ರೇಣುಕಾಸ್ವಾಮಿ ಹತ್ಯೆ; ಚಿನ್ನಾಭರಣವನ್ನೂ ದೋಚಿದ್ದ ಗ್ಯಾಂಗ್!
ಬೆಂಗಳೂರು, ಜೂನ್ 16; ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಮುಂದುವರೆದಿದೆ. ಶನಿವಾರ ನಟ ದರ್ಶನ್ ಸೇರಿ ಎಲ್ಲಾ ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಿ ಪೊಲೀಸರು ಜೂನ್ 20ರ ತನಕ ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿಕೊಂಡು ಬಂದು ಬೆಂಗಳೂರಿನ ಶೆಡ್ನಲ್ಲಿ ಕೂಡಿ ಹಾಕಿ, ಹಲ್ಲೆ ನಡೆಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ ಎಂಬುದು ಆರೋಪವಾಗಿದೆ. ದೇಶಾದ್ಯಂತ ಈ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದೆ. ನಟ ದರ್ಶನ್ಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಅಕ್ಟೋಬರ್ 30ರ ಅಪ್ಡೇಟ್: ರೇಣುಕಾಸ್ವಾಮಿ ಕೊಲೆ ಪ್ರಕರಣ. ಕನ್ನಡ ನಟ ದರ್ಶನ್ಗೆ ಮಧ್ಯಂತರ ಜಾಮೀನು ಮಂಜೂರು. ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್. 6 ವಾರಗಳ ಕಾಲ ಮಧ್ಯಂತರ ಜಾಮೀನು.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮೋರಿಗೆ ಶವವನ್ನು ಎಸೆಯಲಾಗಿತ್ತು. ಆದರೆ ರೇಣುಕಾಸ್ವಾಮಿ ಶವವನ್ನು ಮೋರಿಗೆ ಎಸೆಯುವ ಮೊದಲು ಆರೋಪಿಗಳು ಆತನ ಚಿನ್ನಾಭರಣವನ್ನು ದೋಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಚಿನ್ನಾಭರಣಗಳಿಲ್ಲ: ರೇಣುಕಾಸ್ವಾಮಿಯ ಚಿನ್ನದ ಸರ, ಕಡಗ, ಉಂಗುರಗಳು ಶವದ ಮೇಲಿರಲಿಲ್ಲ. ಪೊಲೀಸರ ವಶದಲ್ಲಿರುವ ರವಿ ಎಂಬ ಆರೋಪಿ ಜಗ್ಗ ಎಂಬ ಆರೋಪಿ ಶವವನ್ನು ಎಸೆಯುವ ಮೊದಲು ಚಿನ್ನಾಭರಣಗಳನ್ನು ಬಿಚ್ಚಿಕೊಂಡಿದ್ದ ಎಂದು ವಿಚಾರಣೆ ವೇಳೆ ಹೇಳಿದ್ದಾನೆ.
ಈಗಾಗಲೇ ಮತ್ತೆ ಆರೋಪಿಗಳನ್ನು ಜೂನ್ 20ರ ತನಕ ವಶಕ್ಕೆ ಪಡೆದಿರುವ ಕಾಮಾಕ್ಷಿಪಾಳ್ಯ ಪೊಲೀಸರು ಚಿನ್ನಾಭರಣದ ತನಿಖೆಯನ್ನು ಸಹ ಕೈಗೊಳ್ಳಲಿದ್ದಾರೆ. ಚಿನ್ನಾಭರಣವನ್ನು ಆರೋಪಿ ಮನೆಯಲ್ಲಿ ಇಟ್ಟಿದ್ದಾನೆಯೇ? ಅಥವ ಚಿತ್ರದುರ್ಗದಲ್ಲಿ ಗಿರವಿ ಇಟ್ಟಿರುವ ಸಾಧ್ಯತೆಯೂ ಇದ್ದು, ಈ ಕುರಿತು ತನಿಖೆ ನಡೆಯಲಿದೆ.
ರೇಣುಕಾಸ್ವಾಮಿ ಮನೆಯಿಂದ ಹೊರಡುವಾಗ ಮೈಮೇಲೆ ಚಿನ್ನಾಭರಣವಿತ್ತು. ಶೆಡ್ನಲ್ಲಿಯೂ ಇತ್ತು. ಶೆಡ್ನಲ್ಲಿ ರೇಣುಕಾಸ್ವಾಮಿ ಬಟ್ಟೆಯನ್ನು ಬಿಚ್ಚಿಸಿ ಆರೋಪಿಗಳು ಚಿತ್ರಹಿಂಸೆ ನೀಡಿದ್ದಾರೆ. ಕರೆಂಟ್ ಶಾಕ್ ನೀಡಿದ್ದಾರೆ ಎಂದು ಶನಿವಾರ ನ್ಯಾಯಾಲಯದಲ್ಲಿ ಎಸ್ಪಿಪಿಯೇ ವಾದ ಮಂಡಿಸಿದ್ದರು.
ರೇಣುಕಾಸ್ವಾಮಿಯನ್ನು ಚಿತ್ರದುರ್ಗದಲ್ಲಿ ಕಿಡ್ನಾಪ್ ಮಾಡುವಾಗ ಆತ ಧರಿಸಿದ್ದ ಬಟ್ಟೆಯೇ ಬೇರೆ. ಆದರೆ ಮೋರಿಯಲ್ಲಿ ಶವ ಸಿಕ್ಕಾಗ ಹಾಕಿದ್ದ ಬಟ್ಟೆಯೇ ಬೇರೆ. ಶವದ ಬಟ್ಟೆ ಬದಲಾಯಿಸಿ ಮೋರಿಗೆ ಎಸೆಯುವಾಗ ಚಿನ್ನಾಭರಣಗಳನ್ನು ಆರೋಪಿಗಳು ದೋಚಿದ್ದಾರೆ ಎಂಬುದು ಆರೋಪವಾಗಿದೆ.
ಕಾಮಾಕ್ಷಿಪಾಳ್ಯ ಪೊಲೀಸರು ದರ್ಶನ್ ಹೊರತುಪಡಿಸಿ ಇತರ ಆರೋಪಿಗಳನ್ನು ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿ ಅಪಹರಣದ ಬಗ್ಗೆ ಸ್ಥಳ ಮಹಜರು ಮಾಡಲಿದ್ದಾರೆ. ಆಗ ಚಿನ್ನಾಭರಣ ಗಿರವಿ ಇಟ್ಟಿರುವ ಕುರಿತು ಅಥವ ಆರೋಪಿ ಮನೆಯಲ್ಲಿ ಚಿನ್ನಾಭರಣ ಇರುವ ಕುರಿತು ಮಹಜರು ಮಾಡಲಿದ್ದಾರೆ.
ಶನಿವಾರ ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆದ ಪೊಲೀಸರು ಕರೆಂಟ್ ಶಾಕ್ ನೀಡಲು ಬಳಕೆ ಮಾಡಿದ ಉಪಕರಣವನ್ನು ವಶಕ್ಕೆ ಪಡೆಯಬೇಕಿದೆ. ಅಲ್ಲದೇ ದರ್ಶನ್ರನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಬೇಕಿದೆ ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಬಳಿಕ, ಶವವನ್ನು ಮೋರಿಗೆ ಹಾಕಿದ ನಂತರ ದರ್ಶನ್ ಬೆಂಗಳೂರು ಬಿಟ್ಟು ಮೈಸೂರಿಗೆ ಹೋಗಿದ್ದರು. ಮೈಸೂರಿನ ಖಾಸಗಿ ಹೋಟೆಲ್ನಲ್ಲಿಯೇ ದರ್ಶನ್ರನ್ನು ಪೊಲೀಸರು ಬಂಧಿಸಿದ್ದರು. ಆದ್ದರಿಂದ ಅಲ್ಲಿ ಸ್ಥಳ ಮಹಜರು ನಡೆಸಲಿದ್ದಾರೆ.
ಅಲ್ಲದೇ ಪೊಲೀಸರು ಆರೋಪಿಗಳಿಗೆ ಶವ ಎಸೆಯಲು ದರ್ಶನ್ 30 ಲಕ್ಷ ಹಣ ನೀಡಿದ್ದರು ಎಂಬ ಆರೋಪದ ಕುರಿತು ಸಹ ತನಿಖೆ ನಡೆಸಲಿದ್ದಾರೆ. ಹಣ ಎಲ್ಲಿಂದ ಬಂತು?, ಯಾರು ನೀಡಿದರು?, ಹಣ ಸೇರಿದ್ದು ಯಾರಿಗೆ? ಎಂಬ ಮಾಹಿತಿಯನ್ನು ಸಂಗ್ರಹ ಮಾಡಲಿದ್ದಾರೆ.
6 ದಿನಗಳ ಪೊಲೀಸ್ ಕಸ್ಟಡಿ ಬಳಿಕ ದರ್ಶನ್ ಮತ್ತು ಇತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಪೊಲೀಸರು ತನಿಖೆ ಇನ್ನೂ ಬಾಕಿ ಇದೆ. ಜೂನ್ 23ರ ತನಕ ವಶಕ್ಕೆ ನೀಡುವಂತೆ ಕೋರ್ಟ್ಗೆ ಮನವಿ ಮಾಡಿದ್ದರು. ಆದರೆ ಕೋರ್ಟ್ ಜೂನ್ 20ರ ತನಕ ವಶಕ್ಕೆ ನೀಡಿದೆ.












Click it and Unblock the Notifications