ಬೇರೆ ರಾಜ್ಯಗಳ ಚುನಾವಣಾ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರುವುದಿಲ್ಲ: ಸಿದ್ದರಾಮಯ್ಯ
ಬೆಂಗಳೂರು,ಡಿಸೆಂಬರ್ 6: ಬೇರೆ ರಾಜ್ಯಗಳ ಚುನಾವಣಾ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ವಿಧಾನಸೌಧದ ಮುಂಭಾಗ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಆಯಾ ರಾಜ್ಯದ ಸಮಸ್ಯೆಗಳು ಬೇರೆ ಬೇರೆ. ಹೀಗಾಗಿ ಈ ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರಲ್ಲ. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮತಗಟ್ಟೆ ಸಮೀಕ್ಷೆ ವಿಚಾರವಾಗಿ ಮಾತನಾಡುತ್ತಾ, ಡಿಸೆಂಬರ್ 8ರ ವರೆಗೆ ಕಾಯೋಣ ಇರಿ ಎಂದರು.
ಆಮ್ ಆದ್ಮಿ ಪಾರ್ಟಿ ಕಾಂಗ್ರೆಸ್ ಮತಗಳನ್ನು ಪಡೆಯುತ್ತಿದೆ ಎಂಬುದು ನಿಜ. ಆಮ್ ಆದ್ಮಿ ಪಾರ್ಟಿ ಈಟಿಂಗ್ ದಿ ಕಾಂಗ್ರೆಸ್ ವೋಟ್ಸ್ ಎಂದು ಅವರು ಪ್ರತಿಕ್ರಿಯಿಸಿದರು.

ಇನ್ನೂ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದದ ವಿಚಾರವಾಗಿ ಮಾತನಾಡಿ, ಗಡಿ ಭಾಗದ ವಿವಾದವನ್ನು ಜೀವಂತವಾಗಿಡಲು ಮಹಾರಾಷ್ಟ್ರದವರು ಹೀಗೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ. ಮಹಾಜನ್ ಮಹಾರಾಷ್ಟ್ರದವರು, ಅವರೇ ಕೊಟ್ಟ ವರದಿ ಒಪ್ಪಿಲ್ಲ ಅಂದ್ರೆ ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಚಾಮರಾಜಪೇಟೆಯಲ್ಲಿ ಎಲೆಕ್ಷನ್ ಗೆ ನಿಲ್ಲುವಂತೆ ಶಾಸಕ ಜಮೀರ್ ಆಹ್ವಾನ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ನಮ್ಮ ಮಾವ ಚಾಮರಾಜಪೇಟೆಯವರು. ಅದಕ್ಕಾಗಿ ಜಮೀರ್ ಹಾಗೆ ಹೇಳಿರಬೇಕು.
ನಾನು ಎಲ್ಲಿ ಸ್ಪರ್ಧೆ ಮಾಡಬೇಕು ಎಂಬ ತೀರ್ಮಾನವನ್ನ ಹೈಕಮಾಂಡ್ ಗೆ ಬಿಟ್ಟಿದ್ದೇನೆ ಎಂದು ಹೇಳಿದರು.
ಬಿಜೆಪಿಯಿಂದ ರೌಡಿ ಶೀಟರ್ ಗಳನ್ನ ಪಕ್ಷಕ್ಕೆ ಸೇರ್ಪಡೆ ವಿಚಾರವಾಗಿ ಮಾತನಾಡಿ, ರೌಡಿಗಳನ್ನ ಸೇರಿಸಿಕೊಳ್ಳುತ್ತಿದ್ದಾರೆ. ಏನು ಉದ್ದೇಶ..? ಬಿಜೆಪಿ, ಆರ್ ಎಸ್ ಎಸ್ ನವರ ಸಂಸ್ಕೃತಿಯೇ ಅದು. ಅವರ ಸಂಸ್ಕೃತಿಯೇ ರೌಡಿ ಸಂಸ್ಕೃತಿ ಸುಮ್ಮನೆ ಆಚಾರ ವಿಚಾರ ಅಂತ ಹೇಳ್ತಾರೆ. ಆದರೆ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ತಾರೆ. ಆದರೆ ಅವರದ್ದು ರೌಡಿ ಸಂಸ್ಕೃತ ಎಂದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.












Click it and Unblock the Notifications