ಮಂಡ್ಯ, ಮೈಸೂರಲ್ಲಿ ಬಂಡಾಯ : ವೇಣುಗೋಪಾಲ್ ಅಸಮಾಧಾನ
Recommended Video
ಬೆಂಗಳೂರು, ಏಪ್ರಿಲ್ 7 : ಹೈಕಮಾಂಡ್ ನೀಡಿದ ಸೂಚನೆ ಪಾಲನೆಯಾಗುತ್ತಿಲ್ಲ. ಮಂಡ್ಯ, ಮೈಸೂರು ಕ್ಷೇತ್ರದ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ರಾಜ್ಯದ ನಾಯಕರಿಗೆ ಸೂಚನೆ ನೀಡಿದರು.
ಬೆಂಗಳೂರಿನ ಅಶೋಕ ಹೋಟೆಲ್ನಲ್ಲಿ ಭಾನುವಾರ ಕೆ.ಸಿ.ವೇಣುಗೋಪಾಲ್ ಅವರು ಪಕ್ಷದ ನಾಯಕರ ಜೊತೆ ಸಭೆ ನಡೆಸಿದರು. 28 ಕ್ಷೇತ್ರಗಳ ಚುನಾವಣಾ ಸಿದ್ಧತೆಗಳ ಕುರಿತು ಮಾಹಿತಿ ಸಂಗ್ರಹಿಸಿದರು. ಹಲವಾರು ಸೂಚನೆಗಳನ್ನು ನೀಡಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರಮುಖವಾಗಿ ಮಂಡ್ಯ ಮತ್ತು ಮೈಸೂರು ಕ್ಷೇತ್ರದಲ್ಲಿನ ಕಾಂಗ್ರೆಸ್ ನಾಯಕರ ಬಂಡಾಯದ ಬಗ್ಗೆ ಚರ್ಚೆ ನಡೆಯಿತು.
ಕರ್ನಾಟಕದಲ್ಲಿ ನರೇಂದ್ರ ಮೋದಿ ಸಮಾವೇಶದ ಸ್ಥಳ, ದಿನಾಂಕಗಳು
ಈ ಸಭೆಯ ಬಳಿಕ ಸಿದ್ದರಾಮಯ್ಯ ಅವರು ಮಾಜಿ ಸಚಿವ ಚಲುವರಾಯಸ್ವಾಮಿ ಅವರ ಜೊತೆ ಸಭೆ ನಡೆಸುತ್ತಿದ್ದಾರೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಲು ಚಲುವರಾಯಸ್ವಾಮಿ ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ, ಸಿದ್ದರಾಮಯ್ಯ ಅವರು ಸಂಧಾನ ನಡೆಸಲಿದ್ದಾರೆ.
ವಿಳಾಸದ ವಿಚಾರದಲ್ಲಿ ಸಿದ್ದರಾಮಯ್ಯ, ಡಿವಿಎಸ್ ನಡುವೆ ಕಿತ್ತಾಟ!
ಸಿದ್ದರಾಮಯ್ಯ ಹೇಳಿದ್ದೇನು?
ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, '28 ಕ್ಷೇತ್ರಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಎಲ್ಲಿ ಹೆಚ್ಚು ಪ್ರಚಾರ ನಡೆಸಬೇಕು. ಯಾವ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ಸಮಾಲೋಚನೆ ನಡೆಸಿದ್ದೇವೆ. ಏ.12ರಂದು ಮಂಡ್ಯದಲ್ಲಿ ಪ್ರಚಾರ ನಡೆಸುತ್ತೇನೆ' ಎಂದು ಹೇಳಿದರು.
ಒಟ್ಟಾಗಿ ಕೆಲಸ ಮಾಡುವರು
ಸಭೆ ಬಳಿಕ ಮಾತನಾಡಿದ ಕೆ.ಸಿ.ವೇಣುಗೋಪಾಲ್ ಅವರು, 'ಕೆಲವೊಂದು ಕ್ಷೇತ್ರದಲ್ಲಿ ಸಮಸ್ಯೆ ಉಂಟಾಗಿದೆ. ಅವುಗಳನ್ನು ಬಗೆಹರಿಸಲಾಗುತ್ತದೆ. ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಎಲ್ಲಾ ನಾಯಕರು ಒಟ್ಟಾಗಿ ಕೆಲಸ ಮಾಡಲಿದ್ದಾರೆ' ಎಂದರು.
ಏ.13, 18ರಂದು ರಾಹುಲ್ ಸಮಾವೇಶ
'ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏಪ್ರಿಲ್ 13 ಮತ್ತು 18ರಂದು ರಾಜ್ಯದಲ್ಲಿ ಪ್ರಚಾರ ನಡೆಸಲು ಆಗಮಿಸುತ್ತಿದ್ದಾರೆ. ಸಮಾವೇಶ ಯಶಸ್ವಿಗೊಳಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ' ಎಂದು ಕೆ.ಸಿ.ವೇಣುಗೋಪಾಲ್ ಹೇಳಿದರು.
ಸಿದ್ದರಾಮಯ್ಯ ಸಮರ್ಥನೆ
ಯಾವುದೇ ಕಾರಣಕ್ಕೂ ಮೈತ್ರಿಗೆ ಧಕ್ಕೆ ಆಗಬಾರದು ಎಂದು ಕೆ.ಸಿ.ವೇಣುಗೋಪಾಲ್ ಸೂಚನೆ ನೀಡಿದರು. ತುಮಕೂರು ಕ್ಷೇತ್ರದಲ್ಲಿ ಉಂಟಾದ ಗೊಂದಲ ಬಗೆ ಹರಿಸಿದ್ದೇವೆ. ರಾಹುಲ್ ಗಾಂಧಿ ಸಮಾವೇಶಗಳು ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.