ಡಿಕೆಶಿಗೆ ಕೆಟ್ಟಕಾಲ ಶುರು: ಎಚ್ಡಿಕೆ ಸುತ್ತ ಇದ್ದ ಗ್ರಹಗಳು ಈಗ ಡಿಕೆಶಿ ಹಿಂದೆ ಮುಂದೆ
ಬೆಂಗಳೂರು, ಮಾರ್ಚ್ 15: ಮಾಜಿ ಸಚಿವ, ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣದ ಸುತ್ತಮುತ್ತ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ನಡೆಯುತ್ತಿದ್ದರೆ, ಜೆಡಿಎಸ್ ಕೂಡಾ ಈ ವಿಚಾರದಲ್ಲಿ ಹೇಳಿಕೆಯನ್ನು ನೀಡುತ್ತಿದೆ.
ರಮೇಶ್ ಜಾರಕಿಹೊಳಿಗೆ ಧೈರ್ಯ ತುಂಬಿದ್ದು ನಾನೇ ಎಂದು ಹೇಳಿದ್ದ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ, ಈ ವಿಚಾರದಲ್ಲಿ ಮತ್ತೊಂದು ಹೇಳಿಕೆಯನ್ನು ನೀಡಿದ್ದಾರೆ. ರೇವಣ್ಣ ಅವರ ಈ ಹೇಳಿಕೆ, ರಾಜ್ಯ ರಾಜಕೀಯದಲ್ಲಿ ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆ ಎನ್ನುವುದು ಮುಂದೆ ನೋಡಬೇಕಿದೆ.
ವಿಶೇಷ ತನಿಖಾ ದಳವು ತನಿಖೆ ಆರಂಭಿಸಿದ ನಂತರ, ಪಟ್ಟಿಯಲ್ಲಿ ಕೆಲವು ಕಾಂಗ್ರೆಸ್ ನಾಯಕರ ಹೆಸರೂ ಇದೆ ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಮತ್ತು ಮಧು ಬಂಗಾರಪ್ಪ ವಿಚಾರವನ್ನು ಮುಂದಿಟ್ಟುಕೊಂಡು ರೇವಣ್ಣ ಮಾತನಾಡಿದ್ದಾರೆ.
ದೇವರು, ಜಾತಕವನ್ನು ಹೆಚ್ಚಾಗಿ ನಂಬುವ ರೇವಣ್ಣ, ಇದೇ ದಾಟಿಯಲ್ಲಿ ಮುಂದೆ ಡಿಕೆಶಿಗೆ ತೊಂದರೆ ಕಾದಿದೆ ಎಂದು ಹೇಳಿದ್ದಾರೆ. ಆದರೂ, ಎಚ್ಡಿಕೆ ಅನುಭವಿಸಿದಷ್ಟು ಕಷ್ಟವನ್ನು ಡಿಕೆಶಿ ಎದುರಿಸದೇ ಇರಲಿ ಎಂದು ರೇವಣ್ಣ ಶುಭ ಕೋರಿದ್ದಾರೆ. ರೇವಣ್ಣ ಹೇಳಿದ್ದು, ಮುಂದೆ ಓದಿ...

ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರ
"ಕುಮಾರಣ್ಣನ ಸುತ್ತಮುತ್ತ ಕೆಲವು ಗ್ರಹಗಳು ಇದ್ದವು, ಈಗ ಅದರಿಂದ ಬಿಡುಗಡೆ ಸಿಕ್ಕಿದೆ. ಆ ಗ್ರಹಗಳೆಲ್ಲಾ ಈಗ ಡಿ.ಕೆ.ಶಿವಕುಮಾರ್ ಕಡೆ ಸೇರಿಕೊಂಡಿದೆ. ಕುಮಾರಣ್ಣ ಅನುಭವಿಸಿದ ನೋವನ್ನು ಕೆಪಿಸಿಸಿ ಅಧ್ಯಕ್ಷರೂ ಅನುಭವಿಸಲಿ, ಹಾಗಾಗಿ ಅವೆಲ್ಲಾ ಕಾಂಗ್ರೆಸ್ ಕಡೆಗೆ ಹೋಗಲಿ"ಎಂದು ರೇವಣ್ಣ ವ್ಯಂಗ್ಯವಾಗಿ ಮಧು ಬಂಗಾರಪ್ಪನವರು ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ವ್ಯಂಗ್ಯ
"ಆದರೆ ಕುಮಾರಣ್ಣ ನೋವು ಅನುಭವಿಸಿದಷ್ಟು ಡಿಕೆಶಿ ನೋವು ಅನುಭವಿಸದೇ ಇರಲಿ. ಕೆಲವರು ನಮ್ಮಿಂದ ದೂರವಾಗಿರುವುದು ಒಳ್ಳೆಯದೇ, ಮಧು ಬಂಗಾರಪ್ಪನವರಿಗೂ ಭಗವಂತ ಒಳ್ಳೆಯದನ್ನು ಮಾಡಲಿ. ಒಳ್ಳೊಳ್ಳೆಯ ಗ್ರಹಗಳನ್ನು ತಮ್ಮ ಬಳಿ ಸೇರಿಸಿಕೊಂಡರೆ ಅವರಿಗೆ ಮುಂದೆ ಒಳ್ಳೆದಾಗುವುದಾದರೆ ಆಗಲಿ"ಎಂದು ರೇವಣ್ಣ ವ್ಯಂಗ್ಯವಾಡಿದರು.

ಜಾರಕಿಹೊಳಿ ಬಹಳ ಕಷ್ಟಪಟ್ಟು ಮೇಲೆ ಬಂದವರು
"ಡಿ.ಕೆ.ಶಿವಕುಮಾರ್ ಅವರಿಗೆ ಮುಂದೆ ಅಧಿಕಾರಕ್ಕೆ ಬರಲು ಅನುಕೂಲವಾಗಲೆಂದು ತಮ್ಮ ಬಳಿ ಗ್ರಹಗಳನ್ನು ಸೇರಿಸಿಕೊಳ್ಳುತ್ತಿದ್ದಾರೆ"ಎಂದು ರೇವಣ್ಣ ಹೇಳಿದ್ದಾರೆ. "ನಾವು ಮೊದಲು ಮನುಷ್ಯತ್ವನ್ನು ಹೊಂದಿರಬೇಕು. ಜಾರಕಿಹೊಳಿ ಬಹಳ ಕಷ್ಟಪಟ್ಟು ಮೇಲೆ ಬಂದವರು. ಒಳ್ಳೆಯದ್ದು ಮತ್ತು ಕೆಟ್ಟದ್ದನ್ನು ದೇವರಿಗೆ ಬಿಡೋಣ. ನಾನು ಅವರಿಗೆ ಧೈರ್ಯ ಹೇಳಿರುವುದಂತೂ ನಿಜ"ಎಂದು ರೇವಣ್ಣ ಹಿಂದೆ ಹೇಳಿದ್ದರು.
Recommended Video

ಡಿಕೆಶಿಯವರನ್ನು ಲೇವಡಿ ಮಾಡಿದ ಕುಮಾರಸ್ವಾಮಿ
"ಯಾಕೆ ಅವರ ಹೆಸರು ತಂದುಕೊಂಡರೋ ಎಂಬುದು ಗೊತ್ತಿಲ್ಲ. ಯಾರಾದರೂ ಹೇಳಿದ್ದಾರಾ, ಅವರೇ ಮಾಡಿದ್ದಾರೆ ಎಂದು ಗೊತ್ತಿಲ್ಲ. ಯಾಕೆ ಅವರೇ ಊಹೆ ಮಾಡಿಕೊಂಡರೋ ಗೊತ್ತಿಲ್ಲವೆಂದು"ಎಂದು ಜಾರಕಿಹೊಳಿ ಸಿಡಿ ವಿಚಾರದಲ್ಲಿ ಕುಮಾರಸ್ವಾಮಿಯವರು, ಡಿಕೆಶಿಯವರನ್ನು ಲೇವಡಿ ಮಾಡಿದ್ದರು.












Click it and Unblock the Notifications