ತಮ್ಮ ಬಗ್ಗೆ ಹಬ್ಬಿದ್ದ ಗಾಳಿ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ ರಮ್ಯಾ
Recommended Video

ಬೆಂಗಳೂರು, ಅಕ್ಟೋಬರ್ 03: ಕಾಂಗ್ರೆಸ್ನ ಮಾಧ್ಯಮ ವಿಭಾಗದ ಅಧ್ಯಕ್ಷೆ ಆಗಿರುವ ರಮ್ಯಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿತ್ತು ಆದರಿದನ್ನು ರಮ್ಯಾ ಅವರು ನಿರಾಕರಿಸಿದ್ದಾರೆ.
ಸೋಷಿಯಲ್ ಮೀಡಿಯಾ ಮುಖ್ಯಸ್ಥರ ಹುದ್ದೆಗೆ ರಮ್ಯಾ ರಾಜೀನಾಮೆ ನೀಡಿದ್ದಾರೆ, ಅವರು ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಇದೆಲ್ಲವನ್ನೂ ರಮ್ಯಾ ಅವರು ನಿರಾಕರಿಸಿದ್ದಾರೆ.
ದಿನಕ್ಕೆ ಹಲವು ಟ್ವೀಟ್ ಮಾಡಿ ಮೋದಿ ಹಾಗೂ ಬಿಜೆಪಿಯ ಕಾಲೆಳೆಯುತ್ತಿದ್ದ ರಮ್ಯಾ ಅವರು ಏಕಾಏಕಿ ಕಳೆದ ಮೂರು ದಿನಗಳಿಂದ ಟ್ವೀಟ್ ಮಾಡಿರಲಿಲ್ಲ ಇದು ಸಹ ಈ ಸುದ್ದಿಗೆ ಇಂಬು ನೀಡಿತ್ತು. ಆದರೆ ಸುದ್ದಿಯನ್ನು ಸುಳ್ಳು ಎಂದಿರುವ ರಮ್ಯಾ, ಪ್ರವಾಸದಲ್ಲಿದ್ದೇನೆ ಆದಷ್ಟು ಬೇಗ ವಾಪಸ್ಸಾಗುತ್ತೇನೆ ಎಂದು ರಮ್ಯಾ ಅವರು ಹೇಳಿದ್ದಾರೆ.

ಟ್ವಿಟ್ಟರ್ ಅಪ್ಡೇಟ್ ಮಾಡಿರುವ ರಮ್ಯಾ
ವದಂತಿ ಹರಡಿದ ಬೆನ್ನಲ್ಲೆ ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮಾಹಿತಿಯನ್ನು ಅಪ್ಡೇಟ್ ಮಾಡಿರುವ ರಮ್ಯಾ ಅವರು, ನಟಿ, ಕಾಂಗ್ರೆಸ್ ಸಾಮಾಜಿಕ ವಿಭಾಗದ ಮುಖ್ಯಸ್ಥೆ, ಕಾಂಗ್ರೆಸ್ನ ಸದಸ್ಯೆ ಹಾಗೂ ಇವೆಲ್ಲವೂ ನನಗೆ ತುಂಬಾ ಇಷ್ಟ ಎಂದು ಹಾಕಿದ್ದಾರೆ. ಇದರ ಮೂಲಕ ತಮ್ಮ ಬಗ್ಗೆ ಎದ್ದಿದ್ದ ವದಂತಿಗೆ ಉತ್ತರ ನೀಡಿದ್ದಾರೆ.

ವದಂತಿ ಹಬ್ಬಿದ್ದು ಹೇಗೆ?
ರಮ್ಯಾ ಅವರು ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸ್ಥಾನಕ್ಕೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಅಲ್ಲದೆ ಲೋಕಸಭೆ ಚುನಾವಣೆ ಬರುತ್ತಿರುವ ಕಾರಣ ಅವರನ್ನು ಬದಲಾಯಿಸಿ ಇನ್ನಷ್ಟು ಶಕ್ತರನ್ನು ನೇಮಕ ಮಾಡಲು ಕಾಂಗ್ರೆಸ್ ಚಿಂತಿಸಿತ್ತು. ಇದರಿಂದ ಬೇಸರಗೊಂಡು ರಮ್ಯಾ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿತ್ತು. ಆದರೆ ಈಗದು ಸುಳ್ಳಾಗಿದೆ.

ದೇಶದ್ರೋಹ ಕೇಸು ದಾಖಲಾಗಿತ್ತು
ಇತ್ತೀಚೆಗಷ್ಟೆ ಮೋದಿ ಅವರನ್ನು 'ಕಳ್ಳ' ಎಂದು ರಮ್ಯಾ ಅವರು ಟ್ವಿಟ್ಟರ್ನಲ್ಲಿ ಜರಿದಿದ್ದರು. ಇದಕ್ಕೆ ಸಂಬಂಧಿಸಿದಂತೆ ರಮ್ಯಾ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ರಮ್ಯಾ ವಿರುದ್ಧ ದೇಶದ್ರೋಹ (ಸೆಡಿಶನ್) ಪ್ರಕರಣ ಸಹ ದಾಖಲಾಗಿತ್ತು.

ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ
ಈಗಾಗಲೇ ಒಮ್ಮೆ ಸಂಸದೆಯಾಗಿರುವ ರಮ್ಯಾ ಅವರು ಮತ್ತೆ ಈ ಬಾರಿ ಚುನಾವಣೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಮಂಡ್ಯದಲ್ಲಿ ಹಲವರ ವಿರೋಧ ಕಟ್ಟಿಕೊಂಡಿರುವ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯುವ ಸಾಧ್ಯತೆ ಇದೆ. ಬಿಜೆಪಿಯಿಂದ ಸದಾನಂದ ಗೌಡ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.












Click it and Unblock the Notifications