ಅಪ್ಪ, ಮಗಳು ಬಜೆಟ್ ಅಧಿವೇಶನದಲ್ಲಿ ಗೈರು: ಏನೇನೋ ಸುದ್ದಿ
ಕುಮಾರಸ್ವಾಮಿ ಸರಕಾರ ಇರುತ್ತೋ, ಬೀಳುತ್ತೋ ಎಂದು ಇಡೀ ರಾಜ್ಯವೇ ಕುತೂಹಲದಿಂದ ಕಾಯುತ್ತಿರುವ 2019ರ ಬಜೆಟ್ ಅಧಿವೇಶನ ಆರಂಭವಾಗಿದೆ. ನಿರೀಕ್ಷೆಯಂತೆ, ವಿರೋಧ ಪಕ್ಷ ಬಿಜೆಪಿ, ಸದನದ ಬಾವಿಗಿಳಿದಿದೆ. ರಾಜ್ಯಪಾಲರು ಮೊದಲ ಪುಟ, ಕೊನೆಯ ಪುಟವನ್ನು ಓದಿ ತಮ್ಮ ಭಾಷಣವನ್ನು ಮುಗಿಸಿದ್ದಾರೆ.
ಅತೃಪ್ತ ಕಾಂಗ್ರೆಸ್ ಶಾಸಕರು ಅಧಿವೇಶನದಲ್ಲಿ ಗೈರಾಗಬಹುದು ಎನ್ನುವ ಸೂಚನೆಯಿದ್ದರೂ, ಮೊದಲ ದಿನದ ಅಧಿವೇಶನದಲ್ಲಿ ಎಂಟು ಕಾಂಗ್ರೆಸ್ ಶಾಸಕರು (ಇದುವರೆಗಿನ ಮಾಹಿತಿಯ ಪ್ರಕಾರ) ಅಧಿವೇಶನದಿಂದ ದೂರ ಉಳಿದದ್ದು, ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಬೇರೇನೇ ಸುದ್ದಿಗೆ ಅಹಾರ ನೀಡಿದಂತಾಗಿದೆ.
ಎಂಟು ಕಾಂಗ್ರೆಸ್ ಶಾಸಕರ ಜೊತೆ ಮೂವರು ಬಿಜೆಪಿ ಶಾಸಕರೂ ಸದನದಲ್ಲಿ ಗೈರಾಗಿರುವುದು ಅಂತಹ ದೊಡ್ಡ ಸುದ್ದಿಯೇನೂ ಅಲ್ಲ. ಯಾಕೆಂದರೆ ಮೂವರೂ, ಪಕ್ಕಾ ಬಿಜೆಪಿಗರು ಮತ್ತು ಪಕ್ಷ ವಹಿಸಿರುವ ಕೆಲಸವನ್ನು ನಿರ್ವಹಿಸಲು, ಸದನದಿಂದ ದೂರವಿದ್ದಾರೆ ಎನ್ನುವ ಸುದ್ದಿಯಿದೆ.
ಆದರೆ, ಎಂಟು ಜನ ಗೈರಾಗಿರುವ ಶಾಸಕರಲ್ಲಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಬೆಂಗಳೂರಿನಲ್ಲಿ ಪಕ್ಷದ ಒಂದು ಆಧಾರಸ್ಥಂಭ ಎಂದೇ ಕರೆಯಲ್ಪಡುವ ರಾಮಲಿಂಗ ರೆಡ್ಡಿ ತಮ್ಮ ಪುತ್ರಿಯೊಂದಿಗೆ ಸದನದಲ್ಲಿ ಕಾಣಿಸಿಕೊಳ್ಳದೇ ಇರುವುದು, ಹಲವು ಊಹಾಪೋಹಕ್ಕೆ ಕಾರಣವಾಗಿದೆ.

ರಾಮಲಿಂಗ ರೆಡ್ಡಿಯವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿರಲಿಲ್ಲ
ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದಾಗ, ಹಿರಿಯ ಕಾಂಗ್ರೆಸ್ ಮುಖಂಡರಾದ, ಎಚ್ ಕೆ ಪಾಟೀಲ್, ಎಂ ಬಿ ಪಾಟೀಲ್, ರಾಮಲಿಂಗ ರೆಡ್ಡಿಯವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ತದನಂತರ ನಡೆದ ಸಂಪುಟ ವಿಸ್ತರಣೆಯಲ್ಲಿ ಎಂ ಬಿ ಪಾಟೀಲ್ ಆಯಕಟ್ಟಿನ ಗೃಹ ಖಾತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ರಾಮಲಿಂಗ ರೆಡ್ಡಿಗೆ ಸ್ಥಾನ ಸಿಕ್ಕಿರಲಿಲ್ಲ.

ಜಯನಗರ ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿ
ಎಚ್ ಕೆ ಪಾಟೀಲ್ ಅವರನ್ನು ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ರಾಮಲಿಂಗ ರೆಡ್ಡಿಯವರ ಪುತ್ರಿ, ಬೆಂಗಳೂರು ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿಯವರನನು ಅಖಿಲ ಭಾರತ ಮಹಿಳಾ ಕಾಂಗ್ರೆಸ್ಸಿನ ಜನರಲ್ ಸೆಕ್ರೆಟರಿಯಾಗಿ ನೇಮಕ ಮಾಡಲಾಗಿತ್ತು. ತಂದೆಗೆ ಸ್ಥಾನ ಸಿಗದೇ ಇದ್ದಿದ್ದಕ್ಕೆ ಸೌಮ್ಯಾ, ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು.

ದೆಹಲಿಯಲ್ಲಿ ಮಹಿಳಾ ಕಾಂಗ್ರೆಸ್ಸಿನ ಕಾರ್ಯಕ್ರಮ
ಮೂಲಗಳ ಪ್ರಕಾರ, ಮೈಸೂರಿನಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ರಾಮಲಿಂಗ ರೆಡ್ಡಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಇನ್ನು, ಸೌಮ್ಯ, ದೆಹಲಿಯಲ್ಲಿ ಮಹಿಳಾ ಕಾಂಗ್ರೆಸ್ಸಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾರೆ. ಹಾಗಾಗಿ, ಇವರಿಬ್ಬರ ಮೇಲೆ, ಕಾಂಗ್ರೆಸ್ ಸಂಶಯ ಪಡಬೇಕಾಗಿಲ್ಲ.

ಬಿಜೆಪಿಗೆ ಸೇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ
ಒಂದು ಶಾಸಕರಿಂದ ಹದಿನೈದು ಶಾಸಕರನ್ನು ಕಾಂಗ್ರೆಸ್ ಬೆಂಗಳೂರಿನಲ್ಲಿ ಹೊಂದಿದೆ. ಅದಕ್ಕೆ ನಮ್ಮ ತಂದೆಯವರೂ ಕಾರಣ. ನನ್ನ ತಂದೆಯವರನ್ನು ಮತ್ತು ಜಯನಗರ, ಬಿಟಿಎಂ ಲೇಔಟಿನ ಕಾರ್ಯಕರ್ತರು ಸಚಿವರನ್ನಾಗಿ ನೋಡಲು ಬಯಸುತ್ತಾರೆ. ನಾವು ಬಿಜೆಪಿಗೆ ಸೇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸೌಮ್ಯ ರೆಡ್ಡಿ ಹೇಳಿದ್ದರು.

ಮಲ್ಲೇಶ್ವರಂ ಕ್ಷೇತ್ರದ ಶಾಸಕ ಅಶ್ವತ್ಥ್ ನಾರಾಯಣ್
ಬಜೆಟ್ ಅಧಿವೇಶನದ ಮೊದಲ ದಿನ, ಬಿಜೆಪಿಯ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಅಶ್ವತ್ಥ್ ನಾರಾಯಣ್, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ ಅವರು ಆಪರೇಶನ್ ಕಮಲದ ನೇತೃತ್ವ ಹೊತ್ತಿದ್ದು, ಕಾಂಗ್ರೆಸ್ ನ ಅತೃಪ್ತ ಶಾಸಕರನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಂಡಿರುವ ಕಾರಣ ಸದನಕ್ಕೆ ಹಾಜರಾಗಿಲ್ಲ ಎಂದು ಮೂಲಗಳು ತಿಳಿಸಿವೆ.












Click it and Unblock the Notifications