ಮಾಜಿ ಪ್ರಧಾನಿ ದೇವೇಗೌಡರ ನಿಲುವಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ!
ಬೆಂಗಳೂರು, ಫೆ. 03: ವಿಧಾನಪರಿಷತ್ನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಮನಮುಟ್ಟುವ ಹೇಳಿಕೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿರುವ ಅವರು, ಮೊದಲಿನಿಂದಲೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಜಾತ್ಯಾತೀತ ನಿಲುವಿನಲ್ಲಿ ನಂಬಿಕೆ ಇಟ್ಟವರು. ಸಭಾಪತಿ ಸ್ಥಾನ ಹೊಂದಾಣಿಕೆಗೆ ಅವರು ಬಿಜೆಪಿ ಜೊತೆ ಹೋಗದಿರೋದು ಸೂಕ್ತ. ಮೊನ್ನೆಯಷ್ಟೇ ಪರಿಷತ್ ಉಪಸಭಾಪತಿ ಚುನಾವಣೆ ನಡೆದಿದೆ. ಸಭಾಪತಿ ಸ್ಥಾನಕ್ಕೆ ರಾಜಿನಾಮೆ ಕೇಳಿದ್ದಾರೆ. ಈ ಬಗ್ಗೆ ಪರಿಷತ್ನಲ್ಲಿ ಚರ್ಚೆ ಆಗಲಿದೆ ಎಂದಿದ್ದಾರೆ.
ಗೋಹತ್ಯೆ ನಿಷೇಧ ವಿಚಾರ ಬಂದಾಗ ಬಿಜೆಪಿ ಗೋ ಹತ್ಯೆ ನಿಷೇಧ ನಿರ್ಧಾರ ತೆಗೆದುಕೊಂಡಿತ್ತು. ನನ್ನ ಅಭಿಪ್ರಾಯದಲ್ಲಿ ಎಲ್ಲಾ ಪ್ರಾಣಿಗಳ ಹತ್ಯೆ ನಿಲ್ಲಿಸಬೇಕು ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ದೆಹಲಿಯಲ್ಲಿ ರೈತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ರೈತರು ಅನ್ನದಾತರು, ದೇಶದ ಬೆನ್ನೆಲುಬು ಅಂತ ಬಿಜೆಪಿಯವರು ಹೇಳುತ್ತಿದ್ದರು. ಆದರೆ ಅವರು ಹೇಳುತ್ತಿರುವುದು ಒಂದಾದರೆ, ತಮ್ಮ ಮನಸ್ಸಿನಲ್ಲಿ ಮತ್ತೊಂದು ವಿಷಯ ಇಟ್ಟುಕೊಂಡಿದ್ದಾರೆ. ದೆಹಲಿಯಲ್ಲಿ ಖಲಿಸ್ತಾನದ ಪರ ಬಿಜೆಪಿ ಕಾರ್ಯಕರ್ತರೇ ಕರಪತ್ರ ಹಂಚಿದ್ದಾರೆ. ಕಾರ್ಯಕರ್ತರ ಹೆಸರಲ್ಲಿ ಬಿಜೆಪಿಯವರು ವೇಷ ಮರೆಸಿಕೊಂಡು ದೆಹಲಯಲ್ಲಿ ಪ್ರತಿಭಟನೆಗೆ ಬಂದಿದ್ದರು. ಈಗ ರಸ್ತೆಯಲ್ಲಿ ಮೊಳೆ ಹೊಡೆದಿದ್ದಾರೆ. ಕಾಂಕ್ರೀಟ್ ದಿಬ್ಬ ಹಾಕಿ ಅಡ್ಡಗಟ್ಟಿದ್ದಾರೆ. ರೈತರ ಎದುರು ಬಿಜೆಪಿಯ ನಿಜವಾದ ಮುಖವಾಡ ಹೊರ ಬಂದಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯವರು ಮಾಡಿದ್ದನ್ನು ಅನುಭವಿಸುತ್ತಾರೆ ಎಂದು ರಾಮಲಿಂಗಾರೆಡ್ಡಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications