ಕೆಪಿಸಿಸಿ ಚೆಕ್ ವಿವಾದ : ಮಾಜಿ ಸಂಸದೆ ರಮ್ಯಾ ಸ್ಪಷ್ಟನೆಗಳು
ಮಂಡ್ಯ, ಅಕ್ಟೋಬರ್ 15 : ಮಂಡ್ಯ ಜಿಲ್ಲೆಯ ಸಣಬದಕೊಪ್ಪಲುವಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಲೋಕೇಶ್ ಕುಟುಂಬಕ್ಕೆ ಕೆಪಿಸಿಸಿ ನೀಡಿದ್ದ ಚೆಕ್ ವಿವಾದಕ್ಕೆ ಕಾರಣವಾಗಿತ್ತು. ಚೆಕ್ ಕ್ರಾಸ್ ಮಾಡಿಲ್ಲವೆಂಬ ಕಾರಣಕ್ಕೆ ಅದನ್ನು ವಾಪಸ್ ಪಡೆಯಲಾಗಿತ್ತು. ಈ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಗುರುವಾರ ಚೆಕ್ ಅನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿ ಎಲ್ಲಾ ವಿವಾದಕ್ಕೆ ತೆರೆ ಎಳೆಯಲಾಗಿದೆ. ಮಾಜಿ ಸಂಸದೆ ರಮ್ಯಾ ಅವರು ಚೆಕ್ ವಿವಾದದ ಬಗ್ಗೆ ಫೇಸ್ಬುಕ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ರಮ್ಯಾ ಬರೆದ ಪತ್ರದ ವಿವರಣೆ ಇಲ್ಲಿದೆ.....
ಆತ್ಮೀಯ ಮಂಡ್ಯ ಜನತೆಗೆ ಒಂದು ಸಂದೇಶ
ನನ್ನ ರಾಜಕೀಯ ವಿರೋಧಿಗಳು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ನನ್ನನ್ನು ತೇಜೋವಧೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನನಗೆ ಆತ್ಮಸ್ಥೈರ್ಯ ತುಂಬಿ, ನನ್ನ ಬೆನ್ನೆಲುಬಾಗಿ ನಿಂತು, ನಿಮ್ಮ ಮನೆ ಮಗಳಂತೆ ಆಶೀರ್ವದಿಸಿ, ನಿಮ್ಮ ಸೇವೆ ಮಾಡಲು ಸದಾ ಅವಕಾಶ ಮಾಡಿ ಕೊಟ್ಟಿರುವುದಕ್ಕೆ ಮಂಡ್ಯ ಜನತೆಗೆ ನನ್ನ ಕೃತಜ್ಞತೆಗಳು. [ಚೆಕ್ ವಾಪಸ್ ನೀಡಿದ ಕೆಪಿಸಿಸಿ]
ಈ ಸಂದೇಶದ ಮುಖಾಂತರ ಮಂಡ್ಯ ಜನತೆಗೆ ಕೆಲವೊಂದು ಸತ್ಯವನ್ನು ತಿಳಿಸಬೇಕಾಗಿದೆ. ದಿನಾಂಕ 8-10 -15 ರಂದು ನಾನು ಮಂಡ್ಯ ಜಿಲ್ಲಾ ಪ್ರವಾಸದಲ್ಲಿದ್ದೆ. ಆ ಸಂದರ್ಭದಲ್ಲಿ ಪಾಂಡವಪುರ ತಾಲ್ಲೂಕಿನಲ್ಲಿ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯಿತು. ಆ ಕೂಡಲೇ ಸುಮಾರು ರಾತ್ರಿ 9 ಗಂಟೆ ಸಮಯದಲ್ಲಿ ಆ ಸ್ಥಳಕ್ಕೆ ಭೇಟಿಕೊಟ್ಟೆ. ನನ್ನ ಭೇಟಿಯ ಸಂದರ್ಭದಲ್ಲಿ ಆ ಕುಟುಂಬದ ಪರಿಸ್ಥಿತಿಯನ್ನು ನೋಡಿ ತುಂಬಾ ದುಃಖವಾಯಿತು.
ಅಲ್ಲಿದ್ದ ಮಹಿಳೆಯರನ್ನು ಈ ಆತ್ಮಹತ್ಯೆ ಬಗ್ಗೆ ವಿಚಾರಿಸಿ, ವಿಚಾರ ತಿಳಿದ ಬಳಿಕ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ಅಲ್ಲೇ ಕುಳಿತಿದ್ದ ಆ ಎರಡು ಮಕ್ಕಳನ್ನು ಕಂಡು ನನಗೆ ಸಂಕಟವಾಯಿತು. ಆ ಸಂದರ್ಭದಲ್ಲಿ ಆ ಕುಟುಂಬದ ಸದಸ್ಯರೆಲ್ಲರಿಗೂ ಸಾಂತ್ವನ ಹೇಳಿ, ಬರಿಗೈಲಿ ತೆರಳಿದ್ದ ನಾನು ಅವರಲ್ಲಿ ಕ್ಷಮೆ ಯಾಚಿಸಿದೆ ಮತ್ತು ನನ್ನ ನಿರೀಕ್ಷೆಗೂ ಮೀರಿ ಸಹಾಯ ಮಾಡುವುದಾಗಿ ಭರವಸೆ ನೀಡಿದೆ.
ಅಲ್ಲಿ ನೆರೆದಿದ್ದ ಗ್ರಾಮಸ್ಥರು ನನ್ನ ಬಳಿ ಬಂದು ಮರಣೋತ್ತರ ಪರೀಕ್ಷೆ ಹಾಗು ಶವಸಂಸ್ಕಾರದ ಬಗ್ಗೆ ವಿವರ ನೀಡಿದರು ಮತ್ತು ಈ ಘಟನೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳು ಮತ್ತು ಸರ್ಕಾರ ಮಟ್ಟದಲ್ಲಿ ರಾಹುಲ್ ಗಾಂಧಿಯವರಿಗೆ ತಿಳಿಸಿ ಚರ್ಚೆ ಮಾಡಿ ಎಂದು ಮನವಿ ಮಾಡಿದರು. ಮರುದಿನ ಬೆಳಗ್ಗೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು, ಶ್ರೀ ಪರಮೇಶ್ವರ್ ಅವರು, ಶ್ರೀ ರಾಹುಲ್ ಗಾಂಧಿಯವರ ಜೊತೆ ಕೆಲ ಸಂಪುಟದ ಸಚಿವರು ಹಾಗೂ ನಾನು ಹಾಜರಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದೆವು. ಪತ್ರದ ಮುಂದಿನ ಭಾಗ ಮುಂದಿನ ಪುಟದಲ್ಲಿ....