ಬಲಿಜ ಸಮಾಜಕ್ಕೆ ಮೀಸಲಾತಿ ನನ್ನ ದೃಢ ಸಂಕಲ್ಪ – ಸಿದ್ದರಾಮಯ್ಯ
ಬೆಂಗಳೂರು, ಮೇ 30: ರಾಜ್ಯದಲ್ಲಿರುವ ಬಲಿಜ ಸಮಾಜದ ಜನರಿಗೆ ಮೀಸಲಾತಿ ನೀಡುವುದು ನನ್ನ ದೃಢ ಸಂಕಲ್ಪ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆಯಾಗಿದ್ದ ರಾಜ್ಯ ಮಟ್ಟದ ಬಲಿಜ ಸಮಾವೇಶ ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.

ಇದೇ ಸಂದರ್ಭದಲ್ಲಿ ಅವರು, "ಬಲಿಜ ಸಮಾಜ ಸಾಮಾಜಿಕ ಮತ್ತು ಆರ್ಥಿಕವಾಗಿ ಮುಂದೆ ಬರಬೇಕು. ಇದಕ್ಕಾಗಿ ಸಮುದಾಯದ ಜನರು ಶಿಕ್ಷಣ ಪಡೆಯಬೇಕು," ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, "ಎರಡು ರಾಷ್ಟ್ರೀಯ ಪಕ್ಷಗಳು ಏನು ಮಾಡುತ್ತವೆ ನೋಡುತ್ತೇನೆ. ಒಬ್ಬರು ಕೇಂದ್ರದಲ್ಲಿ, ಇನ್ನೊಬ್ಬರು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾರೆ. ಇವರಿಂದ ಬಲಿಜ ಸಮುದಾಯಕ್ಕೆ ಯಾವ ಕೊಡುಗೆ ಸಿಗುತ್ತೆ ನೋಡೋಣ," ಎಂದು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದರು. ಪಿಸಿ ಮೋಹನ್ ನೇತೃತ್ವದಲ್ಲಿ ನಡೆದ ಬಲಿಜ ಸಮಾವೇಶದಲ್ಲಿ ಸಮುದಾಯಕ್ಕೆ ಹಿಂದುಳಿದ ವರ್ಗದಲ್ಲಿ 2A ಮೀಸಲಾತಿ ನೀಡಬೇಕು ಎಂಬ ಒತ್ತಾಯ ಕೇಳಿ ಬಂತು.

ಇನ್ನು ಬಲಿಜ ಸಮುದಾಯದ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಡೇರಿಸಿಲ್ಲ ಎಂದು ಯಡಿಯೂರಪ್ಪ ಆರೋಪಿಸಿದರು. ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ 24 ಗಂಟೆಗಳೊಳಗೆ ಸಮುದಾಯದ ಬೇಡಿಕೆಗಳನ್ನು ಇಡೇರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕರ್ನಾಟಕ ಬಲಿಜ ಮಹಾಸಭಾ ಈ ಬೃಹತ್ ಸಮಾವೇಶವನ್ನು ಆಯೋಜಿಸಿತ್ತು. ಇನ್ನು ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್, ಡಿವಿ ಸದಾನಂದ ಗೌಡ, ಸಂಸದ ಪಿಸಿ ಮೋಹನ್, ನಟಿ ಹಾಗೂ ಶಾಸಕಿ ತಾರಾ ಅನುರಾಧ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.












Click it and Unblock the Notifications