ಕಾವೇರಿ ತವರಲ್ಲೂ ಬತ್ತಿದ ಜೀವಸೆಲೆ, ನೀರಿಗೆ ಬರ
ಮಡಿಕೇರಿ, ಮೇ 02 : ಕಾವೇರಿ ತವರು ಕೊಡಗಿನಲ್ಲೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಪ್ರಮುಖ ನೀರಿನ ಸೆಲೆಗಳು ಬತ್ತಿದ್ದು, ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಉದ್ಭವಿಸಿರುವ ಬರ ಪರಿಸ್ಥಿತಿಯನ್ನು ಅವಲೋಕಿಸಲಾಯಿತು.
ಬರ ನಿರ್ವಹಣೆಯ ಸಚಿವ ಸಂಪುಟ ಉಪ ಸಮಿತಿಯ ಸದಸ್ಯರಾದ ಟಿ.ಬಿ.ಜಯಚಂದ್ರ ಅವರು ಕುಡಿಯುವ ನೀರು ಸಂಬಂಧಿಸಿದಂತೆ ಆಡಳಿತಾತ್ಮಕ ಅನುಮೋದನೆ ನೀಡಿ ಕೊಳವೆ ಬಾವಿ ಕೊರೆಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಕುಡಿಯುವ ನೀರು ಕಾಮಗಾರಿಗಳಿಗೆ ಯಾವುದೇ ರೀತಿ ವಿಳಂಬ ಮಾಡಬಾರದು. ವಿದ್ಯುತ್ ಸಂಪರ್ಕವನ್ನು ಒಂದು ವಾರದೊಳಗೆ ಪೂರ್ಣಗೊಳಿಸುವಂತೆಯೂ ಅವರು ಸೂಚನೆ ನೀಡಿದ್ದಾರೆ.
ಸಮಿತಿ ಸದಸ್ಯರಾದ ಡಾ.ಎಚ್.ಸಿ ಮಹದೇವಪ್ಪ ಮಾತನಾಡಿ, ಕುಡಿಯುವ ನೀರು ಸಂಬಂಧಿಸಿದಂತೆ ಜಿಲ್ಲಾಡಳಿತ ಚುರುಕಿನಿಂದ ಕಾರ್ಯನಿರ್ವಹಿಸಬೇಕು ಕುಡಿಯುವ ನೀರಿನ ಜೊತೆಗೆ ಜಾನುವಾರುಗಳಿಗೆ ಮೇವು, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವುದು, ಈಗಾಗಲೇ ಕೊರೆದಿರುವ ಕೊಳವೆ ಬಾವಿಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಥಮ ಆದ್ಯತೆ ನೀಡಬೇಕು ಎಂದರು. [ಮಳೆಗಾಗಿ ಮುಸ್ಲಿಂ ಬಾಂಧವರಿಂದ ನಮಾಜ್]
ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು, ಜಿಲ್ಲಾಧಿಕಾರಿ ಮತ್ತು ಜಿ.ಪಂನ ಸಿ.ಇ.ಓ ಅವರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಮೇ 7ರಂದು ಕೊಡಗು ಜಿಲ್ಲೆಗೆ ಆಗಮಿಸುತ್ತೇನೆ, ಅಲ್ಲಿವರೆಗೆ ಕುಡಿಯುವ ನೀರು ಕಾಮಗಾರಿಗಳು ಕೈಗೊಳ್ಳದಿದ್ದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮ್ಮದ್ ಮಾತನಾಡಿ, ಕಳೆದ ವರ್ಷ 630 ಮಿ.ಮೀಟರ್ನಷ್ಟು ಮಳೆ ಕಡಿಮೆಯಾಗಿತ್ತು. ಈಗಾಗಲೇ ಸುಮಾರು 98 ಮಿ.ಮೀ.ನಷ್ಟು ಮಳೆಯಾಗಬೇಕಿತ್ತು, ಆದರೆ ಕೇವಲ 20 ಮಿ.ಮೀ ನಷ್ಟು ಮಳೆಯಾಗಿದೆ ಎಂದು ಅವರು ಮಾಹಿತಿ ನೀಡಿದರು. [ಕುಡಿಯುವ ನೀರಿಗೂ ಸಂಕಷ್ಟ : ಬರಗಾಲಕ್ಕೆ ಕಾರಣ ಯಾರು?]
ಇದೇ ವೇಳೆ ಮಡಿಕೇರಿಯ ಪಂಪಿನ ಕೆರೆ, ಕದನೂರು ಬಳಿಯ ನರ್ಸರಿ, ಕುಡಿಯುವ ನೀರಿನ ಟ್ಯಾಂಕ್, ಹಳ್ಳಿಗಟ್ಟು ಶಾಲಾ ಮೈದಾನ, ಆತೂರು ಬಳಿಯ ಒಣಗಿರುವ ಕಾಫಿ ತೋಟ, ಗೋಣಿಕೊಪ್ಪ ಬಳಿಯ ಕಾಲೋನಿಯಲ್ಲಿ ಕುಡಿಯುವ ನೀರು ಟ್ಯಾಂಕ್ ಮತ್ತಿತರವನ್ನು ವೀಕ್ಷಣೆ ಮಾಡಿ ಹಲವು ಸಲಹೆ ಸೂಚನೆ ನೀಡಿದರು. ['ಬರ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ']