ಪಂಚಮಸಾಲಿ ಮೀಸಲಾತಿ; ಸಂಪುಟ ಸಭೆಯ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ: ಸಿಸಿ ಪಾಟೀಲ್
ಬೆಂಗಳೂರು,ಜನವರಿ 14: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಕೇ ಬೇಕು ಎಂದು ಹಠ ಹಿಡಿದು ಪ್ರತಿಭಟನೆಗೆ ಕುಳಿತಿರುವ ಜಯಮೃತ್ಯುಂಜ ಸ್ವಾಮೀಜಿ ಹಾಗೂ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಪ್ರತಿಭಟನೆಯನ್ನು ನಾವು ಖಂಡಿಸುತ್ತೇವೆ ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಹೇಳಿದರು.
ಈ ಕುರಿತು ಶನಿವಾರ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸದಲ್ಲಿದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮೀಸಲಾತಿ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಲೂ ಬದ್ಧರಿದ್ದಾರೆ. ಆದರೆ ನಿನ್ನೆ ಮುಖ್ಯಮಂತ್ರಿಗಳ ನಿವಾಸದ ಬಳಿ ಜಯಮೃತ್ಯುಂಜ ಸ್ವಾಮೀಜಿ ಮಾಡಿದ ಪ್ರತಿಭಟನೆಯನ್ನ ಖಂಡಿಸುತ್ತೇನೆ. ಪ್ರತಿಭಟನೆಯ ವೇಳೆ ಸಿಎಂ ಪ್ರತಿಕೃತಿ ದಹನ ಮಾಡಿದನ್ನ ಖಂಡಿಸುತ್ತೇನೆ ಎಂದರು.
ಪೀಠಗಳ ಅಭಿವೃದ್ಧಿಗೆ ಸರ್ಕಾರ ಕಂಕಣ ಬದ್ಧವಾಗಿದೆ: ಬಸವರಾಜ ಬೊಮ್ಮಾಯಿ
ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಯತ್ನಾಳ್ ಅವರು 2ಎ ಮೀಸಲಾತಿ ಕೊಡಲು ಸಿಎಂ ವಿಫಲರಾಗಿದ್ದಾರೆಂದು ಪ್ರತಿಭಟನೆ ಮಾಡಿದಾರೆ, ಅವರ ಪ್ರತಿಭಟನೆಯನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ನವರ ಜೊತೆಗೆ ಸೇರಿ ಪ್ರತಿಭಟನೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು 2ಎ ಮೀಸಲಾತಿ ಕೊಡಬಾರದು ಅಂತ ನಿರ್ಣಯ ಮಾಡಿದ್ದರು. ಅಂಥವರ ಜತೆ ಸೇರಿ ಹೋರಾಟ ಮಾಡಿದ್ದಾರೆ. ಹೈವೇ ಬಂದ್ ಮಾಡಿದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಹೋರಾಟಗಾರರ ಜತೆ ಮಾತನಾಡಿದ್ದಾರೆ. ನಾವೆಲ್ಲ 2ಎ ಮೀಸಲಾತಿ ಕೊಡಿ ಅಂತ ಒತ್ತಡ ಹಾಕಿದ್ದೇವೆ. ಮುಖ್ಯಮಂತ್ರಿಗಳು ಸಪಹ ಎಲ್ಲ ಸಮುದಾಯಗಳ ಬಗ್ಗೆನೂ ಗಮನ ಕೊಡಬೇಕಾಗಿದೆ. ಎಲ್ಲರಿಗೂ ನ್ಯಾಯ ಕೊಡುತ್ತಾರೆ. ಇದನ್ನೆಲ್ಲ ಸ್ವಾಮೀಜಿಗಳು ಅರ್ಥಮಾಡಿಕೊಳ್ಳಬೇಕು ಎಂದರು.
ಇನ್ನೂ ಅವರ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ. ಎಷ್ಟು ಸಲ ಸಿಎಂ ಮನೆ ಮೇಲೆ ಮುತ್ತಿಗೆ ಹಾಕ್ತೀರಾ.? ಹಿಂದುಳಿದ ವರ್ಗಗಳ ಅಂತಿಮ ವರದಿ ಬಂದ ಮೇಲೆ ಸಿಎಂ ನಿರ್ಧಾರ ತಗೋತಾರೆ. ಆದರೂ ಆಯೋಗದಿಂದ ಮಧ್ಯಂತರ ವರದಿ ಪಡೆದು ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಮೀಸಲಾತಿ ಬಗ್ಗೆ ನಿರ್ಧರಿಸಿದ್ದಾರೆ. ಇದಕ್ಕೆ ಹೋರಾಟಗಾರರು ಮೆಚ್ಚುಗೆ ವ್ಯಕ್ತಪಡಿಸಬೇಕಿತ್ತು ಎಂದು ತಿಳಿಸಿದರು.
ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಕ್ಯಾಬಿನೆಟ್ ಸಭೆಯ ನಿರ್ಧಾರದಲ್ಲಿ ಯಾವುದೇ ಗೊಂದಲ ಇಲ್ಲ. ಈಗಲೂ ಸಂಪುಟ ಸಭೆಯ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ. ಕಾನೂನು ತಜ್ಞರ ಅಭಿಪ್ರಾಯ ಪಡೆದೇ ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎಂದು ಹೇಳಿದರು.
ಯತ್ನಾಳ್ ಅವರು ಹಿರಿಯರು. ನಮ್ಮ ವಿರುದ್ಧ, ಸಿಎಂ ವಿರುದ್ಧ ಹೀಗೆಲ್ಲ ಮಾತಾಡೋದು ಅವರಿಗೆ ಶೋಭೆ ತರಲ್ಲ. ಯತ್ನಾಳ್ ಅವರ ಮೇಲೆ ನಮಗೇನೂ ಭಯ ಇಲ್ಲ. ಅವರು ಹಿರಿಯರು, ಕೇಂದ್ರದಲ್ಲಿ ಸಚಿವರಾಗಿದ್ದವರು. ಹಾಗಾಗಿ ನಾವು ಶಾಂತರಾಗಿದ್ದೇವೆ. ಯತ್ನಾಳ್ ಹೇಳಿಕೆಗಳು ಪಕ್ಷದ ವರಿಷ್ಠರ ಗಮನಕ್ಕೆ ಬಂದಿದೆ ಎಂದು ಹೇಳಿದರು.