"ಆರ್ಎಸ್ಎಸ್ ಹಿಂದುತ್ವ ಟೂಲ್ ಕಿಟ್ ಬಳಸುತ್ತಿದೆ, ದೇಶಕ್ಕೆ ವಿಷ ಉಣಿಸುವ ಕಾರ್ಕೊಟಕ ವಿಷ ಸರ್ಪ"
ಆರ್ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವುದನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಂದುವರಿಸಿದ್ದಾರೆ. ಸಂಘವೆಂದರೆ "ಸದಾನಂದ"ದ ಪರಿವಾರ, ಅಧಿಕಾರದ ಹಪಹಪಿತನ, ಪರೋಕ್ಷ ಆಡಳಿತದ ಕುತಂತ್ರ. ಇದಕ್ಕಾಗಿ ಆರ್ಎಸ್ಎಸ್ "ಹಿಂದುತ್ವ" ಎಂಬ ಟೂಲ್ ಕಿಟ್ ಬಳಸುತ್ತಿದೆ ಎಂದು ಅವರು ಟೀಕೆ ಮಾಡಿದ್ದಾರೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಅವರು, ಆರ್ಎಸ್ಎಸ್ಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳನ್ನೂ ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆರ್ಎಸ್ಎಸ್ ಎಲ್ಲಿ ನೋಂದಣಿಯಾಗಿದೆ,

ಅದರ ಅಧಿಕೃತತೆಗೆ ಪುರಾವೆ ಏನಿದೆ, ಅದರ ಆಸ್ತಿ, ವಹಿವಾಟುಗಳ ಲೆಕ್ಕವೆಲ್ಲಿದೆ, ಆದಾಯದ ಮೂಲವೇನು ಹಾಗೂ ಸಂಘ ಕಾರ್ಯನಿರ್ವಹಿಸುವ ಕಟ್ಟಡಗಳು ಸ್ವಂತದ್ದೇ, ಬೇನಾಮಿಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಸಂಘವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಯ್ಕೆಯಾದ ಕೇಂದ್ರ ಮಂತ್ರಿಗಳ ಅಧಿಕಾರವನ್ನು ಬದಿಗೊತ್ತಿ ಅಧಿಕಾರಿಗಳ ಮೂಲಕ ಆಡಳಿತ ನಡೆಸುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿರುವ ಅವರು, ಈ ನೆಲದ ಕಾನೂನನ್ನು ಗೌರವಿಸದ, ಸಂವಿಧಾನವನ್ನು, ರಾಷ್ಟ್ರಧ್ವಜವನ್ನು ಒಪ್ಪದ ಸಂಘವು ಈ ದೇಶಕ್ಕೆ ವಿಷ ಉಣಿಸುತ್ತಿರುವ ಕಾರ್ಕೊಟಕ ವಿಷ ಸರ್ಪ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಅಲ್ಲದೇ ತಮ್ಮ ನಾಯಕರ, ಆರ್ಎಸ್ಎಸ್ ಬಗೆಗಿನ ಕಟು ಮಾತುಗಳು ನನ್ನವು ಕೂಡ. ಆರ್ಎಸ್ಎಸ್ನ ಕ್ಷುದ್ರ ಗುಣಗಳ ಬಗ್ಗೆ, ವಿಕೃತ ನಡವಳಿಕೆಗಳ ಬಗ್ಗೆ ಕುಮಾರಣ್ಣನವರು ಬರೆದ ಈ ಸೊಗಸಾದ ಬರಹವನ್ನು ಜೆಡಿಎಸ್ನ ಟ್ವೀಟಾಧಿಪತಿಗಳು ಮತ್ತೊಮ್ಮೆ ಓದಬೇಕು. ಅಂದಹಾಗೆ, ಜೆಡಿಎಸ್ ನವರಿಗೆ ತಿಳಿದಿರಲಿ, ತ್ರಿವರ್ಣ ಸೇರಿದರೆ ಮಾತ್ರ ರಾಷ್ಟ್ರಧ್ವಜವಾಗುತ್ತದೆ, ಜಾತ್ಯತೀತತೆ ಅಂದರೆ ಈ ಮೂರೂ ಬಣ್ಣಗಳು. ಕೇಸರಿ ಒಂದೇ ಬಣ್ಣದ ಪರ ನಿಂತರೆ ಜಾತ್ಯತೀತತೆ ಆಗಲಾರದು.
ಆರ್ಎಸ್ಎಸ್ ನಮ್ಮ ತ್ರಿವರ್ಣ ಧ್ವಜವನ್ನು ವಿರೋಧಿಸಿ ದೇಶದ್ರೋಹಿ ನಡೆ ಅನುಸರಿಸಿತ್ತು ಎನ್ನುವುದು ಚಡ್ಡಿ ಹಾಕಿಕೊಂಡಿರುವ ಜೆಡಿಎಸ್ ಪಕ್ಷಕ್ಕೆ ತಿಳಿದಿರಲಿ ಎಂದು ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ಟ್ವೀಟ್ನಲ್ಲಿ ಏನಿತ್ತು: ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಜೆಡಿಎಸ್ನ ನಡುವೆ ಕಳೆದ ಒಂದು ವಾರದಿಂದಲೂ ಬಿಜೆಪಿ, ಆರ್ಎಸ್ಎಸ್ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರವಾಗಿ ವಾಕ್ಸಮರ ಮುಂದುವರಿದಿದೆ. ಜೆಡಿಎಸ್ ತನ್ನ ಹೆಸರಿನಲ್ಲಿರುವ ಜಾತ್ಯತೀತ ಪದವನ್ನು ಕೈಬಿಟ್ಟು ರಾಜಕಾರಣ ಮಾಡಲಿ. ಗೋಸುಂಬೆ ಬಣ್ಣವನ್ನು ಮಾತ್ರ ಬದಲಿಸುತ್ತದೆ, ಆದ್ರೆ ಜೆಡಿಎಸ್ ಬಣ್ಣವನ್ನು ಮಾತ್ರವಲ್ಲ ಸಿದ್ಧಾಂತವನ್ನು, ಮಾತುಗಳನ್ನೂ ಬದಲಿಸುವ ಮೂಲಕ ತನ್ನ ನಿಜ ಬಣ್ಣವನ್ನು ಅನಾವರಣಗೊಳಿಸಿದೆ.
ಸಂಘವೆಂದರೆ "ಸದಾನಂದ"ದ ಪರಿವಾರ ಎಂದು ಆರೋಪಿಸಿದ್ದವರು, ಇಂದು ಸಂಘದ ಸಹವಾಸದಲ್ಲೇ ಸದಾ ಆನಂದವಿದೆ ಎನ್ನುತ್ತಿದ್ದಾರೆ!
JD-S = Janata Dal Saffronized ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಟ್ವೀಟ್ ಮಾಡಿದ್ದರು. ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದ ಜೆಡಿಎಸ್ ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು, ಜನರನ್ನು ಯಾಮಾರಿಸುತ್ತಿರುವ ಕಾಂಗ್ರೆಸ್ ಪಕ್ಷದ ಗುಲಾಮರಿಗೆ ಕೇಸರಿ ಕಂಡರೆ ಯಾಕಿಷ್ಟು ಭಯ ಎಂದು ಪ್ರಶ್ನೆ ಮಾಡಿತ್ತು. ಅಲ್ಲದೇ ಇದು ಭಾರತದ ತ್ರಿವರ್ಣ ಧ್ವಜಕ್ಕೆ ಮಾಡುತ್ತಿರುವ ಅವಮಾನ ಅಲ್ಲವೇ? ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಕರ್ನಾಟಕ ಕಾಂಗ್ರೆಸ್ಗೆ ಧಿಕ್ಕಾರವಿರಲಿ ಎಂದು ಜೆಡಿಎಸ್ ಸುದೀರ್ಘವಾಗಿ ಟ್ವೀಟ್ ಮಾಡಿತ್ತು.












Click it and Unblock the Notifications