ಚಿಕ್ಕಬಳ್ಳಾಪುರ 'ಸ್ಕೋರ್–2026': ಕಾರ್ಡಿಯೊಥೊರಾಸಿಕ್ ಯುವ ಶಸ್ತ್ರವೈದ್ಯರಿಗೆ ಜಾಗತಿಕ ತಜ್ಞರ ಮಾರ್ಗದರ್ಶನ
ಚಿಕ್ಕಬಳ್ಳಾಪುರ: ಇಲ್ಲಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿರುವ ಭಾರತದ ಮೊದಲ ಉಚಿತ ಗ್ರಾಮೀಣ ವೈದ್ಯಕೀಯ ಕಾಲೇಜಿನಲ್ಲಿ ಜಾಗತಿಕ ಕಾರ್ಡಿಯೊಥೊರಾಸಿಕ್ ತಜ್ಞರು ಒಂದೇ ವೇದಿಕೆಯಲ್ಲಿ ಸೇರಿ, ಮುಂದಿನ ತಲೆಮಾರಿನ ಹೃದಯ ಶಸ್ತ್ರವೈದ್ಯರಿಗೆ ಎರಡು ದಿನಗಳ ವಿಶೇಷ ತರಬೇತಿ ನೀಡುವ 'ಸ್ಕೋರ್-2026' ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದ ಉದ್ದೇಶವೇನು? ಯಾರೆಲ್ಲ ಭಾವಹಿಸಿದ್ದರು ಎಂಬ ಮಾಹಿತಿ ಇಲ್ಲಿದೆ.
ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಈ ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿ ದೇಶ-ವಿದೇಶಗಳ ಖ್ಯಾತ ಹೃದಯ ಮತ್ತು ಥೊರಾಸಿಕ್ ಶಸ್ತ್ರಚಿಕಿತ್ಸಾ ತಜ್ಞರು ಪಾಲ್ಗೊಂಡು ಒಂದಷ್ಟು ಮಾಹಿತಿ ಹಂಚಿಕೊಂಡರು. ಅಂತಿಮ ವರ್ಷದ ಕಾರ್ಡಿಯೊಥೊರಾಸಿಕ್ ಶಸ್ತ್ರಚಿಕಿತ್ಸಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ, ವೈದ್ಯಕೀಯ ಜ್ಞಾನ ವೃದ್ಧಿ ಹಾಗೂ ಕ್ಲಿನಿಕಲ್ ಕೌಶಲ್ಯಾಭಿವೃದ್ಧಿ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಿದ್ದ ವಿಶೇಷವಾಗಿತ್ತು.

ಮುಖ್ಯ ಅತಿಥಿಯಾಗಿ ಇಸ್ರೋ ವಿಜ್ಞಾನಿ ಹಾಗೂ ಪದ್ಮಶ್ರೀ ಪುರಸ್ಕೃತ ಮೈಲ್ಸ್ವಾಮಿ ಅಣ್ಣಾದುರೈ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಈ ಸಂಸ್ಥೆಯಲ್ಲಿ ಯಾವುದೇ ಬಿಲ್ ಕೌಂಟರ್ ಇಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದನ್ನು ಅವರು ಶ್ಲಾಘಿಸಿದರು. ಕೃತಕ ಬುದ್ಧಿಮತ್ತೆ (ಎಐ) ವೈದ್ಯಕೀಯ ಕ್ಷೇತ್ರದಲ್ಲಿ ಇನ್ನಷ್ಟು ಕ್ರಾಂತಿಕಾರಿ ಬದಲಾವಣೆಗಳನ್ನು ತರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
12 ವರ್ಷಗಳಿಂದ ಜಾಗತಿಕ ತಜ್ಞರಿಂದ ಮಾರ್ಗದರ್ಶನ
ಫಿಜಿ ದೇಶದಲ್ಲಿರುವ ಕಾರಣ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಆನ್ಲೈನ್ ಮೂಲಕ ಮಾತನಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಳೆದ 12 ವರ್ಷಗಳಿಂದ 'ಸ್ಕೋರ್' ಕಾರ್ಯಕ್ರಮದ ಮೂಲಕ ಯುವ ಶಸ್ತ್ರವೈದ್ಯರಿಗೆ ಜಾಗತಿಕ ತಜ್ಞರ ಮಾರ್ಗದರ್ಶನ ದೊರೆಯುತ್ತಿದೆ ಎಂದ ಅವರು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ನೇರ ಹಾಗೂ ಆನ್ಲೈನ್ ಮೂಲಕ ಭಾಗವಹಿಸುವಂತೆ ಕಾರ್ಯಕ್ರಮವನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗಿದೆ. ಭಾನುವಾರ ಥೊರಾಸಿಕ್ ಶಸ್ತ್ರಚಿಕಿತ್ಸೆ ಮತ್ತು ಹೃದಯ ರಚನೆಶಾಸ್ತ್ರ ಕುರಿತ ಅಧಿವೇಶನಗಳು ನಡೆಯಲಿವೆ. ಭಾಗವಹಿಸುವವರಿಗೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ನ ಕ್ರೆಡಿಟ್ ಪಾಯಿಂಟ್ಗಳನ್ನು ಮಂಜೂರು ಮಾಡಲಾಗಿದೆ.
ಉಚಿತ ಆರೋಗ್ಯ ಸೇವೆ ಮತ್ತು ಮೌಲ್ಯಾಧಾರಿತ ವೈದ್ಯಕೀಯ ಶಿಕ್ಷಣದ ದಾರಿದೀಪರಾಗಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಪ್ರೇರಣೆ ಮತ್ತು ಸೇವಾ ಸಂಕಲ್ಪದ ಫಲವಾಗಿ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಅತ್ಯಾಧುನಿಕ ವೈದ್ಯಕೀಯ ಶಿಕ್ಷಣ ಕೇಂದ್ರವಾಗಿ ರೂಪುಗೊಂಡಿದೆ. 'ಒನ್ ವರ್ಲ್ಡ್, ಒನ್ ಫ್ಯಾಮಿಲಿ' ಮಿಷನ್ ಅಡಿಯಲ್ಲಿ ಎಸ್ಎಂಎಸ್ಐಎಂಎಸ್ಆರ್ನ ಅಕಾಡೆಮಿಕ್ಸ್ ವಿಭಾಗದ ನಿರ್ದೇಶಕ ಡಾ. ಸತೀಶ್ ಕುಮಾರ್ ಹಾಗೂ ಮುಖ್ಯ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಸಿ.ಎಸ್. ಹಿರೇಮಠ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ನಾಳೆ ಭಾನುವಾರವು ಮುಂದುವರಿಯಲಿದೆ.
ಕಾರ್ಯಕ್ರಮಕ್ಕೆ ಜಯದೇವ ಸಂಸ್ಥೆಯ ಪ್ರೊ. ಪಿ.ಎಸ್. ಸೀತಾರಾಮ ಭಟ್, ಮುಂಬೈನ ಪ್ರೊ. ಅನಿಲ್ ಜಿ. ತೆಂಡೂಲ್ಕರ್ ಸೇರಿದಂತೆ ಅನೇಕ ಗಣ್ಯರು ಸಾಕ್ಷಿಯಾಗಿದರು.













Click it and Unblock the Notifications