ಸೆ.25ರಿಂದ ರಂಭಾಪುರಿ ಶ್ರೀಗಳ ದಸರಾ ದರ್ಬಾರ್
ಹಾನಸ, ಸೆ.4 : ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಮತ್ತು ಜನಜಾಗೃತಿ ಸಮ್ಮೇಳನ ಸೆ.25ರಿಂದ ಅರಸೀಕೆರೆಯಲ್ಲಿ ನಡೆಯಲಿದೆ. ದಸರಾ ದರ್ಬಾರ್ ಕೊನೆಯ ದಿನ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದ್ದು, ಲಕ್ಷಾಂತರ ಭಕ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಶಾಸಕ ಕೆ.ಪಿ.ಪ್ರಭುಕುಮಾರ್ ಹೇಳಿದ್ದಾರೆ.
ಅರಸೀಕೆರೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರಭುಕುಮಾರ್ ಅವರು, ಸೆ.25 ರಿಂದ ಆ.4 ರವರೆಗೆ ಈ ಬಾರಿಯ ದಸರಾ ದರ್ಬಾರ್ ನಡೆಯಲಿದ್ದು, ಆ.4ರಂದು ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಹೇಳಿದರು. ಅರಸೀಕೆರೆಯ ಬಸವರಾಜೇಂದ್ರ ಪ್ರೌಢಶಾಲಾ ಆಚರಣದಲ್ಲಿ ಸಭಾ ಕಾರ್ಯಕ್ರಮ ಮತ್ತು ವೀರಶೈವ ಸಮುದಾಯ ಭವನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ ಎಂದರು.

ಸೆ.24ರಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಅರಸೀಕೆರೆಗೆ ಆಗಮಿಸಲಿದ್ದಾರೆ. ದಸರಾ ದರ್ಬಾರ್ ಅಂಗವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಗುತ್ತದೆ. ದಸರಾ ದರ್ಬಾರ್ಗಾಗಿ ಆಗಮಿಸುವ ಭಕ್ತಾದಿಗಳಿಗಾಗಿ 9 ದಿನವೂ ಅನ್ನ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಭುಕುಮಾರ್ ಮಾಹಿತಿ ನೀಡಿದರು. [ಅಡ್ಡಪಲ್ಲಕ್ಕಿ ಉತ್ಸವ ವಿವಾದ]
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಜಿ.ಎಂ.ಸಿದ್ದೇಶ್ವರ್, ಸಂಸದೆ ಶೋಭಾ ಕರಂದ್ಲಾಜೆ ಮುಂತಾದವರು ದಸರಾ ದರ್ಬಾರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಆ.4 ರಂದು ಅಡ್ಡ ಪಲ್ಲಕ್ಕಿ ಉತ್ಸವ : ದಸರಾ ದರ್ಬಾರ್ ಅಂತಿಮ ದಿನವಾದ ಆ.4ರಂದು ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ಕಳೆದ ಬಾರಿ ದಸರಾ ದರ್ಬಾರ್ ಸಂದರ್ಭದಲ್ಲಿ ಅಡ್ಡ ಪಲ್ಲಕ್ಕಿ ಉತ್ಸವದ ಬಗ್ಗೆ ಭಾರೀ ವಿವಾದ ಉಂಟಾಗಿತ್ತು. ಗುಲ್ಬರ್ಗದಲ್ಲಿ ಕಳೆದ ಬಾರಿ ದಸರಾ ದರ್ಬಾರ್ ನಡೆದಿತ್ತು. ರಾಜ್ಯದ ಕೆಲವು ಮಠಾಧೀಶರು ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ವಿರೋಧ ವ್ಯಕ್ತಪಡಿಸಿದ್ದರು.












Click it and Unblock the Notifications