ಡಿಕೆ ಶಿವಕುಮಾರ್ಗೆ ಕ್ಲೀನ್ ಚಿಟ್, ಜೆಡಿಎಸ್ ಅಸಮಾಧಾನ
ಬೆಂಗಳೂರು, ಮಾ.6 : ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದ ಅವ್ಯವಹಾರ ಪ್ರಕರಣದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಕ್ಲೀನ್ ಚಿಟ್ ನೀಡಿರುವುದಕ್ಕೆ ಜೆಡಿಎಸ್ ಅಸಮಾಧಾನ ವ್ಯಕ್ತಪಡಿಸಿದೆ. ಸಹಕಾರ ಸಚಿವ ಮಹದೇವಪ್ರಸಾದ್ ಹಗರಣದಲ್ಲಿ ಡಿಕೆ ಶಿವಕುಮಾರ್ ಪಾತ್ರವಿರುವ ಬಗ್ಗೆ ದಾಖಲೆ ಲಭ್ಯವಾಗಿಲ್ಲ ಎಂದು ಹೇಳಿದ್ದರು.
ಜೆಡಿಎಸ್ ವಕ್ತಾರ ರಮೇಶ್ ಬಾಬು ಅವರು ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಹಗರಣದ ಕುರಿತು ಹಿರಿಯ ಐಎಎಸ್ ಅಧಿಕಾರಿ ಜಿ.ವಿ.ಕೆ. ರಾವ್ ಏಕಸದಸ್ಯ ತನಿಖಾ ಸಮಿತಿಯು ನೀಡಿದ ವರದಿಯನ್ನು ಸರ್ಕಾರ ಬಹಿರಂಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ತನಿಖಾ ವರದಿಯಲ್ಲಿ ಗೃಹ ನಿರ್ಮಾಣ ಸಹಕಾರ ಸಂಘಗಳ ಅವ್ಯವಹಾರಗಳನ್ನು ಎಳೆ-ಎಳೆಯಾಗಿ ಬಯಲು ಮಾಡಲಾಗಿದೆ. ಆದರೆ, ಸರ್ಕಾರ ಈ ವರದಿಯನ್ನು ಇದುವರೆಗೂ ಸದನದ ಅಥವ ಸಾರ್ವಜನಿಕರ ಮುಂದೆ ಮಂಡಿಸುವ ಪ್ರಯತ್ನವನ್ನು ಮಾಡಿರುವುದಿಲ್ಲ ಎಂದು ಪಕ್ಷ ಆರೋಪಿಸಿದೆ. [ದೇವೇಗೌಡ, ಪರಮೇಶ್ವರ ನಡುವೆ ಕಚೇರಿ ಕಿತ್ತಾಟ]
ಜಿ.ವಿ.ಕೆ. ರಾವ್ ತನಿಖಾ ವರದಿಯನ್ನು ಅಧ್ಯಯನ ಮಾಡದೇ ಸಹಕಾರ ಸಚಿವರು ಡಿ.ಕೆ. ಶಿವಕುಮಾರ್ ರವರ ವಿರುದ್ಧ ಯಾವುದೇ ದಾಖಲೆಗಳಿಲ್ಲ ಎಂದು ಹೇಳುವುದರ ಮೂಲಕ ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದ ಅವ್ಯವಹಾರಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪಕ್ಷ ದೂರಿದೆ.
ಯಾವುದೇ ಆರೋಪಿಯನ್ನು ರಕ್ಷಣೆ ಮಾಡುವ ಉದ್ದೇಶ ಸಚಿವರಿಗೆ ಇಲ್ಲದಿದ್ದರೆ ಮುಂಬರುವ ಬರುವ ಅಧಿವೇಶನದಲ್ಲಿ ಜಿ.ವಿ.ಕೆ. ರಾವ್ ಸಮಿತಿಯ ವರದಿಯನ್ನು ಸದನದ ಮುಂದೆ ಮಂಡಿಸಲಿ. ಇದರ ಜೊತೆಗೆ ಸಮಿತಿಯ ವರದಿಯ ನಂತರ ಇಲ್ಲಿಯವರೆಗೆ ಶಾಂತಿನಗರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ನಡೆದಿರುವ ಜಮೀನು ಸ್ವಾಧೀನ, ನಿವೇಶನ ಹಂಚಿಕೆ ಹಾಗೂ ಸದಸ್ಯರ ಮಾಹಿತಿಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸಲಿ ಎಂದು ಪಕ್ಷ ಸವಾಲು ಹಾಕಿದೆ.












Click it and Unblock the Notifications