ವಿಧಾನಸೌಧದಲ್ಲಿ ಹಣ; ಬಿಜೆಪಿಗೆ Good Afternoon ಎಂದ ಕಾಂಗ್ರೆಸ್!
ಬೆಂಗಳೂರು, ಜನವರಿ 05; ರಾಜ್ಯದ ಆಡಳಿತದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಬ್ಯಾಗ್ನಲ್ಲಿ 10 ಲಕ್ಷ ರೂ. ನಗದು ಹಣ ಪತ್ತೆಯಾದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ.
ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ ಜಗದೀಶ್ ಬ್ಯಾಗ್ನಲ್ಲಿ ದಾಖಲೆ ಇಲ್ಲದ 10 ಲಕ್ಷ ರೂ. ಹಣ ಪತ್ತೆಯಾಗಿದೆ. ವಿಧಾನಸೌಧದ ಭದ್ರತಾ ಸಿಬ್ಬಂದಿ ಹಣವನ್ನು ಜಪ್ತಿ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಧಾನಸೌಧದಲ್ಲಿ ಹಣ ಸಿಕ್ಕ ವಿಚಾರ ಮುಂದಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಟ್ವೀಟ್ ಮಾಡಿದೆ. ಬಿಜೆಪಿಗೆ Good Afternoon ಎಂದು ಹೇಳುವ ಮೂಲಕ ಕಾಂಗ್ರೆಸ್ ಲೇವಡಿ ಮಾಡಿದೆ.

ಹಣ ಸಿಕ್ಕ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, "ರಾಜ್ಯ ಸರ್ಕಾರವನ್ನು ಅದಕ್ಕೆ 40 ಪರ್ಸೆಂಟ್ ಸರ್ಕಾರ ಎನ್ನುವುದು. ಹಣವಿಲ್ಲದೇ ಈ ಸರ್ಕಾರದಲ್ಲಿ ಏನೂ ಆಗಲ್ಲ. ಪ್ರತಿಯೊಂದರಲ್ಲೂ ಭ್ರಷ್ಟಾಚಾರ ಮಾಡುತ್ತಿದ್ದಾರೆ" ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ತನ್ನ ಟ್ವೀಟ್ನಲ್ಲಿ "ಗುಡ್ ಆಫ್ಟರ್ನೂನ್ @BJP4Karnataka, ವಿಧಾನಸೌಧದಲ್ಲಿ ಸಿಕ್ಕ 10 ಲಕ್ಷ ಹಣಕ್ಕೂ, @JPNadda ಬಂದಿರುವುದಕ್ಕೂ ಸಂಬಂಧವಿದೆಯೇ? 40% ಕಮಿಷನ್ನಲ್ಲಿ ದೆಹಲಿ ಪಾಲು ತಲುಪಿಸಲು ತರಿಸಿದ ಹಣವೇ?. ಸಿಎಂ ಹುದ್ದೆಯ 2,500 ಕೋಟಿಯ ಬಾಕಿ ವಸೂಲಿಗೆ ಬಂದಿರುವುದೇ?. ಹಾಗೆಯೇ, ಸ್ಯಾಂಟ್ರೋ ರವಿ ವಿಚಾರದಲ್ಲಿ ಇಡೀ ಸರ್ಕಾರವೇ ಕಳವಳಗೊಂಡಿರುವುದೇಕೆ?" ಎಂದು ಹೇಳಿದೆ.
ಗುಡ್ ಆಫ್ಟರ್ನೂನ್ @BJP4Karnataka,
— Karnataka Congress (@INCKarnataka) January 5, 2023
ವಿಧಾನಸೌಧದಲ್ಲಿ ಸಿಕ್ಕ 10 ಲಕ್ಷ ಹಣಕ್ಕೂ, @JPNadda ಬಂದಿರುವುದಕ್ಕೂ ಸಂಬಂಧವಿದೆಯೇ?
40% ಕಮಿಷನ್ನಲ್ಲಿ ದೆಹಲಿ ಪಾಲು ತಲುಪಿಸಲು ತರಿಸಿದ ಹಣವೇ?
ಸಿಎಂ ಹುದ್ದೆಯ 2,500 ಕೋಟಿಯ ಬಾಕಿ ವಸೂಲಿಗೆ ಬಂದಿರುವುದೇ?
ಹಾಗೆಯೇ, ಸ್ಯಾಂಟ್ರೋ ರವಿ ವಿಚಾರದಲ್ಲಿ ಇಡೀ ಸರ್ಕಾರವೇ ಕಳವಳಗೊಂಡಿರುವುದೇಕೆ? https://t.co/jXA3DZF27l
"ವಿಧಾನಸೌಧವನ್ನು ಬಿಜೆಪಿ ಸರ್ಕಾರ ವ್ಯಾಪಾರ ಸೌಧವನ್ನಾಗಿಸಿದೆ ಎನ್ನಲು ಹಲವು ಪುರಾವಾಗಳಿವೆ. ವಿಧಾನಸೌಧ ಈಗ ಅಕ್ರಮ ಡೀಲಿಂಗ್ಗಳ ಅಡ್ಡೆಯಾಗಿದೆ. ವಿಧಾನಸೌಧಕ್ಕೆ 10.5 ಲಕ್ಷ ಹಣವನ್ನು PWD ಇಂಜಿನಿಯರ್ ತಂದಿದ್ದೇಕೆ? ಆ ಹಣ ಅದು ಲಂಚ ಪಡೆದ ಹಣವೋ, ಮಂತ್ರಿಗಳಿಗೆ ಕೊಡಲು ತಂದ ಹಣವೋ?, 40% ಕಮಿಷನ್ ಲೂಟಿಯ ಹಣವೋ? ಸಿಎಂ @BSBommai ಉತ್ತರಿಸಬೇಕು" ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.
ಮತ್ತೊಂದು ಟ್ವೀಟ್ನಲ್ಲಿ ಕಾಂಗ್ರೆಸ್ ಪಕ್ಷ, "ಕೆಲದಿನಗಳ ಹಿಂದೆ ವಿಧಾನಸೌಧದ ಆವರಣದಲ್ಲಿ ಹುದ್ದೆ ಮಾರಾಟದ ಡೀಲಿಂಗ್ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಬಿಜೆಪಿ ಶಾಸಕ ಬಸವರಾಜ್ ದಡೇಸಗೂರ ಶಾಸಕರ ಭವನದಲ್ಲಿ PSI ಅಭ್ಯರ್ಥಿ ಬಳಿ ಹಣ ಪಡೆದದ್ದು ಬೆಳಕಿಗೆ ಬಂದಿತ್ತು. ಈಗ 10 ಲಕ್ಷ ಲಂಚದ ಹಣ ವಿಧಾನಸೌಧದಲ್ಲಿ ಸಿಕ್ಕಿದೆ. ಬಿಜೆಪಿ ವಿಧಾನಸೌಧವನ್ನು ಭ್ರಷ್ಟಾಚಾರದ ಅಡ್ಡೆಯನ್ನಾಗಿಸಿದೆ" ಎಂದು ಆರೋಪಿಸಿದೆ.
"ಬಿಜೆಪಿ ಆಡಳಿತದಲ್ಲಿ ಆಡಳಿತದಲ್ಲಿ ವಿಧಾನಸೌಧ ಶಾಪಿಂಗ್ ಮಾಲ್ನಂತಾಗಿದೆ. ಇಲ್ಲಿ ಸಚಿವರೆಲ್ಲರೂ ಅಂಗಡಿ ತೆರೆದು ಕುಳಿತಿದ್ದಾರೆ, '40% ಕಮಿಷನ್ ಕಡ್ಡಾಯ'ದೊಂದಿಗೆ ಇಲ್ಲಿ ಎಲ್ಲವೂ ಮಾರಾಟಕ್ಕಿದೆ. ಈ ಶಾಪಿಂಗ್ ಮಾಲಿನಲ್ಲಿ ಲಕ್ಷ, ಕೋಟಿಗಳ ವ್ಯವಹಾರಗಳು ಸಲೀಸಾಗಿ ನಡೆಯುತ್ತಿವೆ. ಸಿಕ್ಕಿಬಿದ್ದ 10 ಲಕ್ಷ ಇದೆಲ್ಲದಕ್ಕೂ ಸಾಕ್ಷಿಯಾಗಿದೆ ನಿಂತಿದೆ" ಎಂದು ಟೀಕಿಸಿದೆ.
ಮತ್ತೆ ಪೇಸಿಎಂ ನೆನಪು; "ವಿಧಾನಸೌಧದಲ್ಲಿ ಸಿಕ್ಕ 10 ಲಕ್ಷ ಅಕ್ರಮ ಹಣವು #PayCM ವಸೂಲಿಗೆ ಸಾಕ್ಷಿಯಾಗಿದೆ. ವಿಧಾನಸೌಧದವಷ್ಟೇ ಅಲ್ಲ @BSBommai ಅವರ ಕುರ್ಚಿಯ ಅಡಿಯಲ್ಲೇ ಹವಾಲಾ ದಂಧೆ, ಕಮಿಷನ್ ಲೂಟಿ, ಹಫ್ತಾ ವಸೂಲಿ ನಡೆಯುತ್ತಿದ್ದರೂ ಸಿಎಂ ಅರಿವಿಗೆ ಬಂದಿಲ್ಲ ಎಂದೇನೂ ಇಲ್ಲ. ಬೊಮ್ಮಾಯಿಯವರ ಶ್ರೀರಕ್ಷೆಯಲ್ಲೇ ಎಲ್ಲಾ ಅಕ್ರಮಗಳು ನಡೆಯುತ್ತಿವೆ" ಎಂದು ಕಾಂಗ್ರೆಸ್ ಆರೋಪಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿಧಾನಸೌಧದಲ್ಲಿ ಹಣ ಸಿಕ್ಕ ಪ್ರಕರಣದ ಬಗ್ಗೆ ಮಾತನಾಡಿ, "ಕರ್ನಾಟಕ ಬಿಜೆಪಿ ಸರ್ಕಾರದ ಆಡಳಿತ ಇಡೀ ದೇಶದಲ್ಲೇ ಅತ್ಯಂತ 'ಭ್ರಷ್ಟ ಆಡಳಿತ' ಎನ್ನುವ ಹೆಗ್ಗಳಿಕೆ ಪಡೆದಿದೆ!. ಪಂಚಾಯಿತಿಯಿಂದ ವಿಧಾನಸೌಧದ ವರೆಗೂ ಲಂಚವಿಲ್ಲದೇ ಯಾವ ಕೆಲಸಗಳೂ ಆಗುತ್ತಿಲ್ಲ. ವಿಧಾನಸೌಧದಲ್ಲೇ ಸೆಟಲ್ಮೆಂಟ್ಗಳು ನಡೆಯುತ್ತಿವೆ, ಸರ್ಕಾರದಲ್ಲಿ ನಡೆಯುವ ಎಲ್ಲ ಭ್ರಷ್ಟಾಚಾರಗಳನ್ನು ಮುಚ್ಚಿಹಾಕಲಾಗುತ್ತಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications