ಡಿವೈಎಸ್ಪಿ ಗಣಪತಿ ಊರು ರಂಗಸಮುದ್ರದಲ್ಲಿ ಕುದಿಮೌನ
ಮಡಿಕೇರಿ, ಜುಲೈ 11 : ದುರಂತ ಅಂತ್ಯ ಕಂಡ ಡಿವೈಎಸ್ಪಿ ಎಂ.ಕೆ. ಗಣಪತಿ ಅವರ ಸಾವಿನ ಸುದ್ದಿ ಇಡೀ ಜಿಲ್ಲೆಯನ್ನು ತಲ್ಲಣಿಸಿದ್ದರೆ, ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಸುದ್ದಿ ಹಲವು ಅನುಮಾನಗಳಿಗೆ ನೀರೆರೆಯುತ್ತಿದೆ. ಈ ಪ್ರಕರಣದಲ್ಲಿ ಸರ್ಕಾರ ನೀಡುತ್ತಿರುವ ಹೇಳಿಕೆ ಮತ್ತು ತೆಗೆದುಕೊಂಡಿರುವ ಕ್ರಮಗಳು ದಿನದಿಂದ ದಿನಕ್ಕೆ ಸಂಶಯವನ್ನು ಹುಟ್ಟು ಹಾಕುತ್ತಿದೆ.
ಆದರೆ ಮೃತ ಡಿವೈಎಸ್ಪಿ ಗಣಪತಿ ಅವರ ಹುಟ್ಟೂರು ಸೋಮವಾರಪೇಟೆ ತಾಲೂಕಿನ ಕುಶಾಲನಗರ ಬಳಿಯ ರಂಗಸಮುದ್ರದಲ್ಲಿ ನೀರವ ಮೌನ ಆವರಿಸಿದೆ. ಇಲ್ಲಿ ಚರ್ಚೆಗಳಿಲ್ಲ, ಪ್ರತಿಭಟನೆಗಳಿಲ್ಲ. ಆದರೆ, ಆಗಾಗ ಸುರಿವ ಮಳೆಯ ನಡುವೆಯೂ ಊರಿಗೆ ಊರೇ ಮೌನವಾಗಿ ಕಂಬನಿ ಮಿಡಿಯುತ್ತಿದೆ.
ಅಂತ್ಯಕ್ರಿಯೆ ಸಂದರ್ಭ ಕುಟುಂಬ ಸದಸ್ಯರು, ಅಪಾರ ಬಂಧು-ಬಳಗ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪೊಲೀಸರಿಂದ ತುಂಬಿ ತುಳುಕಿದ್ದ ಮನೆಯಲ್ಲಿ ಮಾತ್ರವಲ್ಲ, ಇಡೀ ಊರಿನಲ್ಲಿ ಅದೇನೋ ಒಂದು ರೀತಿಯ ಸೂತಕದ ವಾತಾವರಣ ನಿರ್ಮಾಣವಾಗಿದೆ. [Live : ಜಾರ್ಜ್ ರಾಜೀನಾಮೆಗೆ ಪರಿಷತ್ ನಲ್ಲಿ ಬಿಗಿ ಪಟ್ಟು]
ಈಗಾಗಲೇ ತನಿಖೆಯ ಹಂತದಲ್ಲಿ ಮಾಹಿತಿ ಸಂಗ್ರಹಿಸಲು ಸಿಐಡಿ ತಂಡ ರಂಗಸಮುದ್ರದ ಮನೆಗೆ ಭೇಟಿ ನೀಡಿ ತೆರಳಿದ್ದಾರೆ. ಇನ್ನು ಕುಟುಂಬದ ಸದಸ್ಯರು ಮಾಧ್ಯಮದವರಿಂದ ದೂರವಿರಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಮೃತ ಗಣಪತಿ ತಂದೆ ಕುಶಾಲಪ್ಪ ಮತ್ತು ಸಹೋದರ ಡಿವೈಎಸ್ಪಿ ತಮ್ಮಯ ಅವರು ವ್ಯತಿರಿಕ್ತ ಹೇಳಿಕೆ ನೀಡಿದ್ದು, ಇದು ಪ್ರಕರಣದ ದಿಕ್ಕು ತಪ್ಪಿಸಲು ಸರ್ಕಾರಕ್ಕೆ ಅನುಕೂಲವಾಗಿದೆ.
ಈ ನಡುವೆ, ಮಾಧ್ಯಮದವರಿಗೆ ಗಣಪತಿ ಅವರ ಸಹೋದರರು ರಂಗಸಮುದ್ರದ ಮನೆಯ ಆವರಣದಲ್ಲಿ ಆಕ್ರೋಶಗೊಂಡು ಬೈದು ಮಾಹಿತಿ ನೀಡಲು ನಿರಾಕರಿಸಿದ ಘಟನೆಯೂ ನಡೆದಿದೆ. ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಮ್ಮಯ್ಯ ಮಾಧ್ಯಮದವರ ಮುಂದೆ ಯಾವುದೇ ಮಾತನಾಡುತ್ತಿಲ್ಲ. ಕಾರಣ ಸರ್ಕಾರ ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳ ಒತ್ತಡವಿರಬಹುದೇನೋ. [ಚಿತ್ರಗಳು : ಪಂಚಭೂತಗಳಲ್ಲಿ ಲೀನರಾದ ಡಿವೈಎಸ್ ಪಿ ಗಣಪತಿ]
ಆದರೆ, ಎರಡನೇ ಸಹೋದರ ಮಾಚಯ್ಯ ಮಾತ್ರ ಪ್ರಕರಣದ ಬಗ್ಗೆ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹೊರ ಹಾಕಿದ್ದಾರೆ. ಅವರ ಪ್ರಕಾರ, ಗಣಪತಿ ಅವರ ಬಳಿ ಎರಡು ಪೆನ್ಡ್ರೈವ್, ಇತ್ತು ಅವುಗಳನ್ನು ಪೊಲೀಸರು ಸೀಸ್ ಮಾಡಿದ್ದಾರೆ ಎಂದು ವಿವರ ನೀಡಿದ್ದಾರೆ.
ಈಗಾಗಲೇ ರಂಗಸಮುದ್ರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಸಿ.ಟಿ.ರವಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಆದರೆ ಆಡಳಿತ ಪಕ್ಷದ ಪರ ಯಾವೊಬ್ಬ ಸಚಿವರು ಇತ್ತ ಸುಳಿದಿಲ್ಲ. ಉಸ್ತುವಾರಿ ಸಚಿವ ಸೀತರಾಂ ಇತ್ತ ಬಂದಿಲ್ಲ. ಜಿಲ್ಲೆಯಲ್ಲಿ ಏನು ನಡೆಯುತ್ತದೆ ಎಂಬುದರ ಬಗ್ಗೆಯೂ ಹೇಳಿಕೆ ನೀಡುತ್ತಿಲ್ಲ. ಹೋಗಲಿ ಜಿಲ್ಲೆಗೆ ಭೇಟಿ ನೀಡುವ ಪ್ರಯತ್ನವನ್ನು ಕೂಡ ಮಾಡಿಲ್ಲ. [ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಿ : ಓದುಗರ ಒಕ್ಕೊರಲ ಕೂಗು]
ಸದ್ಯ ಪತ್ನಿ ಪಾವನಾ ಮತ್ತು ಪುತ್ರ ನೇಹಾಲ್ ಭಾನುವಾರ ಸಂಜೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ನೀಡಿದ್ದಾರೆ. ಮೊದಲಿಗೆ ದೂರು ಸ್ವೀಕರಿಸಲು ಹಿಂದೇಟು ಹಾಕಿದ ಪೊಲೀಸರು ಪ್ರತಿಭಟನೆ ಬಳಿಕ ದೂರು ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಎಸ್ಪಿ ರಾಜೇಂದ್ರಪ್ರಸಾದ್ ಅವರು ಈಗಾಗಲೇ ಪ್ರಕರಣವನ್ನು ಸಿಐಡಿಗೆ ವಹಿಸಿದ್ದರಿಂದ ದೂರನ್ನು ಸಿಐಡಿಗೆ ನೀಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. [ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ]