Santro Ravi : ಸ್ಯಾಂಟ್ರೊ ರವಿಯನ್ನು ಸಿಐಡಿ ವಶಕ್ಕೆ ನೀಡಿದ ಕೋರ್ಟ್
ಬೆಂಗಳೂರು, ಜನವರಿ 17; ಸ್ಯಾಂಟ್ರೊ ರವಿಯನ್ನು ಸಿಐಡಿ ವಶಕ್ಕೆ ನೀಡಿ ಮೈಸೂರಿನ ಕೋರ್ಟ್ ಆದೇಶ ಹೊರಡಿಸಿದೆ. ಆತನ ವಿರುದ್ಧದ ಎಲ್ಲಾ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು.
ಮಂಗಳವಾರ ಸಿಐಡಿ ಪೊಲೀಸರು ಮೈಸೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸ್ಯಾಂಟ್ರೊ ರವಿಯನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು.
ಕೋರ್ಟ್ ಸಿಐಡಿ ಪೊಲೀಸರು ಮನವಿಗೆ ಒಪ್ಪಿಗೆ ನೀಡಿತು. ಜನವರಿ 30ರ ತನಕ ಆರೋಪಿಯನ್ನು ಸಿಐಡಿ ವಶಕ್ಕೆ ನೀಡಿ ಆದೇಶ ಹೊರಡಿಸಿತು. ಪೊಲೀಸರು ಸ್ಯಾಂಟ್ರೊ ರವಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಹೆಚ್ಚಿನ ವಿಚಾರಣೆ ನಡೆಸುವ ನಿರೀಕ್ಷೆ ಇದೆ.

ಮೈಸೂರಿನ ವಿಜಯನಗರ ಠಾಣೆಯಲ್ಲಿ ಸ್ಯಾಂಟ್ರೊ ರವಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ತಲೆಮರೆಸಿಕೊಂಡಿದ್ದ ಆತನನ್ನು ಪೊಲೀಸರು ಶುಕ್ರವಾರ ಗುಜರಾತ್ನಲ್ಲಿ ಬಂಧಿಸಿದ್ದರು. ಶನಿವಾರ ಮುಂಜಾನೆ ಮೈಸೂರಿಗೆ ಕರೆತರಲಾಗಿತ್ತು.
ಸೋಮವಾರ ಕೋರ್ಟ್ ಸ್ಯಾಂಟ್ರೊ ರವಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಬಳಿಕ ಕರ್ನಾಟಕ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಮಂಗಳವಾರ ಬೆಳಗ್ಗೆ ಸಿಐಡಿ ಪೊಲೀಸರು ಮೈಸೂರಿನ ವಿಜಯನಗರ ಪೊಲೀಸರಿಂದ ಪ್ರಕರಣದ ಕಡತಗಳನ್ನು ಪಡೆದಿದ್ದರು.
ತಮ್ಮ ವಿರುದ್ಧ ಪ್ರಕರಣ ದಾಖಲಾದ ಬಳಿಕ ಸ್ಯಾಂಟ್ರೊ ರವಿ ಮೈಸೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀಜು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಕೋರ್ಟ್ ಅರ್ಜಿ ವಿಚಾರಣೆಯನ್ನು ಜನವರಿ 17ಕ್ಕೆ ಮುಂದೂಡಿತ್ತು.
ಜನವರಿ 13ರಂದು ಗುಜರಾತ್ನಲ್ಲಿ ಸ್ಯಾಂಟ್ರೊ ರವಿ ಬಂಧಿಸಲಾಗಿತ್ತು. ಶನಿವಾರ ಪೊಲೀಸರು ಕರ್ನಾಟಕಕ್ಕೆ ಆತನನ್ನು ಕರೆತಂದಿದ್ದರು. ದೂರು ಮೈಸೂರಿನಲ್ಲಿ ದಾಖಲಾದ ಕಾರಣ ಮೈಸೂರು ಪೊಲೀಸರು ತನಿಖೆ ಆರಂಭಿಸಿದ್ದರು.
ಸರ್ಕಾರ ಎಚ್ಚರಿಕೆ ವಹಿಸಲಿ; ಸ್ಯಾಂಟ್ರೊ ರವಿಯನ್ನು ಸಿಐಡಿ ಕಸ್ಟಡಿಗೆ ನೀಡಿದ ಕ್ರಮವನ್ನು ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ಸ್ವಾಗತಿಸಿದ್ದಾರೆ. "ಸಿಐಡಿ ತನಿಖೆಗೆ ನೀಡಿರುವುದನ್ನು ಸ್ವಾಗತಿಸುತ್ತೇನೆ. ಆದರೆ ಸರ್ಕಾರ ಸೂಕ್ತ ಎಚ್ಚರ ವಹಿಸಬೇಕು. ಸಿಐಡಿಯಲ್ಲಿಯೂ ಆತನಿಗೆ ಸಹಕರಿಸುವವರು ಇದ್ದಾರೆ" ಎಂದು ಹೇಳಿದ್ದಾರೆ.












Click it and Unblock the Notifications