ದಲಿತರನ್ನು ಭೇಟಿ ಮಾಡಲಿರುವ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಬೆಂಗಳೂರು ಜು. 11: 2023ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ 'ರಾಷ್ಟ್ರೀಯ ಸ್ವಯಂ ಸೇವಕ' ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ದಲಿತ ಮುಖಂಡರನ್ನು ಸೋಮವಾರ ಭೇಟಿ ಮಾಡುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ದಲಿತ ಸಮುದಾಯದ ಮುಖಂಡರೊಂದಿಗಿನ ಮೋಹನ್ ಭಾಗವತ್ ಅವರ ಈ ಭೇಟಿ ಸಹ ಚುನಾವಣೆ ಉದ್ದೇಶದ ಭೇಟಿಯಾಗಿದೆ. ಇದರಿಂದಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವೋಟ್ ಬ್ಯಾಂಕ್ ಭದ್ರವಾಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ.
2023ರ ವಿಧಾನಸಭೆ ಚುನಾವಣೆ ಹಾಗೂ ಆರ್ಎಸ್ಎಸ್ನ ಎರಡು ದಿನದ ಚಿಂತನ ಮಂಥನ ಸಭೆಗೂ ಮುನ್ನ ಮೋಹನ್ ಭಾಗವತ್ ಅವರು ಸೋಮವಾರ ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮಿ ಭೇಟಿ ಮಾಡಲಿದ್ದಾರೆ. ಅಲ್ಲಿಯೇ ವಾಸ್ತವ್ಯ ಹೂಡಿ ಮರುದಿನ ಅಂದರೆ ಮಂಗಳವಾರ ವಿವಿಧ ಮಠಾಧೀಶರನ್ನು ಸಂಪರ್ಕಿಸಲಿದ್ದಾರೆ. ಇವರಿಗೆ ಕೆಲವು ಸಚಿವರು ಸಾಥ್ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಮೋಹನ್ ಭಾಗವತ್ ಅವರ ಈ ಭೇಟಿ ಅನೇಕ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಪರಿಶಿಷ್ಟ ಜಾತಿ ಎಡ ಸಮುದಾಯದ ಮಧ್ಯೆ ದಲಿತ ಧಾರ್ಮಿಕ ಮುಖ್ಯಸ್ಥರು ಅತ್ಯಧಿಕ ಪ್ರಭಾವ ಹೊಂದಿರುತ್ತಾರೆ. ಅವರನ್ನು ಭೇಟಿ ಮಾಡುವ ಮೂಲಕ ಮುಂದಿನ ಚುನಾವಣೆಯಲ್ಲಿ ದಲಿತ ಮತ ಸೆಳೆಯಲಾಗುತ್ತಿದೆ ಎಂಬ ಸುದ್ದಿಗಳು ಹಬ್ಬಿವೆ.

ಬಿಜೆಪಿ ವಿರುದ್ಧದ ಸಮಾವೇಶದಲ್ಲಿ ಪಾಲ್ಗೊಳ್ಳದ ಸ್ವಾಮೀಜಿ
ಅಯೋಧ್ಯೆಯಲ್ಲಿ ಇತ್ತೀಚೆಗೆ ನಡೆದ ರಾಮಮಂದಿರ ನಿರ್ಮಾಣದ 'ಶಿಲಾನ್ಯಾಸ' ಕಾರ್ಯಕ್ರಮದಲ್ಲೂ ಚಿತ್ರದರ್ಗುದ ಮಾದಾರ ಚನ್ನಯ್ಯ ಸ್ವಾಮೀಜಿ ಭಾಗವಹಿಸಿದ್ದರು. ಆಹ್ವಾನದ ಮೇರೆಗೆ ತೆರಳಿದವರ ಪೈಕಿ ಈ ಶ್ರೀಗಳು ಇದ್ದು. ಅಲ್ಲದೇ ಕಳೆದ ತಿಂಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಪರಿಷ್ಕೃತ ಪಠ್ಯಪುಸ್ತಕ ವಿರೋಧಿಸಿ ನಡೆದ ಬೃಹತ್ ಸಮಾವೇಶದಲ್ಲಿ ಶ್ರೀಗಳು ಪಾಲ್ಗೊಂಡಿರಲಿಲ್ಲ.

ಆರ್ಎಸ್ಎಸ್ ಬಗ್ಗೆ ಅಪಾರ ಗೌರವ
ತಮ್ನ್ನನ್ನು ಆಹ್ವಾನಿಸದ ಕಾರಣ ನಾನು ಸ್ವಾತಂತ್ರ್ಯ ಉದ್ಯಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದ್ದರು. ಅಲ್ಲದೇ ಕೆಲವು ದಿನಗಳ ಹಿಂದೆ ನಮ್ಮ ಗುರುಪೀಠಕ್ಕೆ ಭೇಟಿ ನೀಡುವಂತೆ ಆರ್ಎಸ್ಎಸ್ ನ ಮೋಹನ್ ಭಾಗವತ್ ಅವರನ್ನು ಆಹ್ವಾನಿಸಿರುವುದಾಗಿ ಅವರೇ ತಿಳಿಸಿದ್ದರು. ದಲಿತ ಸಮುದಾಯಗಳ ಮೇಲೆ ಹಿಡಿತ ಹೊಂದಿರುವ ಸ್ವಾಮೀಜಿಗೆ ಬಿಜೆಪಿ ಹಾಗೂ ಆರ್ಎಸ್ಎಸ್ ಬಗ್ಗೆ ಅಪಾರ ಗೌರವ ಇದೆ ಎಂದು ಸಮುದಾಯದ ಮುಖಂಡ ಪಾವಗಡ ಶ್ರೀರಾಮ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಆಡಳಿತದಲ್ಲಿ ಕಾಂಗ್ರೆಸ್ ವಿಫಲ
ಜಾತಿ ವಿಚಾರವಾಗಿ ನೋಡುವುದಾದರೆ 2013ರಲ್ಲಿ ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಎಸ್ಸಿ ಕೋಟಾ ವರ್ಗೀಕರಣಕ್ಕೆಂದು ನ್ಯಾ. ಸದಾಶಿವ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೆ ತಂದಾಗ ಇದೇ ದಲಿತ ಸಮುದಾಯದವರು ತಿರುಗೇಟು ನೀಡಿದ್ದರು. ನಂತರ ಬಂದ ಸಿದ್ದರಾಮಯ್ಯರವರ ಸರ್ಕಾರವು ಆಡಳಿತದಲ್ಲಿ ವಿಫಲವಾಯಿತು. ನಂತರ ದಲಿತರು ಬಿಜೆಪಿಯತ್ತ ವಾಲಿದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ದಲಿತರ ಮತ ಸೆಳೆಯಲು ಜಂಟಿ ಯತ್ನ
2018ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದರೊಂದಿಗೆ ದಲಿತ ಸಮುದಾಯವನ್ನು ಸೆಳೆದಿತ್ತು. ಸದ್ಯ ಮುಂಬರುವ 2023 ರ ಚುನಾವಣೆಗೆ ಮುನ್ನವೇ ದಲಿತರ ಮತಗಳು ಬೇರೆಡೆಗೆ ವಾಲದಂತೆ ನೋಡಿಕೊಳ್ಳಲು ಬಿಜೆಪಿ ಹಾಗೂ ಆರ್ಎಸ್ಎಸ್ ಕಸರತ್ತು ನಡೆಸಿವೆ ಎಂಬ ಸುದ್ದಿ ಇದೆ.
ಆರ್ಎಸ್ಎಸ್ ಮುಖ್ಯಸ್ಥರು ಇಂತಹ ಭೇಟಿ ಮೂಲಕ ಗಿಮಿಕ್ ಮಾಡುವ ಬದಲು ಚುನಾವಣೆ ಎದುರಿಸಲಿ. ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧದ ಶೇ 40 ಕಮಿಷನ್ ಆರೋಪಕ್ಕೆ ಮೊದಲು ಉತ್ತರಿಸಿ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್ ಟೀಕಿಸಿದರು.












Click it and Unblock the Notifications