ಸಂತೋಷ್ ಲಾಡ್ & ಜಾರಕಿಹೊಳಿ ರಹಸ್ಯ ಭೇಟಿ: ಸಿದ್ದರಾಮಯ್ಯ ಕುರ್ಚಿ ಅಲುಗಾಡುವುದು ಪಕ್ಕಾ!
ಧಾರವಾಡ, ಸೆಪ್ಟಂಬರ್ 12: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾಣೆಯ ಸುದ್ದಿ ಸದ್ಯಕ್ಕೆ ತಣ್ಣಗಾಗುವುದು ಅನುಮಾನ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ರೇಸ್ನಲ್ಲಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಇತರ ಶಾಸಕರು ಸಿಎಂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಹೇಳುತ್ತಿರುವ ಮಧ್ಯಯೇ ಇಬ್ಬರು ಸಚಿವರು ಗುಟ್ಟಾಗಿ ಸಭೆ ನಡೆಸಿರುವುದು ಅನುಮಾನ ಸೃಷ್ಟಿಸಿದೆ. ಸಿಎಂ ಕುರ್ಚಿ ಅಲುಗಾಡುವುದು ಪಕ್ಕ ಎನ್ನಲಾಗಿದೆ.
ಕಾರ್ಮಿಕ ಸಚಿವ ಹಾಗೂ ಧಾರವಾಡ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ತಡರಾತ್ರಿ ಭೇಟಿಯಾಗಿದ್ದಾರೆ. ಧಾರವಾಡದ ಕೋರ್ಟ್ ಬಳಿ ಇರುವ ಕೆಫೆಯೊಂದರಲ್ಲಿ ಉಭಯ ನಾಯಕರು ರಹಸ್ಯವಾಗಿ ಭೇಟಿಯಾಗಿದ್ದು, ರಾಜಕೀಯ ವಿಷಯಗಳು, ಸಿಎಂ ಸ್ಥಾನದ ಪೈಪೋಟಿ ಬಗ್ಗೆ ಹಲವು ಬಿಸಿ ಬಿಸಿ ಚರ್ಚೆಗಳಾಗಿವೆ ಎಂದು ತಿಳಿದು ಬಂದಿದೆ.

ಕಾರ್ಯಕರ್ತರನ್ನು ಹೊರ ಕಳುಹಿಸಿ ಚರ್ಚೆ
ನಾಯಕರು ರಹಸ್ಯ ಚಹಾ ಕೂಟ ನಡೆಸುವುದರ ಜೊತೆಗೆ ರಹಸ್ಯ ಮಾತುಕತೆಯು ನಡೆಸಿದ್ದಾರೆ. ಕೆಲ ಕಾಲ ಪಕ್ಷದ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ. ನಂತರ ಕಾರ್ಯಕರ್ತರನ್ನು ಕೆಫೆಯಿಂದ ಹೊರ ಕಳುಹಿಸಿ ಇಬ್ಬರೇ ರಹಸ್ಯ ಮಾತುಕತೆ ಕೂಡ ನಡೆಸಿದ್ದಾರೆ. ಜಾರಕಿಹೊಳಿ ಸಿಎಂ ಸ್ಥಾನದ ವಿಚಾರ ಬಗ್ಗೆಯು ಮಾತುಕತೆಗಳು ನಡೆದಿವೆ ಎನ್ನಲಾಗಿದೆ.
ಇನ್ನೂ ಸಚಿವ ಸಂತೋಷ ಲಾಡ್ ಅವರನ್ನು ಭೇಟಿ ಆಗಬೇಕೆಂದೆ ಸಚಿವ ಸತೀಶ ಜಾರಕಿಹೊಳಿ ಅವರು ಧಾರವಾಡಕ್ಕೆ ಬಂದಿದ್ದರು ಎನ್ನಲಾಗಿದೆ. ಸದ್ಯ ಇಬ್ಬರೂ ಸಚಿವರ ಮಧ್ಯೆ ನಡೆದಿರುವ ಮಾತುಕತೆ ರಾಜಕೀಯದಲ್ಲಿ ಮತ್ತಷ್ಟು ಸಂಚಲನ ಸೃಷ್ಟಿಸುವುದರಲ್ಲಿ, ತೀವ್ರ ಕುತೂಹಲ ಕೆರಳಿಸಿರುವುದರಲ್ಲಿ ಅನುಮಾನ ಇಲ್ಲ.
ಸಚಿವರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೂಳಿ ಅವರು ಈ ಭೇಟಿ ಅಂತಹ ವಿಶೇಷವೇನು ಇಲ್ಲ. ನಾವಿಬ್ಬರು ಸಿಕ್ಕು ಬಹಳ ದಿನಗಳಾಗಿತ್ತು. ನಾವು ಸ್ನೇಹಿತರು ಒನ್ ಬೈ ಟೂ ಕಾಫಿ ಕುಡಿದವು ಎಂದು ಭೇಟಿ ಸಬೂಬು ಹೇಳುವ ಜೊತೆಗೆ ಯಾವುದೇ ಮಾತುಕತೆ ಆಗಿಲ್ಲ ಎನ್ನುವ ಮೂಲಕ ತೇಪೆ ಹಚ್ಚುವ ಕೆಲಸ ಮಾಡಿದರು.
ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಬದಲಾವಣೆ ವಿಚಾರದ ಸದ್ದು ದಿನದಿಂದ ದಿನಕ್ಕೆ ಜೋರಾಗಿಯೇ ಕೇಳಿ ಬರುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಪಕ್ಷದಲ್ಲಿ ನಾಯಕರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಬಹಿರಂಗ ಹೇಳಿಕೆಗಳು ಹೆಚ್ಚಾಗುತ್ತಿವೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಬೇಕು. ಅವರೇ ಮುಂದಿನ ಐದು ವರ್ಷ ಸಿಎಂ ಆಗಿರುತ್ತಾರೆ ಅಂತಲೂ ಕೆಲವು ನಾಯಕರು ಹೇಳುತ್ತಿದ್ದಾರೆ.
ಈ ಮಧ್ಯೆ ಇಬ್ಬರು ಸಚಿವರು ತಡರಾತ್ರಿ ದಿಢೀರ ಸಭೆ ಸೇರುತ್ತಾರೆ ಎಂದರೆ, ಇದು ಹಲವು ರಾಜಕೀಯ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.












Click it and Unblock the Notifications