ಕಂದಾಯ ಇಲಾಖೆ ಗುಡ್ನ್ಯೂಸ್: ಬಾಕಿ ವ್ಯಾಜ್ಯ ಪ್ರಕರಣಗಳ ಇತ್ಯರ್ಥಕ್ಕೆ 9 ವಿಶೇಷ ಜಿಲ್ಲಾಧಿಕಾರಿಗಳ ನೇಮಕ
ಬೆಂಗಳೂರು: ಕರ್ನಾಟಕದ ಕಂದಾಯ ನ್ಯಾಯಾಲಯಗಳಲ್ಲಿ ವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ಆಂದೋಲನ ಮಾದರಿಯಲ್ಲಿ ತ್ವರಿತವಾಗಿ ವಿಲೆವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಈ ಮೂಲಕ ಹತ್ತಾರು ಸಾವಿರ ಪ್ರಕರಣಗಳನ್ನು ರಾಜ್ಯಾದ್ಯಂತ ವಿಲೇವಾರಿ ಮಾಡಲಾಗುತ್ತಿದ್ದು, ಬಾಕಿ ಪ್ರಕರಣಗಳಿಗೆ ತ್ವರಿತವಾಗಿ ಇತ್ಯರ್ಥವಾಗಲಿವೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಗುರುವಾರ (ಫೆ.19) ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ನೇತೃತ್ವದಲ್ಲಿ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಗಳು, ಆಯುಕ್ತರು ಮತ್ತು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ವಿಶೇಷ ಜಿಲ್ಲಾಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ವಿಶೇಷ ನ್ಯಾಯಾಲಯಗಳು ಹೆಚ್ಚು ಸಂಖ್ಯೆಯಲ್ಲಿ ವಿಚಾರಣೆ ನಡೆಸಲು ಬೇಕಾದ ನ್ಯಾಯಾಲಯ ಸಭಾಂಗಣ, ಸಿಬ್ಬಂದಿ ಮತ್ತು ಮೂಲ ಸೌಕರ್ಯಗಳನ್ನು ಒದಗಿಸುವಂತೆ ಸಚಿವರು ಸೂಚಿಸಿದರು.

2 ದಶಕದ ವ್ಯಾಜ್ಯಗಳು ವಿಲೇವಾರಿಯಾಗದೇ ಬಾಕಿ!
ಬಾಕಿ ಇರುವ ಪ್ರಕರಣಗಳ ಪೈಕಿ, ಗರಿಷ್ಠ ಪ್ರಕರಣಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಇರುವುದನ್ನು ಗಮನಿಸಿ ಈ ಪ್ರಕರಣಗಳನ್ನು ಆದ್ಯತೆ ಮೇರೆಗೆ ರಾಜ್ಯ ಸರ್ಕಾರ ಕೈಗೆತ್ತಿಕೊಂಡು ವಿಲೇವಾರಿಗೆ ವಿಶೇಷ ಪ್ರಯತ್ನ ಆರಂಭಿಸಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ 4937 ಪ್ರಕರಣಗಳು ಬಾಕಿ ಇವೆ. ಇವುಗಳಲ್ಲಿ ಬಹುತೇಕ ಅಂದರೆ 4154 ಪ್ರಕರಣಗಳು 1 ವರ್ಷಕ್ಕೂ ಮೇಲ್ಪಟ್ಟು ಉಳಿದಿರುವ ಪ್ರಕರಣ. ಇವುಗಳನ್ನು 20 ವರ್ಷ ಗಳವರೆಗಿನ ಸಮಯದಿಂದ ವಿಲೇವಾರಿ ಆಗದೇ ಬಾಕಿ ಇರಿಸಿಕೊಳ್ಳಲಾಗಿದೆ.
ಇವುಗಳ ವಿಲೇವಾರಿ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಯತ್ನ ಮಾಡಲಿಲ್ಲ. ಇಂತಹ ಎಲ್ಲಾ ಪ್ರಕರಣಗಳನ್ನು ಗುರುತಿಸಿ, ಸಂಪೂರ್ಣವಾಗಿ ಆನ್ಲೈನ್ ಕಂದಾಯ ನ್ಯಾಯಾಲಯ ವ್ಯವಸ್ಥೆಗೆ ತಂದು ಪಾರದರ್ಶಕವಾಗಿ ಪ್ರಕರಣ ಇತ್ಯರ್ಥಗೊಳಿಸುವಂತೆ ಸುಧಾರಣೆ ತರಲಾಗಿದೆ. ಆನ್ಲೈನ್ ಪದ್ಧತಿಯಿಂದ ಬಾಕಿ ಅವಧಿ, ಪ್ರಗತಿ, ಆದೇಶ ಮತ್ತು ಅನುಷ್ಠಾನ ಇವೆಲ್ಲವು ಸರಳಗೊಳಿಸಲಾಗುವುದು ಎಂದರು.
9 ವಿಶೇಷ ಜಿಲ್ಲಾಧಿಕಾರಿ ನೇಮಕ
ಮುಂದುವರೆದು 20 ವರ್ಷಗಳಿಂದ ಬಾಕಿಯಿರುವ ಈ ಪ್ರಕರಣಗಳನ್ನು ವಿಲೇವಾರಿ ಮಾಡಲೇಬೇಕೆಂಬ ಸಂಕಲ್ಪ ಮಾಡಿರುವ ರಾಜ್ಯ ಸರ್ಕಾರ ಇದಕ್ಕಾಗಿ ಜಿಲ್ಲಾಧಿಕಾರಿಗಳ ಜೊತೆಗೆ ಒಂದು ಬಾರಿಯ ಕ್ರಮವಾಗಿ 9 ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಿಸಿದೆ. ಬಾಕಿ ಹಳೆಯ ಪ್ರಕರಣಗಳನ್ನು ವಿಶೇಷ ಜಿಲ್ಲಾಧಿಕಾರಿಗಳಿಗೆ ಹಂಚಿಕೆ ಮಾಡಲಾಗುತ್ತದೆ. ಸಂಘಟಿತವಾಗಿ ಪ್ರಕರಣಗಳ ವಿಲೇವಾರಿಗೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಎಂದು ಹೇಳಿದರು.
ಸುಮಾರು 10-20 ವರ್ಷಗಳ ಹಳೇ ಪ್ರಕರಣಗಳಾಗಿರುವುದರಿಂದ ಅನೇಕ ಪ್ರಕರಣಗಳಲ್ಲಿ ಪ್ರತಿವಾದಿಗಳು ದೊರೆಯುತ್ತಿಲ್ಲ. ವಿಳಾಸ ಸರಿಯಿಲ್ಲ ಎಂಬುದನ್ನು ಗಮನಿಸಿದ ಮಾನ್ಯ ಸಚಿವರು ಇದಕ್ಕಾಗಿ ಗ್ರಾಮ ಆಡಳಿತಾಧಿಕಾರಿಗಳಿಂದ ವಿಚಾರಣಾ ನೊಟೀಸ್ಗಳನ್ನು ಜಾರಿ ಮಾಡಬೇಕು. ವಿಶೇಷ ಬಾಕಿ ಪ್ರಕರಣ ವಿಲೇವಾರಿಗಾಗಿ ಕಕ್ಷಿದಾರರು/ಪ್ರತಿವಾದಿಗಳಿಗೆ ಸಂಬಂಧಿಸಿದ ಕಚೇರಿ ಸಂಪರ್ಕಿಸಿ, ಇತ್ತೀಚಿನ ವಿಳಾಸ ನೀಡಬೇಕೆಂದು ಮತ್ತು ನ್ಯಾಯಾಲಯ ವಿಚಾರಣೆಗೆ ತಪ್ಪದೆ ಹಾಜರಾಗಿ ಸಹಕರಿಸಬೇಕೆಂದು ಸಾರ್ವಜನಿಕರನ್ನು ಅವರು ಕೋರಿದರು.
4-5 ತಿಂಗಳುಗಳಲ್ಲಿ ವಿಲೇವಾರಿ
ಪ್ರಕರಣದ ಸದ್ಯದ ಸ್ಥಿತಿಗತಿ (ಸ್ಟೇಟಸ್) ಅನ್ನು RCCMS (https://rccms.karnataka.gov.in) ನಲ್ಲಿ ತಿಳಿದುಕೊಳ್ಳಬಹುದು. ಸಾರ್ವಜನಿಕರು ಸಹಕರಿಸಿದರೆ 10-20 ವರ್ಷಗಳ ಬಾಕಿ ಪ್ರಕರಣಗಳನ್ನು ಸರ್ಕಾರವೇ ಜವಾಬ್ದಾರಿ ವಹಿಸಿಕೊಂಡು 4-5 ತಿಂಗಳುಗಳಲ್ಲಿ ವಿಲೇವಾರಿ ಮಾಡಲಾಗುವುದು ಎಂದರು.
ನ್ಯಾಯದಾನ ವಿಳಂಬವೂ ಸಹ ನ್ಯಾಯದ ನಿರಾಕರಣೆ ಆಗುವ ಸಾಧ್ಯತೆಗಳಿರುತ್ತದೆ. ಅಲ್ಲದೆ, ಪ್ರಕರಣಗಳ ವಿಲೇಗೆ ಸಾರ್ವಜನಿಕರು ವರ್ಷಗಳಿಂದ ಕಾಯುತ್ತಿದ್ದಾರೆ. ನ್ಯಾಯದಾನ ವಿಳಂಬವಾಗುವುದರಿಂದ ಭೂ ವ್ಯಾಜ್ಯಗಳು ಹೆಚ್ಚಾಗುತ್ತದೆ. ಅಲ್ಲದೆ ಭೂಮಿಯ ಮಾಲಿಕತ್ವ ಗೊಂದಲದ ಗೂಡಾಗಿ ನೆಮ್ಮದಿಯ ಜೀವನಕ್ಕೆ ಕಂಟಕವಾಗುತ್ತದೆ. ಇವುಗಳನ್ನು ನಿವಾರಿಸಿ, ಜನಗಳಿಗೆ ಕಾಲ ಮೀತಿಯಲ್ಲಿ ನ್ಯಾಯ ಒದಗಿಸಿ, ವಿಳಂಬ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಆಡಳಿತ ಸುಧಾರಣೆಗೊಳಿಸಿ, ಜನಪರ ಆಡಳಿತ ಒದಗಿಸುವ ಉದ್ದೇಶ ನಮ್ಮ ಸರ್ಕಾರ ಹೊಂದಿದೆ ಎಂದು ವಿವರಿಸಿದರು.












Click it and Unblock the Notifications