ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ಅಬ್ಬರಿಸಿದ್ದ ದೂರುದಾರ ದಿನೇಶ್ ಕಲ್ಲಹಳ್ಳಿ ತಪ್ಪೊಪ್ಪಿಗೆ!
ಬೆಂಗಳೂರು, ಮಾರ್ಚ್ 18: ಬಿಜೆಪಿಯ ಮುಖಂಡ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾಗುತ್ತಿರುವ ಅಶ್ಲೀಲ ಸಿಡಿ ಪ್ರಕರಣ ದಿನಕ್ಕೊಂದು ಚಿತ್ರವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ. ಈ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಟ್ವಿಟ್ಟರ್ ನಲ್ಲಿ ಮಹಾಸಮರವೇ ನಡೆಯುತ್ತಿದೆ.
ಜಾರಕಿಹೊಳಿ ಆರೋಪಿಸುತ್ತಿರುವ ಆ 'ಮಹಾನ್ ನಾಯಕ' ಯಾರು ಎನ್ನುವ ಅರ್ಥ ರಾಜ್ಯದ ಜನತೆಗೆ ನಿಧಾನವಾಗಿ ಅರಿವಾಗುತ್ತಿರುವ ಬೆನ್ನಲ್ಲೇ, ರಾಜ್ಯ ರಾಜಕೀಯದಲ್ಲಿ ಈ ವಿಚಾರ ಮುಂದಿನ ದಿನಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ.
ಇವೆಲ್ಲದರ ನಡುವೆ, ವಿಶೇಷ ತನಿಖಾ ದಳ(ಎಸ್ಐಟಿ) ವಿಚಾರಣೆಯನ್ನು ತೀವ್ರಗೊಳಿಸಿದ್ದ, ಈ ಕೇಸಿನ ಪ್ರಮುಖ ದೂರುದಾರ ದಿನೇಶ್ ಕಲ್ಲಹಳ್ಳಿಯವರು ತನಿಖಾ ತಂಡಕ್ಕೆ ಮೂರು ಪುಟುಗಳ ಹೇಳಿಕೆಯನ್ನು ನೀಡಿದ್ದಾರೆ.
ಈ ಪತ್ರದಲ್ಲಿ ದೂರು ನೀಡಲು ಎದುರಾದ ಸನ್ನಿವೇಶವನ್ನು ಕಲ್ಲಹಳ್ಳಿ ಸವಿವರವಾಗಿ ಹೇಳಿದ್ದಾರೆ. ಒತ್ತಡಕ್ಕೆ ಸಿಲುಕಿದ್ದೆ ಎನ್ನುವ ತಪ್ಪೊಪ್ಪಿಗೆಯನ್ನು ಕಲ್ಲಹಳ್ಳಿ ನೀಡಿದ್ದಾರೆ ಎಂದು ವರದಿಯಾಗಿದೆ.

ಸಾಮಾಜಿಕ ಹೋರಾಟಗಾರ ಎಂದು ಗುರುತಿಸಿಕೊಂಡಿರುವ ದಿನೇಶ್ ಕಲ್ಲಹಳ್ಳಿ
ಸಾಮಾಜಿಕ ಹೋರಾಟಗಾರ ಎಂದು ಗುರುತಿಸಿಕೊಂಡಿರುವ ದಿನೇಶ್ ಅವರು ರಾಮನಗರ ಜಿಲ್ಲೆ, ಕನಕಪುರದ ಕಲ್ಲಹಳ್ಳಿ ಗ್ರಾಮದವರು. ನನ್ನದೇ ಆದ ಹೋರಾಟ ಸಮಿತಿಯನ್ನು ಹೊಂದಿದ್ದೇನೆ. ಈ ಹಿಂದೆಯೂ ಹಲವು ಬಾರಿ ಹೋರಾಟ ನಡೆಸಿ, ನ್ಯಾಯ ಒದಗಿಸಿದ್ದೇನೆ. ನಾನು ಯಾವುದೇ ಪಕ್ಷದ ಜೊತೆಗೆ ಗುರುತಿಸಿಕೊಂಡವನಲ್ಲ ಎಂದು ಕಲ್ಲಹಳ್ಳಿ ಲಿಖಿತ ಹೇಳಿಕೆಯನ್ನು ನೀಡಿದ್ದಾರೆಂದು ವರದಿಯಾಗಿದೆ.

ಎಸಿಬಿ ವಿಚಾರದ ಬಗ್ಗೆ ನನ್ನಲ್ಲಿ ಮಾತನಾಡುತ್ತಿದ್ದರು
ನಾನು ಹೋರಾಟ ಮಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದವು. ಆಗ ನನಗೆ ಒಬ್ಬರ ಪರಿಚಯವಾಯಿತು. ಅವರು ಎಸಿಬಿ ವಿಚಾರದ ಬಗ್ಗೆ ನನ್ನಲ್ಲಿ ಮಾತನಾಡುತ್ತಿದ್ದರು. ಜೊತೆಗೆ, ಒಂದು ಕ್ಲೂವನ್ನು ಕೊಡುತ್ತೇನೆ, ಆ ವಿಚಾರದಲ್ಲಿ ನೀವು ದೂರು ನೀಡಿ, ಹೋರಾಟ ಮಾಡಬೇಕು ಎಂದು ಹೇಳಿದ್ದರು.

ರಾಸಲೀಲೆಯ ವಿಚಾರ ಎಂದು ಗೊತ್ತಾಗಿ, ಸುಮ್ಮನಾಗಿದ್ದೆ
ಮೊದಲು ಆ ವಿಚಾರದ ತಿಳಿದುಕೊಳ್ಳಲು ಪ್ರಯತ್ನ ಮಾಡಿದ್ದೆ, ಆಮೇಲೆ ಇದು ರಾಸಲೀಲೆಯ ವಿಚಾರ ಎಂದು ಗೊತ್ತಾಗಿ, ಸುಮ್ಮನಾಗಿದ್ದೆ. ಆಗ, ಅವರು ನನಗೆ ಒತ್ತಡ ಹಾಕಲು ಆರಂಭಿಸಿದರು. ಯುವತಿಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಲು ಆರಂಭಿಸಿದರು ಎಂದು ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆಂದು ವರದಿಯಾಗಿದೆ.

ನಿಜ ಹೇಳಬೇಕೆಂದರೆ ಆ ಸಿಡಿಯನ್ನು ಪ್ಲೇಮಾಡಿಯೂ ನೋಡಿರಲಿಲ್ಲ
ಸತತವಾಗಿ ನನಗೆ ದೂರವಾಣಿ ಮೂಲಕ ಒತ್ತಡ ಬಂದಿದ್ದರಿಂದ, ನಾನು ಒತ್ತಾಯಕ್ಕೆ ಒಳಗಾಗಿ ದೂರು ನೀಡಿದ್ದೆ. ನಿಜ ಹೇಳಬೇಕೆಂದರೆ ಆ ಸಿಡಿಯನ್ನು ಪ್ಲೇಮಾಡಿಯೂ ನೋಡಿರಲಿಲ್ಲ. ಈ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲ, ನಾವು ಯಾವ ಪಾಲನ್ನೂ ಪಡೆದಿಲ್ಲ ಎಂದು ದಿನೇಶ್ ಕಲ್ಲಹಳ್ಳಿ, ಎಸ್ಐಟಿ ವಿಚಾರಣೆಯ ವೇಳೆ ಹೇಳಿದ್ದಾರೆಂದು ವರದಿಯಾಗಿದೆ.












Click it and Unblock the Notifications