ಒಳಮೀಸಲಾತಿ: ಸಿದ್ದರಾಮಯ್ಯ ಪರಿಶಿಷ್ಟ ಸಮುದಾಯಗಳತ್ತ ತಿರುಗಿಯೂ ನೋಡಿಲ್ಲ: ಬಸವರಾಜ ಬೊಮ್ಮಾಯಿ
ಬೆಂಗಳೂರು, ಡಿಸೆಂಬರ್ 14: ಪರಿಶಿಷ್ಟ ಸಮುದಾಯಗಳತ್ತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಣ್ಣೋರಸುವುದಿರಲಿ, 5 ವರ್ಷಗಳ ಕಾಲ ಅವರ ಕಡೆ ತಿರುಗಿಯೂ ನೋಡಿರಲಿಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಳಮೀಸಲಾತಿಗೆ ಸಚಿವ ಸಂಪುಟ ಉಪಸಮಿತಿ ರಚಿಸಿರುವುದು ಕಣ್ಣೊರೆಸುವ ತಂತ್ರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯ ಮಂತ್ರಿಗಳು ಸಿದ್ದರಾಮಯ್ಯ ಅವರು ಈ ಕುರಿತ ವರದಿಯನ್ನು ತೆಗೆದು ನೋಡುವ ಧೈರ್ಯ ಇರಲಿಲ್ಲ. ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಬರೀ ದೀಪ ಹಚ್ಚಿ ಮಾತನಾಡದೆ ಬಂದರು. ಇಂಥವರಿಂದ ನಾವು ಪಾಠ ಕಲಿಯಬೇಕಿಲ್ಲ. ನಮ್ಮ ಬದ್ಧತೆ ಏನೆಂದು ಎಲ್ಲಾ ಸಮುದಾಯಗಳಿಗೆ ತಿಳಿದಿದೆ. ಕಾನೂನು ಸ್ಥಾನಮಾನವೂ ನಮಗೆ ತಿಳಿದಿದೆ. ಇಂಥ ಪ್ರಮುಖ ವಿಚಾರಗಳಲ್ಲಿ ನಿರ್ಣಯ ಕೈಗೊಳ್ಳುವ ದಿಟ್ಟತನ ಸರ್ಕಾರಕ್ಕಿದೆ ಎಂದು ತೋರಿಸಿದ್ದೇವೆ. ಇನ್ನೊಬ್ಬರ ಬಗ್ಗೆ ಮಾತನಾಡುವ ಮುನ್ನ ಸಿದ್ದರಾಮಯ್ಯ ಹಿಂತಿರುಗಿ ನೋಡಿದರೆ ಉತ್ತಮ ಎಂದರು.

ಎಸ್ಸಿ ಒಳಮೀಸಲಾತಿ ಬೇಡಿಕೆ; ಉಪ ಸಮಿತಿ ರಚನೆ ಮಾಡಿ ಸರ್ಕಾರದ ಆದೇಶ
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಮಾಡುವ ಕುರಿತು ರಾಜ್ಯ ಸರ್ಕಾರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪಸಮಿತಿಯನ್ನು ರಚಿಸಿದೆ. ನ್ಯಾ ಎಜೆ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ನಡೆಯುತ್ತಿರುವ ಬೆನ್ನಲ್ಲೇ ಸರ್ಕಾರ ಈ ನಿರ್ಧಾರವನ್ನ ಕೈಗೊಂಡಿದೆ.
ಇನ್ನೂ ಸಮಿತಿಗೆ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷರಾದರೆ ಸಚಿವರಾದ ಗೋವಿಂದ ಎಂ.ಕಾರಜೋಳ, ಎಸ್.ಅಂಗಾರ, ಪ್ರಭು ಚವ್ಹಾಣ್ ಹಾಗೂ ಡಾ.ಕೆ.ಸುಧಾಕರ್ ಅವರು ಸದಸ್ಯರಾಗಿದ್ದಾರೆ. ಈ ಸಮಿತಿಯು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಸಂಬಂಧ ಪರಿಶೀಲಿಸಿ ಸರ್ಕಾರಕ್ಕೆ ಸೂಕ್ತ ಶಿಫಾರಸ್ಸುಗಳನ್ನು ಮಾಡಬೇಕೆಂದು ಅಧಿಸೂಚನೆಯಲ್ಲಿ ಹೊರಡಿಸಲಾಗಿದೆ.

ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈ ಬಗ್ಗೆ ವರದಿಯನ್ನ ಸಲ್ಲಿಸಲಾಗಿತ್ತು. ಪರಿಶಿಷ್ಟ ಜಾತಿಯನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಲಾಗಿತ್ತು. ಎ ವರ್ಗದಲ್ಲಿನ ಎಡಗೈ ಉಪ ಪಂಗಡಗಳಿಗೆ ಶೇ. 6ರಷ್ಟು, ಬಿ ವರ್ಗದಲ್ಲಿ ಸೇರ್ಪಡೆಯಾಗಲಿದೆ ಎಂದು ಹೇಳಲಾದ ಬಲಗೈ ಉಪಪಂಗಡಗಳಿಗೆ ಶೇ.5 ರಷ್ಟು, ಭೋವಿ ಮತ್ತು ಲಂಬಾಣಿ ಸಮುದಾಯಕ್ಕೆ ಶೇ.3 ಹಾಗೂ ಇತರ ಉಪಜಾರಿಗಳಿಗೆ ಶೇ.1 ರಷ್ಟು ಮೀಸಲಾತಿಯನ್ನು ನೀಡಬೇಕೆಂದು ಆಯೋಗ ಶಿಫಾರಸ್ಸು ಮಾಡಿತ್ತು. ಆದರೆ ಈ ಆಯೋಗದ ಶಿಫಾರಸ್ಸಿಗೆ ಪರ- ವಿರೋಧ ವ್ಯಕ್ತವಾಗಿದ್ದರಿಂದ ವರದಿಯನ್ನ ಅನುಷ್ಠಾನ ಮಾಡಲು ಸರ್ಕಾರ ಹಿಂದೇಟು ಹಾಕಿತ್ತು. ಇದೀಗ ರಾಜ್ಯ ಸರ್ಕಾರ ಸಂಪುಟ ಉಪಸಮತಿಯನ್ನು ರಚಿಸಿರುವುದು ವಿಶೇಷವಾಗಿದೆ.












Click it and Unblock the Notifications