ಸಂತೋಷ್ ಲಾಡ್ ರಾಜೀನಾಮೆಗೆ ಹಿರೇಮಠ್ ಆಗ್ರಹ

ಬುಧವಾರ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಸ್.ಆರ್.ಹಿರೇಮಠ್, ಬೆಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಸಚಿವ ಸಂತೋಷ್ ಲಾಡ್ ಅವರ ಹೆಸರಿದೆ. ಆದ್ದರಿಂದ ಅವರು ರಾಜೀನಾಮೆ ನೀಡಬೇಕು ಎಂದರು.
ಮೂಲಭೂತ ಸೌಕರ್ಯ ಮತ್ತು ವಾರ್ತಾ ಸಚಿವ ಸಂತೋಷ್ ಲಾಡ್ ಅವರು, ಬೆಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಹಿರೇಮಠ್, ದಾಖಲೆ ಬಿಡುಗಡೆ ಮಾಡಿದರು. ಲೋಕಾಯುಕ್ತ ವರದಿಯಲ್ಲಿ ವಿ.ಎಸ್.ಲಾಡ್ ಅಂಡ್ ಕಂಪನಿ ಅಕ್ರಮ ಅದಿರು ದಾಸ್ತಾನು ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದೆ.
ಲೋಕಾಯುಕ್ತರು ನೀಡಿರುವ ವರದಿಯ 2ನೇ ಅಧ್ಯಾಯದಲ್ಲಿ ಸಂತೋಷ್ ಲಾಡ್ ಒಡೆತನದ ವಿ.ಎಸ್.ಲಾಡ್ ಕಂಪನಿಯ ಕುರಿತು ಉಲ್ಲೇಖಿಸಲಾಗಿದೆ ಎಂದು ಹಿರೇಮಠ್ ಹೇಳಿದರು. ವಿ.ಎಸ್.ಲಾಡ್ ಅಂಡ್ ಕಂಪನಿಯನ್ನು ಗಣಿಗಾರಿಕೆ ವಿಚಾರದಲ್ಲಿ ಬಿ ಕೆಟಗರಿಗೆ ಸೇರಿಸುವುದಕ್ಕೆ ಸುಪ್ರೀಂಕೋರ್ಟ್ ನಿರಾಕರಿಸಿದೆ.
ಸಿ ಕೆಟಗರಿಯಲ್ಲಿ ಲಾಡ್ ಅವರ ಕಂಪನಿಯನ್ನು ಸೇರಿಸಿರುವ ಸುಪ್ರೀಂಕೋರ್ಟ್, ಕಂಪನಿ ಮಾಡಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಿದೆ. ಇಂತಹ ಆರೋಪ ಎದುರಿಸುತ್ತಿರುವ ಸಂತೋಷ್ ಲಾಡ್ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಮುಂದುವರೆಯಬಾರದು ಎಂದು ಹಿರೇಮಠ್ ಹೇಳಿದರು.
ಕೆಲವು ದಿನಗಳ ಹಿಂದೆ ಸಂತೋಷ್ ಲಾಡ್ ಸಹೋದರ ಅನಿಲ್ ಲಾಡ್, ಲೋಕಾಯುಕ್ತ ವರದಿಯಲ್ಲಿ ಸಂತೋಷ್ ಲಾಡ್ ಹೆಸರಿದೆ ಆದರೂ, ಅವರು ಸಚಿವರಾಗಿದ್ದಾರೆ ಎಂದು ಆರೋಪಿಸಿದ್ದರು. ಸಂತೋಷ್ ಲಾಡ್ ಲೋಕಾಯುಕ್ತ ವರದಿಯಲ್ಲಿ ನನ್ನ ಹೆಸರಿಲ್ಲ. (ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ ಅನಿಲ್ ಲಾಡ್!)
ಗಣಿಗಾರಿಕೆ ಪ್ರಕರಣದಲ್ಲಿ ನಾನು ಭಾಗಿಯಾಗಿದ್ದರೆ, ಆ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಬುಧವಾರ ಹಿರೇಮಠ್, ಸಂತೋಷ್ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ನನ್ನ ಹೆಸರಿಲ್ಲ ಸಚಿವರು : ಎಸ್.ಆರ್.ಹಿರೇಮಠ್ ಆರೋಪವನ್ನು ಸಚಿವ ಸಂತೋಷ್ ಲಾಡ್ ನಿರಾಕರಿಸಿದ್ದಾರೆ. ಆರ್ ಟಿಐ ಮೂಲಕ ಅಕ್ರಮ ಗಣಿಗಾರಿಕೆ ವರದಿಯ ಲೋಕಾಯುಕ್ತ ವರದಿಯನ್ನು ನಾನು ಪಡೆದಿದ್ದೇನೆ. ನನ್ನ ವಿರುದ್ಧ ದಾಖಲೆಗಳಿದ್ದರೆ, ಅದನ್ನು ಹಿರೇಮಠ್ ಅವರು ಬಿಡುಗಡೆ ಮಾಡಲಿ ಎಂದು ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications