ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಸ್ಪರ್ಧೆ ಇಲ್ಲ?
ಬೆಂಗಳೂರು, ಮೇ 22 : ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯ ಕುರಿತ ಲೆಕ್ಕಾಚಾರಗಳು ಆರಂಭವಾಗಿವೆ. ಜೆಡಿಎಸ್ ಪಕ್ಷ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ತೀರ್ಮಾನಿಸಿದೆ. ಕಾಂಗ್ರೆಸ್ ಅಥವ ಪಕ್ಷೇತರ ಅಭ್ಯರ್ಥಿಗೆ ಪಕ್ಷ ಬೆಂಬಲ ನೀಡುವ ಸಾಧ್ಯತೆ ಇದೆ.
ಜೂನ್ 19ರಂದು ಎಸ್.ಎಂ.ಕೃಷ್ಣ, ರಾಮಾಜೋಯಿಸ್, ಪ್ರಭಾಕರ ಕೋರೆ ಮತ್ತು ಬಿ.ಕೆ.ಹರಿಪ್ರಸಾದ್ ಅವರಿಂದ ತೆರವಾಗುವ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಶಾಸಕರು ಮತದಾನದ ಮೂಲಕ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲಿದ್ದು, ಜೆಡಿಎಸ್ ಪಕ್ಷಕ್ಕೆ ಗೆಲುವು ಸಾಧಿಸಲು 5ರಿಂದ6 ಶಾಸಕರ ಕೊರತೆ ಉಂಟಾಗಲಿದೆ. [ರಾಜ್ಯಸಭೆ ಚುನಾವಣೆ ವೇಳಾಪಟ್ಟಿ ನೋಡಿ]

ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ 122, ಬಿಜೆಪಿ 44 ಮತ್ತು ಜೆಡಿಎಸ್ 40 ಶಾಸಕರ ಬಲವನ್ನು ಹೊಂದಿವೆ. ಕಾಂಗ್ರೆಸ್ ಎರಡೂ ಸ್ಥಾನಗಳನ್ನು, ಬಿಜೆಪಿ ಒಂದು ಸ್ಥಾನವನ್ನು ಗಳಿಸುವ ಶಕ್ತಿಹೊಂದಿವೆ. ಆದರೆ, ಜೆಡಿಎಸ್ ಪಕ್ಷಕ್ಕೆ ಸ್ವತಂತ್ರ್ಯವಾಗಿ ಜಯಗಳಿಸಲು ಸಾಧ್ಯವಿಲ್ಲ ಪಕ್ಷೇತರ ಸದಸ್ಯರ ಬೆಂಬಲ ಸಿಕ್ಕರೆ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಬಹುದಾಗಿದೆ.
ಆದ್ದರಿಂದ ಜೆಡಿಎಸ್ ಪಕ್ಷ ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಇತರ ಪಕ್ಷಗಳ ಮತ್ತು ಪಕ್ಷೇತರ ಬೆಂಬಲ ಕೇಳುವ ಬದಲು, ಕಾಂಗ್ರೆಸ್ ಅಥವ ಪಕ್ಷೇತರ ಅಭ್ಯರ್ಥಿಗಳು ಬೆಂಬಲ ಕೇಳಿದರೆ ನೀಡುವ ಆಲೋಚನೆಯಲ್ಲಿದೆ. ರಾಜ್ಯಸಭೆ ಚುನಾವಣೆಯ ಕುರಿತು ಚರ್ಚಿಸಲು ಶಾಸಕರ ಸಭೆ ನಡೆಸುವಂತೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ, ಜೆಡಿಎಸ್ ಸಭಾನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. [ಕರ್ನಾಟಕದಿಂದ ಚಿದಂಬರಂ ರಾಜ್ಯಸಭೆಗೆ?]
ಕಾಂಗ್ರೆಸ್ ಪಕ್ಷದಿಂದ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗುತ್ತದೆ ಎಂಬ ಮಾತುಗಳಿವೆ. ಒಂದು ವೇಳೆ ಚಿದಂಬರಂ ಅಭ್ಯರ್ಥಿಯಾದರೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುವಂತೆ ಜೆಡಿಎಸ್ ಪಕ್ಷಕ್ಕೆ ಮನವಿ ಮಾಡುವ ಸಾಧ್ಯತೆ ಇದೆ. ಜೆಡಿಎಸ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದರೆ, ಮೂರು ಸ್ಥಾನಗಳಲ್ಲಿ ಕಾಂಗ್ರೆಸ್, ಒಂದು ಸ್ಥಾನದಲ್ಲಿ ಬಿಜೆಪಿ ಜಯಗಳಿಸುವ ಸಾಧ್ಯತೆ ಇದೆ.
ಕಾಂಗ್ರೆಸ್, ಬಿಜೆಪಿ ರಾಜ್ಯಸಭೆಗೆ ಅಭ್ಯರ್ಥಿಗಳು ಯಾರು ಎಂಬ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಬಿಜೆಪಿಯಿಂದ ಪ್ರಭಾಕರ ಕೋರೆ ಪುನಃ ಸ್ಪರ್ಧಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ನಿಂದ ಬಿಕೆ ಹರಿಪ್ರಸಾದ್, ಎಸ್ಎಂ ಕೃಷ್ಣ ಜೊತೆಗೆ ಪಿ.ಚಿದಂಬರಂ ಹೆಸರು ಕೇಳಿಬರುತ್ತಿದೆ.












Click it and Unblock the Notifications