ಯಕ್ಷಪ್ರಶ್ನೆಯಾಗಿರುವ ಭಟ್ಕಳದ ರೇಪ್ ಅಂಡ್ ಮರ್ಡರ್
ಕಾರವಾರ, ಜೂನ್ 30 : ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರದ ಯಮುನಾ ನಾಯ್ಕ ಎಂಬ 'ಯುವತಿಯನ್ನು ಅತ್ಯಾಚಾರಗೈದು, ಕೊಲೆ ಮಾಡಿದ್ದಾನೆ' ಎಂಬ ಆರೋಪದ ಮೇಲೆ ವೆಂಕಟೇಶ ಹರಿಕಂತ್ರ ಎಂಬ ವ್ಯಕ್ತಿಯನ್ನು ಸಾಕ್ಷ್ಯಾಧಾರಗಳ ಕೊರೆತೆಯ ಕಾರಣ ಬಿಡುಗಡೆ ಮಾಡಲಾಗಿದೆ. ಆತ 2010ರ ಅಕ್ಟೋಬರ್ 29ರಂದು ಬಂಧಿತನಾಗಿದ್ದ.
ಈ ಸೆನ್ಸೇಷನಲ್ ಪ್ರಕರಣ ಭಟ್ಕಳದಲ್ಲಿ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಹಿಂದೂ ಮತ್ತು ಮುಸ್ಲಿಂ ಇಬ್ಬರ ಮೇಲೂ ಆರೋಪ ಹೊರಿಸಿದ್ದ ಕಾರಣ ಭಾರೀ ಕೋಮು ಗಲಭೆಗಳಾಗಿದ್ದವು. ಈಗ ಸಾಕ್ಷಿ ಇಲ್ಲವೆಂದು ಆರೋಪಿ ವೆಂಕಟೇಶನನ್ನು 6 ವರ್ಷ 8 ತಿಂಗಳುಗಳ ಬಳಿಕ ಬಿಡುಗಡೆ ಮಾಡಲಾಗಿದೆ.
6 ವರ್ಷ ಜೈಲು ಶಿಕ್ಷೆ ಅನುಭವಿಸಿದ ವೆಂಕಟೇಶ್ ಆರೋಪಿ ಅಲ್ಲವೆಂದ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದು ಯಾರು? ಯುವತಿಯ ಮೈಮೇಲಿದ್ದ ವೀರ್ಯ ಯಾರದ್ದು? ಕೊಲೆ ಮಾಡಿದವನು ಹಾಗೂ ಸಂಭೋಗ ನಡೆಸಿದವನು ಬೇರೆ ಬೇರೆಯೆ? ಎಂಬಿತ್ಯಾದಿ ಯಕ್ಷ ಪ್ರಶ್ನೆಗಳಿಗೆ ಪೊಲೀಸರು ಇನ್ನೂ ಉತ್ತರ ಕಂಡುಕೊಳ್ಳಬೇಕಿದೆ.
ನಡೆದಿದ್ದೇನು? : ಮುರುಡೇಶ್ವರದ ಹಿರೇದೋಮಿಯಲ್ಲಿರುವ ಮುಸ್ಲಿಂ ಮನೆಯೊಂದಕ್ಕೆ ಯಮುನಾ ಕೆಲಸಕ್ಕೆಂದು ಪ್ರತಿ ದಿನ ತೆರಳುತ್ತಿದ್ದಳು. ಅದರಂತೆ 2010ರ ಅಕ್ಟೋಬರ್ 23ರಂದು ಬೆಳಿಗ್ಗೆ 8ಕ್ಕೆ ತೆರಳಿದ ಯುವತಿ ಸಂಜೆಯಾದರೂ ಪತ್ತೆಯಾಗಿರಲಿಲ್ಲ. ಮರುದಿನ ಆಕೆಯ ಕುಟುಂಬದವರು ಹಾಗೂ ಸ್ಥಳೀಯರು ಆಕೆ ಕೆಲಸಕ್ಕೆ ಹೋಗುತ್ತಿದ್ದ ಮುಸ್ಲಿಂ ಮನೆಯ ಬಳಿ ಬಂದು ಹುಡುಕಾಡಿದಾಗ ಅಲ್ಲೇ ಪಕ್ಕದ ಶೆಡ್ವೊಂದರಲ್ಲಿ ಯಮುನಾಳ ಶವ ಕಟ್ಟಿಗೆಯಿಂದ ಮುಚ್ಚಿಟ್ಟಿದ್ದ ಸ್ಥಿತಿಯಲ್ಲಿ ದೊರಕಿತ್ತು.
ಅತ್ಯಾಚಾರವಾಗಿದೆಯೆಂದು ಬೊಂಬೆಯ ಮೂಲಕ ವಿವಿರಿಸಿದ ಮೂಕ ಬಾಲಕಿ
ಆಕೆಯ ಕುಟುಂಬಸ್ಥರು 'ಯಮುನಾಳನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ' ಎಂದು ದೂರಿ, ಆರೋಪಿಗಳ ಪತ್ತೆ ಹಚ್ಚುವಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅದರಂತೆ ತನಿಖೆ ನಡೆಸಿದ ಅಂದಿನ ಡಿವೈಎಸ್ಪಿ ನಾರಾಯಣರಾವ್ ಪ್ರಕರಣ ದಾಖಲಾದ 6 ದಿನಗಳ ಬಳಿಕ ಅಲ್ಲಿನ ಸ್ಥಳೀಯನೇ ಆದ ವೆಂಕಟೇಶ ಹರಿಕಂತ್ರ ಎಂಬುವವರನ್ನು ಬಂಧಿಸಿದರು. ಅದಾದ ಬಳಿಕ ನಡೆದಿದ್ದು ಸ್ಟೋರಿಯ ಯಕ್ಷ ಪ್ರಶ್ನೆಗಳು...
ಏನಿದು ಕಥೆ- ವ್ಯಥೆ? : ಯಮುನಾಳ ಕುಟುಂಬದವರು ಶಂಕಿತ 9 ಮಂದಿಯ ಹೆಸರನ್ನು ಪೊಲೀಸರಿಗೆ ನೀಡಿದ್ದರು. ಆ ಶಂಕಿತರ ಹೆಸರಿನಲ್ಲಿ ವೆಂಕಟೇಶನ ಹೆಸರಿನ ಬದಲಿಗೆ ಆ ಮುಸ್ಲಿಂ ಮನೆಯಲ್ಲಿ ಇರುತ್ತಿದ್ದ ಆ ಮನೆಯ ಒಬ್ಬ ಯುವಕ ಹಾಗೂ ಆತನ ಗೆಳೆಯನ ಹೆಸರನ್ನು ಸೂಚಿಸಿದ್ದರು. ಆದರೆ ಪೊಲೀಸರು ಬಂಧಿಸಿದ್ದು ಶಂಕಿತರ ಹೆಸರಿನಲ್ಲಿಲ್ಲದ ವೆಂಕಟೇಶ ಹರಿಕಂತ್ರನನ್ನ! ಅಷ್ಟಕ್ಕೂ ಸಂಬಂಧವಿಲ್ಲದ ವೆಂಕಟೇಶ ಹರಿಕಂತ್ರ ಪೊಲೀಸರ ತನಿಖೆಯಲ್ಲಿ ಆರೋಪಿಯಾಗಿದ್ದು ಹೇಗೆ? ಎಂಬುವುದು ಮಾತ್ರ ಸದ್ಯ ಪ್ರಶ್ನಾರ್ಹವಾಗಿದೆ.
ಒಂದೆಡೆ ಆಕೆಯ ಮನೆಯವರು ಅವಳ ಕೊರಗಿನಲ್ಲಿ ವ್ಯಥೆ ಅನುಭವಿಸುತ್ತಿದ್ದಾಗ ಈ ಕಡೆ ಎಂಟ್ರಿ ಕೊಟ್ಟಿದ್ದು ಹಿಂದೂ ಸಂಘಟನೆಗಳು. 'ಯಮುನಾಳನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿದ್ದು ಆ ಮನೆಯ 2 ಮುಸ್ಲಿಂ ಯುವಕರು' ಎಂದು ವೆಂಟೇಶನ ಬಂಧನಕ್ಕೂ ಮುಂಚೆ ಹಾಗೂ ಆತನ ವಿಚಾರಣೆ ನಡೆಯುತ್ತಿದ್ದ ವೇಳೆ ಹಿಂದೂ ಸಂಘಟನೆಗಳ ಪ್ರಮುಖರು ಸುದ್ದಿ ಹರಡತೊಡಗಿದರು.
ಹಾವೇರಿ: 9 ರ ಬಾಲೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 60ರ ವೃದ್ಧ
ಇದರಿಂದ ಉದ್ರಿಕ್ತಗೊಂಡಿದ್ದ ಭಟ್ಕಳದಲ್ಲಿ ಬಂದ್, ಹೋರಾಟ ನಡೆಯಲಾರಂಭಿಸಿತು. ವೆಂಕಟೇಶನ ವಿಚಾರಣೆಯ ಹಂತದ ನಡುವೆಯೇ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಭೇಟಿ ಕೊಟ್ಟು, ಮುಸ್ಲಿಂ ಸಮುದಾಯದ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಇದರ ಮಧ್ಯೆ ಪೊಲೀಸ್ ಮೂಲಗಳು 'ವೆಂಕಟೇಶ್ ಆರೋಪಿ. ಬಲವಾದ ಸಾಕ್ಷಿ ದೊರೆತಿದೆ' ಎಂದು ತಿಳಿಸಿದರು.
ಇದರಿಂದ ಭಟ್ಕಳದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕೋಮು ಗಲಭೆ ಕಡಿಮೆಯಾಗಿತ್ತು. 'ಭಟ್ಕಳದಲ್ಲಿ ಕೋಮು ಗಲಭೆ ಉಂಟಾಗಬಹುದು ಎಂದು ಡಿವೈಎಸ್ಪಿ ನಾರಾಯಣರಾವ್ ಅವರು ಕಥೆ ಹೆಣೆದು ವೆಂಕಟೇಶನನ್ನು ಬಂಧಿಸಿದರು' ಎಂದು ಶ್ರೀರಾಮ ಸೇನೆಯ ಮುಖಂಡರು ಆರೋಪಿಸಿದರು. ಅವರ ಆರೋಪಕ್ಕೆ ಬಲ ಎಂಬಂತೆ 'ವೆಂಕಟೇಶ್ ಅತ್ಯಾಚಾರ ನಡೆಸಿಲ್ಲ' ಎಂದು ಆತನನ್ನು ಬಿಡುಗಡೆ ಮಾಡಲಾಗಿದೆ. ಇದು ಹಿಂದೂಪರ ಸಂಘಟನೆಗಳು ಮತ್ತೆ ಪ್ರಚೋದನೆಗೊಳ್ಳಲು ಎಡವು ಮಾಡಿಕೊಟ್ಟಿದೆ.
ನ್ಯಾಯಾಲಯದ ತನಿಖೆ : ವೆಂಕಟೇಶ ಹರಿಕಂತ್ರನನ್ನು ಆರೋಪಿ ಎಂದು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಲಯ 51 ಸಾಕ್ಷಿದಾರರ ಹೇಳಿಕೆಯನ್ನು ದಾಖಲಿಸಿಕೊಂಡಿತು. ಆರೋಪಿಯ ಪರ ಕುಂದಾಪುರದ ವಕೀಲ ರವಿಕಿರಣ ಮುರುಡೇಶ್ವರ ವಾದಿಸಿದರು. ವಾದದ ಜತೆಗೆ ಪೊಲೀಸರ ವರದಿ, ವಿಧಿವಿಜ್ಞಾನ ಕೇಂದ್ರದ ವರದಿ, ಮರಣೋತ್ತರ ಪರೀಕ್ಷಾ ವರದಿಯನ್ನು ಪರಿಶೀಲನೆ ನಡೆಸಿ, 'ವೆಂಕಟೇಶ ಹರಿಕಂತ್ರ ಅತ್ಯಾಚಾರ ನಡೆಸಿದ್ದಾನೆ' ಎಂಬುದು ರುಜುವಾತು ಆಗದೆ 6 ವರ್ಷ 8 ತಿಂಗಳ ಬಳಿಕ ಬಿಡುಗಡೆ ಮಾಡಲಾಗಿದೆ.
ಚಲಿಸುತ್ತಿದ್ದ ಕಾರಿನಲ್ಲಿ 8 ಗಂಟೆ ಅತ್ಯಾಚಾರ ಎಸಗಿದ್ದ ಕಾಮುಕರ ಬಂಧನ
ವರದಿಗಳು ಏನು ಹೇಳುತ್ತವೆ? : ಯಮುನಾಳ ದೇಹದ ಮೇಲಿನ ಮೂರು ಭಾಗದಲ್ಲಿ ಅಂದರೆ ಆಕೆಯ ಮರ್ಮಾಂಗ ಹಾಗೂ ಎರಡು ತೊಡೆಯ ಭಾಗದಲ್ಲಿ ವೀರ್ಯ ದೊರೆತಿತ್ತು. ಜತೆಗೆ ಆಕೆಯ ಕೈಯಲ್ಲಿ ಪುರುಷನ ಕೂದಲಿನ 2 ಎಳೆ ಸಿಕ್ಕಿದ್ದವು. ಅವುಗಳನ್ನು ಹೈದಾರಾಬಾದ್ಗೆ ಡಿಎನ್ಎ ಪರೀಕ್ಷೆಗೆ ಪೊಲೀಸರು ಕಳುಹಿಸಿದರು. ಅಲ್ಲಿನ ತಜ್ಞ ಡಾ.ಪ್ರಸಾದ್ ಅವರು ಪ್ರಯೋಗ ನಡೆಸಿ, 2011ರ ಆಗಸ್ಟ್ ತಿಂಗಳಿನಲ್ಲಿ ವರದಿಯನ್ನು ನೀಡಿದ್ದರು.
ಅದರ ಪ್ರಕಾರ 'ಪೊಲೀಸರು ನೀಡಿದ್ದ ಯಮುನಾಳ ಮೈಮೇಲಿನ ವೀರ್ಯ ಹಾಗೂ ವೆಂಕಟೇಶ ಹರಿಕಂತ್ರನ ವೀರ್ಯವು ಹೊಂದಾಣಿಕೆ ಆಗುತ್ತಿಲ್ಲ. ಜತೆಗೆ ಪೊಲೀಸರು ನೀಡಿದ್ದ ರೋಮವೂ ಕೂಡ ಆತನದ್ದಲ್ಲ. ಅಲ್ಲದೇ ವೆಂಕಟೇಶ ಹರಿಕಂತ್ರನ ಎದೆಯ ಭಾಗದಲ್ಲಿ ಆಗಿರುವ ಗಾಯವು ಯಮುನಾಳ ಉಗುರಿನಿಂದಲೇ ಆಗಿರುವುದು ಎಂದು ಹೇಳಲಾಗುವುದಿಲ್ಲ. ಅದು ಆತ ಕೆಲಸ ಮಾಡುವಾಗ ಆಗಿರಬಹುದಾದ ಗಾಯ ಇರಬಹುದು' ಎಂದಿದೆ.
ಅಂತೆಯೇ ಮಣಿಪಾಲದ ವಿಧಿವಿಜ್ಞಾನ ಕೇಂದ್ರದ ತಜ್ಞ ಡಾ.ಶಂಕರ ಬಕ್ಕಣ್ಣನವರ್ ಯಮುನಾಳ ಶವದ ಮರಣೋತ್ತರ ಪರೀಕ್ಷೆ ನಡೆಸಿ, 'ಆಕೆಯ ಉಗುರು ಬೆರಳಿನಿಂದ ಹಿಂದಕ್ಕೆ ಇದೆ. ಹೀಗಾಗಿ ಆಕೆಯ ಉಗುರಿನಿಂದ ಗಾಯಗಳಾಗುವ ಸಾಧ್ಯತೆ ಕಡಿಮೆ' ಎಂದು ಸ್ಪಷ್ಟನೆ ನೀಡಿದ್ದರು.
ಪ್ರಶ್ನೆಗಳ ಸರಮಾಲೆ : ಅಷ್ಟಕ್ಕೂ ಈ ಪ್ರಕರಣದಲ್ಲಿ ವೆಂಕಟೇಶ ಹರಿಕಂತ್ರ ಸಾಕ್ಷ್ಯಗಳ ರುಜುವಾತಾಗದೆ ಬಿಡುಗಡೆಯಾಗಿದ್ದು, ಆರೋಪಿ ಯಾರು? ಎಂಬುದು ಈಗ ಸಾರ್ವಜನಿಕ ವಲಯದಲ್ಲಿ ಮೂಡಿರುವ ಪ್ರಶ್ನೆ. ಅಂದಹಾಗೆ ಪೊಲೀಸರು ವೆಂಕಟೇಶನನ್ನೇ ಬಂಧಿಸಲು ಕಾರಣವೇನು? ಆಕೆಯ ಮೈಮೇಲಿದ್ದ ವೀರ್ಯ ವೆಂಕಟೇಶನದ್ದು ಅಲ್ಲ ಅಂದ ಮೇಲೆ ಅದು ಇನ್ಯಾರದ್ದು? ಅಂತ ತನಿಖೆ ನಡೆಸಬಹದಿತ್ತು.
ಆಕೆಯ ಮೈಮೇಲೆ ದೊರೆತ ವೀರ್ಯ ತಾಜಾ ಆಗಿದ್ದು, ಕೊಲೆ ಮಾಡಿದವನು ಹಾಗೂ ಸಂಭೋಗ ನಡೆಸಿದವನು ಬೇರೆ ಬೇರೆಯೆ? ಪ್ರಕರಣ ದಾಖಲಾದ ಒಂದು ವರ್ಷದ ಬಳಿಕ ಬಂದ ಡಿಎನ್ಎಯನ್ನು ಪಡೆದ ಡಿವೈಎಸ್ಪಿ ನಾರಾಯಣರಾವ್ ಅವರು ನ್ಯಾಯಾಲಯಕ್ಕೆ ಹಾಜುರುಪಡಿಸಿದ್ದು 6 ತಿಂಗಳ ಬಳಿಕ. ಹಾಗಾದರೆ ಇಷ್ಟು ತಡವಾಗಿ ವರದಿ ನ್ಯಾಯಾಲಯಕ್ಕೆ ಸಲ್ಲಿಸಲು ಬಲವಾದ ಕಾರಣವಾದರೂ ಏನೂ? ಎಂಬುದು ಇನ್ನು ತನಿಖೆಯಿಂದಲೇ ತಿಳಿದುಬರಬೇಕಿದೆ.