾದ ಉದಾಹರಣೆಯೆಂದರೆ ಗುಜರಾತಿನ ಉನಾ, ಉತ್ತರಪ್ರದೇಶದ ದಾದ್ರಿ, ಹರ್ಯಾಣದ ಜಾಟ್ ವಿದ್ಯಮಾನದ ಸುತ್ತಮುತ್ತ ನಡೆದ ಹೇಸಿಗೆ ರಾಜಕಾರಣವೇ ಸಾಕ್ಷಿ. ಮುಂದೆ ಓದಿ

ತುಪ್ಪ ಸುರಿದವರು ಸಚಿವ ಎಂ ಬಿ ಪಾಟೀಲ್ ಮತ್ತು ಮಾತೇ ಮಹಾದೇವಿ
ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಇಂದು ನಿನ್ನೆಯದಲ್ಲ ಎನ್ನುವುದು ಒಪ್ಪಿಕೊಳ್ಳುವ ಮಾತಾದರೂ, ಅದಕ್ಕೆ ಅಕ್ಷರಸ: ತುಪ್ಪ ಸುರಿದವರು ಸಚಿವ ಎಂ ಬಿ ಪಾಟೀಲ್ ಮತ್ತು ಮಾತೇ ಮಹಾದೇವಿ. ವೀರಶೈವ ಮತ್ತು ಲಿಂಗಾಯತ ಎನ್ನುವ ರಾಜ್ಯದ ಬಹುದೊಡ್ಡ ಸಮುದಾಯದ ಇಬ್ಬಾಗಕ್ಕೆ ಕಾರಣಕರ್ತರು ಇವರಿಬ್ಬರೇ. ಹಾಗಾಗಿ, ಮುಖ್ಯಮಂತ್ರಿಗಳ ಜೊತೆ ಈ 'ಧರ್ಮ ಸಂಕಟ'ದ ಸಾದಕಭಾದಕಕ್ಕೆ ಇವರೂ ಕಾರಣಕರ್ತರಾಗುತ್ತಾರೆ.

ಈ ವಿಚಾರದಲ್ಲಿ ಸಂಪುಟದಲ್ಲೇ ಭಿನ್ನಾಭಿಪ್ರಾಯ
ಇದೊಂದು ಪಕ್ಕಾ ರಾಜಕೀಯ ಮತ್ತು ಸೂಕ್ಷ್ಮ ವಿಚಾರ. ಈ ವಿಚಾರದಲ್ಲಿ ಸಂಪುಟದಲ್ಲೇ ಭಿನ್ನಾಭಿಪ್ರಾಯವಿದೆ ಎನ್ನುವ ಸುದ್ದಿಯ ನಡುವೆ, ಜೊತೆಗೆ ಪಂಚಮ ಪೀಠಗಳ ವಿರೋಧದ ನಡುವೆಯೂ ಸರಕಾರ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅಳೆದು ತೂಗಿ ಶಿಫಾರಸು ಮಾಡಿದೆ. ಇದಕ್ಕೆ ಸ್ವಾಗತ ಮತ್ತು ವಿರೋಧ ಎರಡೂ ವ್ಯಕ್ತವಾಗಿದೆ. ಮೇಲ್ನೋಟಕ್ಕೆ ಇದು ಬಿಜೆಪಿ ಮತಬ್ಯಾಂಕಿಗೆ ಆಗುವ ಸಂಚಕಾರ ಎಂದು ವ್ಯಾಖ್ಯಾನಿಸಲಾಗುತ್ತಿದ್ದರೂ, ಜಾತಿಯ ವಿಚಾರವಾಗಿರುವುದರಿಂದ ಹೇಗೆ ಬೇಕಾದರೂ ತಿರುಗಬಹುದು.

ಉಲ್ಟಾ ಹೊಡೆದ ಶಾಮನೂರು ಶಿವಶಂಕರಪ್ಪ
ಸಚಿವ ಸಂಪುಟ ಸಭೆಯಲ್ಲಿ ಓಕೆ ಎಂದಿದ್ದ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಈಗ ಸರಕಾರದ ನಿರ್ಧಾರದ ವಿರುದ್ದ ತಿರುಗಿಬಿದ್ದಿದ್ದಾರೆ. ಮಾರ್ಚ್ 23ರಂದು ಮಹಾಸಭಾದ ಕಾರ್ಯಕಾರಿ ಸಮಿತಿಯ ಸಭೆ ಕರೆದು ಒಮ್ಮತದ ತೀರ್ಮಾನ ತಿಳಿಸುವುದಾಗಿ ಹೇಳಿರುವುದು, ಕಾಂಗ್ರೆಸ್ ಪಾಲಿಗೆ ಶುಭ ಸುದ್ದಿಯೇನೂ ಅಲ್ಲ.

ಬೀದಿಗಿಳಿದು ಶಾಂತಿಯುತ ಹೋರಾಟ ನಡೆಸುವುದಾಗಿ ರಂಭಾಪುರಿ ಶ್ರೀ
ರಂಭಾಪುರಿ, ಉಜ್ಜೈನಿ ಮುಂತಾದ ಸಮುದಾಯದ ಹಿರಿಯ ಪೀಠಾಧಿಪತಿಗಳು ಸರಕಾರದ ವಿರುದ್ದ ಧರ್ಮ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುವುದನ್ನು ಬಿಟ್ಟು, ಒಡೆಯುತ್ತಿರುವ ಸಿದ್ದರಾಮಯ್ಯನವರ ಸರಕಾರದ ವಿರುದ್ದ ಮತಚಲಾಯಿಸುವಂತೆ ಬೀದಿಗಿಳಿದು ಶಾಂತಿಯುತ ಹೋರಾಟ ನಡೆಸುವುದಾಗಿ ರಂಭಾಪುರಿ ಶ್ರೀಗಳು ಹೇಳಿರುವುದು, ಪ್ರಮುಖವಾಗಿ ಉತ್ತರ ಕರ್ನಾಟಕದ ಭಾಗದ ಕಾಂಗ್ರೆಸ್ ಮುಖಂಡರಲ್ಲಿ ಭಯ ಹುಟ್ಟಿಸಿದೆ.

ಲಿಂಗಾಯತ ಪ್ರತ್ಯೇಕ ಧರ್ಮದಿಂದ ಸಮುದಾಯಕ್ಕೆ ಆಗುವ ಲಾಭವೇನು?
ಇನ್ನೊಂದೆಡೆ ಮಾತಾ ಮಹಾದೇವಿಯ ನೇತೃತ್ವದಲ್ಲಿ ಸರಕಾರದ ನಿಲುವನ್ನು ಸಮರ್ಥಿಸಿ, ಲಿಂಗಾಯತ ಪ್ರತ್ಯೇಕ ಧರ್ಮದಿಂದ ಸಮುದಾಯಕ್ಕೆ ಆಗುವ ಲಾಭವೇನು ಎನ್ನುವುದರ ಅರಿವು ಮೂಡಿಸುವ ಕೆಲಸವನ್ನು ಮಾಡುವುದಾಗಿ ಸರಕಾರದ ಪರ ಇರುವ ಪೀಠಾಧಿಪತಿಗಳು ಹೇಳಿದ್ದಾರೆ.

ಬಿಜೆಪಿಯ ಬೆನ್ನಿಗೆ ನಿಂತಿದ್ದ ಸಮುದಾಯದ ನಿಷ್ಠೆ ಬದಲಾಗುತ್ತೋ
ಸಮುದಾಯದವರು ಬಯಸಿದ್ದರೋ ಇಲ್ಲವೋ, ಒಟ್ಟಿನಲ್ಲಿ ಲಿಂಗಾಯತ -ವೀರಶೈವ ಗುಂಪು ಇಬ್ಬಾಗವಾಗಿದೆ. ಬಿಜೆಪಿಯ ಬೆನ್ನಿಗೆ ನಿಂತಿದ್ದ ಈ ಸಮುದಾಯದ ನಿಷ್ಠೆ ಬದಲಾಗುತ್ತೋ, ಇನ್ನೂ ಹೆಚ್ಚಾಗುತ್ತೋ ಮುಂಬರುವ ಚುನಾವಣೆಯಲ್ಲಿ ಗೊತ್ತಾಗಲಿದೆ. ಸಹೋದರರಂತಿದ್ದ ಸಮುದಾಯದವರನ್ನು ಬೇರೆ ಮಾಡಿದ ಕೋಪ, ಸಿದ್ದರಾಮಯ್ಯನವರ ಸರಕಾರದ ಮೇಲೆ ಬಡಿಯಲಿದೆಯಾ? ಇದನ್ನರಿಯಲು ಹೆಚ್ಚುದಿನ ಬೇಕಾಗಿಲ್ಲ, ಸಿದ್ದರಾಮಯ್ಯ ಹೊಡೆದ ಲಿಂಗಾಯತ ಶಾಟ್, ಬಾಲ್ ಸಿಕ್ಸೋ, ಔಟೋ? ಚುನಾವಣಾ ಫಲಿತಾಂಶವೇ ಇದಕ್ಕೆ ಉತ್ತರ.












Click it and Unblock the Notifications