ಲಾಕ್ ಡೌನ್: ಬಿಜೆಪಿಯವರು ಎಲ್ಲೆಲ್ಲಿ ದುಡ್ಡು ಬರುತ್ತೋ, ಅಲ್ಲೆಲ್ಲಾ ಓಪನ್ ಮಾಡುತ್ತಾರೆ
ಬೆಂಗಳೂರು, ಮೇ 27: ಜೂನ್ ಒಂದರಿಂದ ಧಾರ್ಮಿಕ ಕೇಂದ್ರಗಳನ್ನು ಓಪನ್ ಮಾಡುವ ನಿರ್ಧಾರಕ್ಕೆ ಬಂದಿರುವ ಯಡಿಯೂರಪ್ಪ ಸರಕಾರದ ಕ್ರಮದ ಬಗ್ಗೆ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಲೇವಡಿ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜವಾಹರಲಾಲ್ ನೆಹರೂ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಹರಿಪ್ರಸಾದ್, "ಲಾಕ್ ಡೌನ್ ಆರಂಭವಾದಾಗಿನಿಂದ ಇದುವರೆಗೆ, ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಯಾವುದೇ ಗೊತ್ತುಗುರಿ ಅನ್ನುವುದೇ ಇಲ್ಲ"ಎಂದು ಲೇವಡಿ ಮಾಡಿದರು.
"ದೇಗುಲ, ಚರ್ಚ್, ಮಸೀದಿ ಓಪನ್ ಮಾಡುವುದರಲ್ಲಿ ತಪ್ಪಿಲ್ಲ. ಆದರೆ, ದುಡ್ಡಿಗಾಗಿ ಈ ಕೆಲಸವನ್ನು ಯಡಿಯೂರಪ್ಪ ಸರಕಾರ ಮಾಡುತ್ತಿರುವಂತಿದೆ. ಎಲ್ಲೆಲ್ಲಿ ದುಡ್ಡು ಬರುತ್ತೋ, ಅಲ್ಲೆಲ್ಲಾ ಈ ಸರಕಾರ ನಿರ್ಬಂಧವನ್ನು ತೆಗೆದು ಹಾಕುತ್ತದೆ"ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.

"ದುಡ್ಡು ಎಲ್ಲಿ ಬರುತ್ತದೋ, ಅದು ಮೊದಲು ಬಿಜೆಪಿಯವರಿಗೆ ಕಾಣಿಸುತ್ತದೆ. ಮೊದಲು, ಹೋಟೆಲ್ ಉದ್ಯಮ ಆರಂಭಿಸಲು ಅನುಮತಿ ನೀಡಲಿ. ಇದನ್ನೇ ನಂಬಿಕೊಂಡಿರುವ ಲಕ್ಷಾಂತರ ಜನರಿದ್ದಾರೆ"ಎಂದು ಹರಿಪ್ರಸಾದ್, ಸರಕಾರವನ್ಮು ಒತ್ತಾಯಿಸಿದರು.
"ಕೊರೊನಾ ನಿರ್ವಹಣೆಯಲ್ಲಿ ಕರ್ನಾಟಕವೇ ಮಾದರಿ ಎಂದು ಯಡಿಯೂರಪ್ಪನವರು ಹೇಳುತ್ತಾರೆ. ಪುಣ್ಯಕ್ಕೆ ಇಲ್ಲೂ ಗುಜರಾತ್ ಮಾದರಿ ಎಂದು ಹೇಳದಿರುವುದು ಸಮಾಧಾನದ ವಿಷಯ"ಎಂದು ಹರಿಪ್ರಸಾದ್ ಅಭಿಪ್ರಾಯ ವ್ಯಕ್ತ ಪಡಿಸಿದರು.
ಕೊರೊನಾ ಹಾವಳಿಯ ನಂತರ, ಅಂದರೆ ಸುಮಾರು ಎರಡು ತಿಂಗಳು ಎಲ್ಲಾ ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈಗ, ರಾಜ್ಯದ ಎಲ್ಲಾ ದೇವಾಲಯಗಳನ್ನು ಭಕ್ತರಿಗೆ ತೆರೆಯಲು ಸರಕಾರ ನಿರ್ಧರಿಸಿತ್ತು.
ಮುಜರಾಯಿ ಮತ್ತು ಕಂದಾಯ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ, ಮಂಗಳವಾರ (ಮೇ 26) ಸಭೆ ನಡೆಸಿದ್ದರು. ಸಭೆಯ ನಂತರ ಈ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆಯನ್ನು ನೀಡಿದ್ದರು.












Click it and Unblock the Notifications