ಮೋದಿ ಸರ್ಕಾರವೇ ಉರುಳುತ್ತೆ! ಸಿಎಂ ಬದಲಾವಣೆ ಬಗ್ಗೆ ಸಂತೋಷ್ ಲಾಡ್ ರಿಯಾಕ್ಷನ್
ಹುಬ್ಬಳ್ಳಿ, ಸೆಪ್ಟಂಬರ್ 10: ಕರ್ನಾಟಕ ರಾಜಕಾರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಖುರ್ಚಿ ಅಲುಗಾಡುತ್ತಿದೆ. ಸಿಎಂ ಬದಲಾಗುತ್ತಾರೆ ಎಂಬೆಲ್ಲ ಚರ್ಚೆಗಳು ಕೇಳಿ ಬರುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಕೇಂದ್ರ ಸರ್ಕಾರ ಶೀಘ್ರವೇ ಪತನವಾಗಲಿದೆ ಎಂದು ಬಾಂಬ್ ಸಿಡಿಸಿದ್ದಾರೆ. ಜೊತೆಗೆ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಸೋಲಾಗಲಿದೆ ಅಂತಲೂ ಅವರು ಭವಿಷ್ಯ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮುಂದಿರುವ ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ NDA ಸರ್ಕಾರ ಪತನವಾಗುವ ಸಾಧ್ಯತೆಗಳಿವೆಯೇ ಹೊರತು ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಅಲ್ಲ ಎಂದು ಹೇಳಿದ್ದಾರೆ.

ಜಮ್ಮು ಕಾಶ್ಮೀರ, ಹರಿಯಾಣ ವಿಧಾನಸಭೆಗೆ ಈಗಾಗಲೇ ಚುನಾವಣೆ ಘೋಷಣೆಯಾಗಿದೆ. ಇಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಸೋಲಲಿದೆ. ಮುಂಬರುವ ಮಹಾರಾಷ್ಟ್ರ ಹಾಗೂ ಬಿಹಾರ ಚುನಾವಣೆಯಲ್ಲೂ ಬಿಜೆಪಿ ಸೋಲಬಹುದು ಎಂದು ತಿಳಿಸಿದರು.
ಸರ್ಕಾರ ಬೀಳುವ ಪ್ರಶ್ನೆಯೇ ಇಲ್ಲ
ಇನ್ನೂ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿಯವರು ಹೇಳಿಕೊಂಡು ಬರುತ್ತಲೇ ಇದ್ದಾರೆ. ಅವರದ್ದು ಬರೀ ಅದೇ ಕೆಲಸ. ನಾವು 136 ಶಾಸಕರಿದ್ದೇವೆ. ಯಾವುದೇ ಕಾರಣಕ್ಕೂ ಸರ್ಕಾರ ಬೀಳುವ ಪ್ರಶ್ನೆಯೇ ಇಲ್ಲ. ನಾನು ಮುಖ್ಯಮಂತ್ರಿಯಾಗಬಲ್ಲೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವೈಯಕ್ತಿಕ. ಸಿಎಂ ಸಿದ್ದರಾಮಯ್ಯ ನವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕರು, ಬಹುತೇಕ ಸಚಿವರು ಮುಖ್ಯಮಂತ್ರಿ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹೇಳಿದ್ದರು ಅದು ಅವರ ವೈಯಕ್ತಿಕ ವಿಚಾರ. ಸಿಎಂ ಬದಲಾವಣೆ ವಿಚಾರ ಯಾವುದೇ ಪ್ರಸ್ತಾಪ ಆಗಿಲ್ಲ.
ಈಗಾಗಲೇ ಪಕ್ಷದ ಹಿರಿಯ ನಾಯಕರಾದ ಸುರ್ಜೇವಾಲ್, ವೇಣುಗೋಪಾಲ ಸಹ ಬಂದು ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಮುಡಾ: ಸಿಎಂ ಪತ್ನಿಗೆ ಮಾತ್ರ ಕಾನೂನು ಅನ್ವಯವೇ?
ಮುಡಾ ಪ್ರಕರಣ, ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಪಷ್ಟನೆ ಕೊಡಲಾಗಿದೆ. ಮುಡಾ ಹಗರಣದಲ್ಲಿ ಏನಾಗಿದೆ ಎಲ್ಲರಿಗೂ ಗೊತ್ತು ಈ ಬಗ್ಗೆ ಕಾನೂನಾತ್ಮಕ ಹೋರಾಟ ಸಹ ನಡೆದಿದೆ. ಅಲ್ಲಿ 105 ಸೈಟ್ ಗಳಿಗೆ ಯಾವುದೇ ಕಾನೂನು ಅನ್ವಯ ಆಗಲ್ಲ, ಕೇವಲ ಸಿದ್ದರಾಮಯ್ಯಾ ಅವರ ಪತ್ನಿ ಅವರಿಗೆ ಮಾತ್ರ ಯಾಕೆ ಅನ್ವಯ ಆಗುತ್ತದೆ? ಎಂದು ಅವರು ಪ್ರಶ್ನಿಸಿದರು.
ಅಕ್ಕಿ ವಿಚಾರದಲ್ಲಿ ಕೇಂದ್ರ ರಾಜಕೀಯ: ಲಾಡ್ ಗರಂ
ಇನ್ನು ಕೇಂದ್ರದಿಂದ ರಾಜ್ಯಕ್ಕೆ ಅಕ್ಕಿ ಈಗ ಕೊಡಲು ಒಪ್ಪಿದ್ದಾರೆ. ಆದರೆ ಮುಖ್ಯಮಂತ್ರಿಗಳೆ ಸ್ವೀಕರಿಸುತ್ತಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಈಗ ಅಕ್ಕಿ ಕೊಡಲು ಬಂದಿದ್ದು, ನಾವು ಕೇಳಿದಾಗ ಕೊಡಲಿಲ್ಲ ಯಾಕೆ? ಆಗಲೇ ಅಕ್ಕಿ ಸಂಗ್ರಹ ಇತ್ತು. ಈಗಾಗಲೇ ನಾವು ಜನರಿಗೆ ಅಕ್ಕಿ ಬದಲಾಗಿ ಹಣ ಫಲಾನುಭವಿಗಳ ಖಾತೆಗೆ ಹಾಕುತ್ತಿದ್ದೇವೆ ಎಂದು ಬಿಜೆಪಿಗೆ ತಿರುಗೇಟು ಕೊಟ್ಟರು.
ಅಕ್ಕಿ ವಿಚಾರದಲ್ಲೂ ರಾಜಕಾರಣ ಮಾಡಲಾಗುತ್ತಿದೆ. ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದವರು ಯಾರು? ಉಚಿತವಾಗಿ ಅಕ್ಕಿ ವಿತರಣೆ ಮಾಡುವ ಯೋಜನೆಗೆ ಜಾರಿಗೆ ತಂದವರು ನಾವು. ಆದ್ದರಿಂದ ಪ್ರಹ್ಲಾದ್ ಜೋಶಿ ಅವರು ಈ ಬಗ್ಗೆ ಮೊದಲು ತಿಳಿದುಕೊಂಡು ಮಾತನಾಡಲಿ ಎಂದರು.
ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಏನಾಗಿದೆ? ಎಂಬುದಕ್ಕೆ ಮೊದಲು ಸ್ಪಷ್ಟನೆ ಕೊಡಲಿ. ಎಲ್ಲವನ್ನೂ ಟ್ಯಾಬ್ ಹಾಗೂ ಕಂಪ್ಯೂಟರ್ ಮೂಲಕ ನೋಡುತ್ತಾರೆ ಬಡವರು ಎಷ್ಟು ಇದ್ದಾರೆ? ಇಲ್ಲಿ ಸಮಸ್ಯೆ ಏನು ಬಗೆಹರಿದಿವೆ ಎಂಬುದನ್ನು ಅಂಕಿ ಸಂಖ್ಯೆ ಸಮೇತ ಉತ್ತರ ಕೊಡಲಿ ಎಂದು ಅವರು ಸವಾಲು ಹಾಕಿದರು.












Click it and Unblock the Notifications