BREAKING: 2023ರ ತನಕ ಶಾಸಕ ಸ್ಥಾನದಿಂದ ಆರ್ ಶಂಕರ್ ಅನರ್ಹ
ಕರ್ನಾಟಕದಲ್ಲಿ ಆಡಳಿತಾರೂಢ ಕೈ ತೆನೆ ಸರ್ಕಾರ ಸಚಿವರು, ಶಾಸಕರು ಸರಣಿ ರಾಜೀನಾಮೆಯಿಂದಾಗಿ ಉಂಟಾಗಿರುವ ಅಸ್ಥಿರತೆಯುಂಟಾಗಿ ಮೈತ್ರಿ ಸರ್ಕಾರವೇ ಪತನವಾಗಿದೆ. ಆದರೆ, ರಾಜೀನಾಮೆ ನೀಡಿದ ಶಾಸಕರ ಭವಿಷ್ಯದ ಬಗ್ಗೆ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರು ಗುರುವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿ, ತಿಳಿಸಿದರು.
"ರಾಣೇಬೆನ್ನೂರು ಶಾಸಕ ಆರ್ ಶಂಕರ್ ಅನರ್ಹಗೊಳಿಸಲಾಗಿದೆ. ಒಟ್ಟು 3 ವರ್ಷ 10 ತಿಂಗಳು ಅಥವಾ 2023ರ ತನಕ ಶಾಸಕ ಸ್ಥಾನದಿಂದ ಆರ್ ಶಂಕರ್ ಅನರ್ಹಗೊಳಿಸಲಾಗಿದೆ" ಎಂದು ಘೋಷಿಸಿದರು.
"ಕರ್ನಾಟಕದ ರೆಬೆಲ್ ಶಾಸಕರು ಸಲ್ಲಿಸಿದ್ದ ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ರಮೇಶ್ ಕಮಾರ್ ಅವರು ವಿಳಂಬ ಮಾಡುತ್ತಿದ್ದಾರೆ" ಎಂದು ಆರೋಪಿಸಿ ಸುಪ್ರೀಂಕೋರ್ಟಿನಲ್ಲಿ ಅತೃಪ್ತ ಶಾಸಕರು ದೂರು ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಿಂದ ಮಧ್ಯಂತರ ತೀರ್ಪು ಬಂದ ಬಳಿಕ ಕರ್ನಾಟಕ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ನಡೆಸಲು ಮುಂದಾಗಿದ್ದರು.
ವಿಶ್ವಾಸಮತ ಯಾಚನೆ ಪ್ರಕ್ರಿಯೆ ತ್ವರಿತವಾಗಿ ಮುಗಿಸುವಂತೆ ಅರ್ಜಿ ಕೂಡಾ ಸಲ್ಲಿಸಲಾಗಿತ್ತು. ಈಗ ವಿಶ್ವಾಸಮತ ಪ್ರಕ್ರಿಯೆ ಮುಗಿದು ಸರ್ಕಾರವೇ ಬಿದ್ದು ಹೋಗಿದೆ. ಸುಪ್ರೀಂನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಇಬ್ಬರು ಪಕ್ಷೇತರರು ಅಧಿಕೃತವಾಗಿ ಹಿಂಪಡೆದುಕೊಂಡಿದ್ದಾರೆ. ಆದರೆ, ವಿಪ್ ಗೆ ಸಂಬಂಧಿಸಿದಂತೆ ಸ್ಪೀಕರ್ ಅವರ ನಿರ್ಧಾರವೇ ಅಂತಿಮ ಎಂದು ಸಿಜೆಐ ರಂಜನ್ ಗೊಗಾಯ್ ಅವರಿದ್ದ ಸುಪ್ರೀಂಕೋರ್ಟ್ ನ್ಯಾಯಪೀಠ ಹೇಳಿರುವುದು ಮಹತ್ವ ಪಡೆಯಲಿದೆ.
ಅನರ್ಹತೆಗೆ ಕಾರಣ: ಜನಪ್ರತಿನಿಧಿ ಕಾಯ್ದೆ 164 1ಬಿ ಸಂವಿಧಾನದ 10ನೇ ಶೆಡ್ಯೂಲ್ ಅನ್ವಯ ಶಾಸಕರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ದೂರು ದಾಖಲಾಗಿದೆ. ತಮಿಳುನಾಡು ಮಾದರಿಯಲ್ಲಿ ವಿಪ್ ಉಲ್ಲಂಘನೆ ಎಲ್ಲವನ್ನು ಪರಿಗಣಿಸಿ ಶಾಸಕ ಆರ್ ಶಂಕರ್ ರನ್ನು ಅನರ್ಹಗೊಳಿಸಲಾಗಿದೆ.

ಆರ್ ಶಂಕರ್ ವಿರುದ್ಧ ದೂರು ಕೆಪಿಜೆಪಿ ಸ್ಥಾಪಕ ದೂರು
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಆರ್. ಶಂಕರ್ ವಿರುದ್ಧ ಸ್ಪೀಕರ್ಗೆ ದೂರು ನೀಡಲಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಶಂಕರ್ ವಾಪಸ್ ಪಡೆದಿದ್ದಾರೆ. ರಾಣೆಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆರ್. ಶಂಕರ್ ಗೆಲುವು ಸಾಧಿಸಿದ್ದರು. ಮೈತ್ರಿ ಸರ್ಕಾರ ರಚನೆಗೆ ಅವರು ಬೆಂಬಲ ನೀಡಿದ್ದರು. ಪಕ್ಷದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆರ್ ಶಂಕರ್ ಮೇಲೆ ಆರೋಪ ಹೊರೆಸಿ ಕೆಪಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸ್ಥಾಪಕ ಮಹೇಶ್ ಗೌಡ ಅವರು ಸ್ಪೀಕರ್ ರಮೇಶ್ ಕುಮಾರ್ಗೆ ವಿರುದ್ಧ ದೂರು ನೀಡಿದ್ದಾರೆ. ವಿಲೀನದ ಬಗ್ಗೆ ಶಂಕರ್ ಕೊಟ್ಟಿರುವ ಪತ್ರವನ್ನು ಮಾನ್ಯ ಮಾಡಬಾರದು ಎಂದು ಸ್ಪೀಕರ್ ಅವರಿಗೆ ದೂರು ನೀಡಲಾಗಿದೆ" ಎಂದು ಮಹೇಶ್ ಗೌಡ ಹೇಳಿದ್ದಾರೆ.

ವಿಲೀನವೇ ಪ್ರಶ್ನೆಯಾಗಿದ್ದಾಗ ಕಾಂಗ್ರೆಸ್ ಶಾಸಕ ಹೇಗೆ?
ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದ ಆರ್.ಶಂಕರ್ ಅವರನ್ನು 2018ರ ಡಿಸೆಂಬರ್ನಲ್ಲಿ ಸಂಪುಟ ವಿಸ್ತರಣೆ ಮಾಡುವ ಸಮಯದಲ್ಲಿ ಕೈ ಬಿಡಲಾಗಿತ್ತು. ಈಗ ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಕೆಪಿಜೆಪಿಯನ್ನು ಕಾಂಗ್ರೆಸ್ನಲ್ಲಿ ವಿಲೀನ ಮಾಡಬೇಕು ಎಂಬ ಷರತ್ತಿನ ಅನ್ವಯವೇ ಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಪ್ರಮಾಣ ವಚನ ಸಮಾರಂಭಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾದ ಆರ್.ಶಂಕರ್ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನ ಮಾಡುವ ಪತ್ರವನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆಯುವುದಾಗಿ ಘೋಷಣೆ
ಸಂಪುಟ ಸೇರಿದ ಅವರ ಕಾಂಗ್ರೆಸ್ ಹೇಳಿದಂತೆ ಕೇಳಲಿಲ್ಲ. ಮೊದಲಿಗೆ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನ ಮಾಡಲಿಲ್ಲ. ಆದ್ದರಿಂದ, 2018ರ ಡಿಸೆಂಬರ್ನಲ್ಲಿ ಸಚಿವ ಸ್ಥಾನ ಕಳೆದುಕೊಂಡರು. ಬಳಿಕ ಮೈತ್ರಿ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆಯುವುದಾಗಿ ಘೋಷಣೆ ಮಾಡಿದ್ದರು. ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಂಡಿದ್ದರು. ಈಗ ಕೆಪಿಜೆಪಿಯನ್ನು ಕಾಂಗ್ರೆಸ್ನಲ್ಲಿ ವಿಲೀನ ಮಾಡಿ ಮತ್ತೆ ಸಂಪುಟ ಸೇರಿದ್ದರು. ಆರ್.ಶಂಕರ್ ಹಲವು ಬಾರಿ ಪಕ್ಷ ನಿಷ್ಠೆ ಬದಲಿಸಿದ್ದಾರೆ. 2018ರಲ್ಲಿ ಸಚಿವ ಸ್ಥಾನ ಕಳೆದುಕೊಂಡ ಬಳಿಕ ಅತೃಪ್ತ ಶಾಸಕರ ಬಣದಲ್ಲಿ ಗುರುತಿಸಿಕೊಂಡು ಮುಂಬೈಗೆ ಹೋಗಿದ್ದರು. ಆದರೆ, ಪುನಃ ಸರ್ಕಾರಕ್ಕೆ ಬೆಂಬಲ ಕೊಟ್ಟು ಕುಮಾರಸ್ವಾಮಿ ಸಂಪುಟ ಸೇರಿದ್ದರು.

ಮೂರು ಶಾಸಕರು 15ನೇ ವಿಧಾನಸಭೆಯಿಂದ ಅನರ್ಹ
ಒಟ್ಟು ಮೂರು ಶಾಸಕರು 15ನೇ ವಿಧಾನಸಭೆಯಿಂದ ಅನರ್ಹಗೊಂಡಿದ್ದಾರೆ. ಈ ಮೂರು ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ, ಹಾಲಿ ವಿಧಾನಸಭೆ ವಿಸರ್ಜನೆಯಾದರೆ ಮಾತ್ರ ಸಾಧ್ಯತೆ, ರಾಣೇಬೆನ್ನೂರು ಶಾಸಕ ಆರ್ ಶಂಕರ್ ನಂತರ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಕೂಡಾ ಅನರ್ಹ. ಮೂವರು
2023ರ ತನಕ ಅನರ್ಹರಾಗಿದ್ದು, ವಿಧಾನಸಭೆ ಕಲಾಪಕ್ಕೆ ಹಾಜರಾಗುವಂತಿಲ್ಲ.












Click it and Unblock the Notifications