Ration Card: ರಾಜ್ಯದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಇಷ್ಟೇ ದಿನ ಅವಕಾಶ
Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಬರೀ ರೇಷನ್ ಪಡೆಯಲಷ್ಟೇ ಅಲ್ಲದೆ, ಸಣ್ಣಪುಟ್ಟ ಕೆಲಸಗಳಿಂದ ಹಿಡಿದು, ಯಾವುದೇ ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಮಾಡುವಾಗ ಕಡ್ಡಾಯವಾಗಿ ಬೇಕೇ ಬೇಕಾಗುತ್ತದೆ. ಇನ್ನು ಈಗಾಗಲೇ ರಾಜ್ಯದಲ್ಲಿ ಇದೇ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದ್ದು, ಇದು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಹಾಗಾದ್ರೆ ಕೊನೆ ದಿನಾಂಕ ಯಾವಾಗ ಹಾಗೂ ಯಾವೆಲ್ಲಾ ದಾಖಲೆಗಳು ಬೇಕೆನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್ಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಈಗಾಗಲೇ ಕೆಲ ತಿಂಗಳುಗಳ ಹಿಂದೆ ಈ ಮಹತ್ವದ ಕಾರ್ಯಕ್ಕೆ ಸರ್ಕಾರ ಮುಂದಾಗಿತ್ತು. ಆದರೆ, ಈ ವೇಳೆ ಬಡವರ ಬಳಿಯ ಬಿಪಿಎಲ್ ಕಾರ್ಡ್ಗಳನ್ನು ಸಹ ರದ್ದುಪಡಿಸುತ್ತಿದ್ದಾರೆ ಎಂದು ಆರೋಪಿಸಿ ಹಲವು ಜಿಲ್ಲೆಗಳಲ್ಲಿ ಜನರು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರಹಾಕಿದ್ದರು.

ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಯಾರೆಲ್ಲ ಬಡವರ ಬಳಿಯ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದೆಯೋ ಅಂತಹವರಿಗೆ ಮತ್ತೆ ಬಿಪಿಎಲ್ ಕಾರ್ಡ್ ಅನ್ನು ಹಿಂತಿರುಗಿಸಲಾಗುವುದು. ಅಲ್ಲದೆ, ಅವರಿಗೆ ತಲುಪಬೇಕಾದ ಪಡಿತರವನ್ನು ತಲುಪಿಸುವ ಕೆಲಸ ಮಾಡಲಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿತ್ತು. ಆದರೆ, ಬಳಿಕವೂ ಕೂಡ ಹೆಚ್ಚು ಅನರ್ಹರು ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಲಿದ್ದವು.
ಇದೀಗ ಮತ್ತೆ ಸರ್ಕಾರ ಅನರ್ಹರ ಬಳಿಯಿರುವ ಬಿಪಿಎಲ್ ಕಾರ್ಡ್ಗಳನ್ನು ಪರಿಶೀಲನೆ ನಡೆಸಿ ರದ್ದುಪಡಿಸುವ ಕಾರ್ಯಕ್ಕೆ ಮುಂದಾಗಿದೆ. ಅರ್ಹರಲ್ಲದವರು ಸಹ ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದು, ಇದರಿಂದ ಬಡವರಿಗೆ ಅನ್ಯಾಯ ಆಗುತ್ತಿದೆ. ಇದನ್ನು ತಡೆಗಟ್ಟಲೆಂದೇ ರಾಜ್ಯ ಸರ್ಕಾರ ಪರಿಶೀಲನೆಗೆ ಮುಂದಾಗಿದೆ. ಅಲ್ಲದೆ, ಅನರ್ಹರು ತಾವಾಗಿವೇ ಬಿಪಿಎಲ್ ಪಡಿತರ ಚೀಟಿಗಳನ್ನು ವಾಪಾಸ್ ನೀಡುವಂತೆಯೂ ಮನವಿ ಮಾಡಿದೆ. ಈ ನಡುವೆಯೇ ಮತ್ತೊಂದೆಡೆ ತಿದ್ದುಪಡಿ ದಿನಾಂಕ ಮುಗಿಯತ್ತಾ ಬರುತ್ತಿದ್ದು, ಪಡಿತರ ಚೀಟಿ ತಿದ್ದುಪಡಿಗೆ ಇನ್ನೂ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ.
ರಾಜ್ಯದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ಚೀಟಿಗಳ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ದಾಖಲೆ ಪರಿಷ್ಕರಣೆಗೆ ಇದೇ ಆಗಸ್ಟ್ 31, 2025 ಕೊನೆಯ ದಿನಾಂಕವಾಗಿದೆ. ಆದ್ದರಿಂದ ಯಾರೆಲ್ಲ ತಿದ್ದುಪಡಿ ಮಾಡಿಸಬೇಕೋ ಈ ದಿನಾಂಕದೊಳಗೆ ಮಾಡಿಸಿಕೊಂಡರೆ ಉತ್ತಮ. ಯಾಕಂದ್ರೆ ಈ ದಿನಾಂಕ ಮುಂದೂಡಿಕೆ ಆಗಲೂಬಹದು ಅಥವಾ ಸಂಪೂರ್ಣವಾಗಿ ನಿಲ್ಲಿಸುವ ಸಾಧ್ಯತೆಯೂ ಇದೆ. ಮತ್ತೆ ಯಾವಾಗ ಈ ಅವಕಾಶ ಸಿಗುತ್ತದೆಯೋ ಗೊತ್ತಿಲ್ಲ.
ಪಡಿತರ ಚೀಟಿ ಬರೀ ರೇಷನ್ ಪಡೆಯಲು ಮಾತ್ರವಲ್ಲದೆ, ನಾಗರಿಕರ ಅಧಿಕೃತ ಗುರುತಿನ ಚೀಟಿಯಾಗಿದೆ. ಹಲವಾರು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅಗತ್ಯ ಪ್ರಮುಖ ದಾಖಲೆಯಾಗಿದೆ. ಆದ್ದರಿಂದ ರೇಷನ್ ಕಾರ್ಡ್ನಲ್ಲಿ ಯಾವುದೇ ತಿದ್ದಪಡಿ ಮಾಡಿಸಬೇಕೆಂದರೂ ಇನ್ನೆರಡು ದಿನದೊಳಗೆ ಮಾಡಿಸಿಕೊಳ್ಳಿ.
ಪಡಿತರ ಚೀಟಿ ತಿದ್ದುಪಡಿಗೆ ಕೊನೇ ದಿನಾಂಕ ಆಗಸ್ಟ್ 31 ಆಗಿದ್ದು, ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಒನ್ ಕೇಂದ್ರಗಳು, ನಗರ ಪ್ರದೇಶಗಳಲ್ಲಿ ಬಿಬಿಎಂಪಿ ಹಾಗೂ ತಾಲೂಕು ಕಚೇರಿಗಳ ಮೂಲಕ ಈ ಸೇವೆ ಲಭ್ಯ ಇದ್ದು, ಇಲ್ಲಿ ತಿದ್ದಿಪಡಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
ತಿದ್ದುಪಡಿಗೆ ಬೇಕಾದ ಪ್ರಮುಖ ದಾಖಲೆಗಳು
* ಆಧಾರ್ ಕಾರ್ಡ್
* ಜನನ ಪ್ರಮಾಣ ಪತ್ರ ಅಥವಾ ಮದುವೆ ಪ್ರಮಾಣ ಪತ್ರ
* ವಿಳಾಸ ದೃಢೀಕರಣ (ವಿದ್ಯುತ್ ಬಿಲ್, ಬಾಡಿಗೆ ಒಪ್ಪಂದ ಇತ್ಯಾದಿ)
* ಹಳೇ ಪಡಿತರ ಚೀಟಿ ಪ್ರತಿ
* ಬಳಿಕ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿದರೆ, ಹೊಸ ಕಾರ್ಡ್ ನೀಡಲಾಗುತ್ತದೆ.












Click it and Unblock the Notifications