ಐಟಿ ದಾಳಿ : ಡಿಕೆಶಿ ಮನೆಯಲ್ಲಿ 2ನೇ ದಿನವೂ ಪರಿಶೀಲನೆ
ಬೆಂಗಳೂರು. ಆ.3 : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಎರಡನೇ ದಿನವೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ. ಬುಧವಾರ ಬೆಳಗ್ಗೆ ಮನೆ ಮೇಲೆ ಐಟಿ ದಾಳಿ ನಡೆದಿತ್ತು.
ತಡರಾತ್ರಿ ತನಕ ದಾಖಲೆಗಳ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಗುರುವಾರ ಬೆಳಗ್ಗೆ ಪುನಃ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ. ಸಚಿವರ ಮನೆಯಲ್ಲಿ ಸಿಕ್ಕಿರುವ ಐದು ಲಾಕರ್ ಗಳ ಪೈಕಿ ಇನ್ನೂ ಎರಡನ್ನು ತೆರದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಗೋವಿಂದರಾಜ್ ಡೈರಿ ಆಯ್ತು, ಈಗ ಡಿಕೆಶಿ ಲಾಕರ್ ಸರದಿǃ
ಡಿ.ಕೆ.ಶಿವಕುಮಾರ್ ಸಹೋದರ ಸಂಸದ ಡಿ.ಕೆ.ಸುರೇಶ್ ಈಗಲ್ಟನ್ ರೆಸಾರ್ಟ್ ನಿಂದ ತಡರಾತ್ರಿ ಸದಾಶಿವನಗರದ ನಿವಾಸಕ್ಕೆ ಆಗಮಿಸಿದರು. 'ಈ ದಾಳಿಗೆಲ್ಲ ಬೆದರುವ ಮನುಷ್ಯ ಡಿ.ಕೆ.ಶಿವಕುಮಾರ್ ಅಲ್ಲ. ಕಾನೂನಿನ ಚೌಕಟ್ಟಿನಲ್ಲಿ ವ್ಯವಹಾರ ಮಾಡಿದ್ದೇವೆ' ಎಂದರು.
ಅತ್ತ ಆರ್.ಟಿ.ನಗರದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಆಪ್ತರಾದ ಜ್ಯೋತಿಷಿ ದ್ವಾರಕಾನಾಥ್, ಮೈಸೂರಿನಲ್ಲಿರುವ ಡಿ.ಕೆ.ಶಿವಕುಮಾನೆರ್ ಮಾವ ತಿಮ್ಮಯ್ಯ ನಿವಾಸದಲ್ಲಿಯೂ ಗುರುವಾರ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.
ಕಾಂಗ್ರೆಸ್ ಪಕ್ಷ ಬಿಜೆಪಿ ರಾಜಕೀಯ ಮಾಡಲು ಐಟಿ ದಾಳಿ ನಡೆಸಿದೆ ಎಂದು ಆರೋಪ ಮಾಡಿದ್ದು, ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಸದಾಶಿವ ನಗರದಲ್ಲಿರುವ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಅಭಿಮಾನಿಗಳು ಮನೆಯ ಬಳಿ ಜಯಾಯಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.