ರಾಮದಾಸ್ - ಪ್ರೇಮಕುಮಾರಿ ಪ್ರಕರಣಕ್ಕೆ ಹೊಸಜೀವ!
ಬೆಂಗಳೂರು, ಅ. 14 : ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ರಾಮದಾಸ್ ಪ್ರಕರಣ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು, ಪ್ರಕರಣವನ್ನು ಬಿಜೆಪಿ ಗಮನಿಸುತ್ತಿದೆ. ಸದ್ಯಕ್ಕೆ ರಾಮದಾಸ್ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ವಾಸ್ತವವಾಗಿ ಏನು ನಡೆದಿದೆ ಎಂಬುದು ತನಿಖೆಯ ನಂತರ ತಿಳಿಯಲಿದೆ. ಸತ್ಯಾಸತ್ಯತೆ ಹೊರಬಂದ ನಂತರ ಈ ಕುರಿತು ಚಿಂತಿಸಲಾಗುವುದು ಎಂದು ಜೋಶಿ ಹೇಳಿಕೆ ನೀಡಿದ್ದಾರೆ.
ಪ್ರೇಮಕುಮಾರಿ ಹೇಳಿಕೆ : ಎಸ್.ಎ.ರಾಮದಾಸ್ ಅವರು ತನ್ನನ್ನು ಮದುವೆಯಾಗಬೇಕೆಂದು ಪ್ರೇಮಕುಮಾರಿ ಅವರು ಮಂಗಳವಾರ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ರಾಮದಾಸ್ ತನ್ನೊಂದಿಗೆ ಮಾತನಾಡಿದ್ದು, ಸಾಬೀತಾಗಿದೆ. ಅವರು ತನ್ನನ್ನು ಮದುವೆಯಾಗಿ ಪತ್ನಿ ಎಂದು ಸ್ವೀಕರಿಸಬೇಕು ಎಂದು ಪ್ರೇಮಕುಮಾರಿ ಒತ್ತಾಯಿಸಿದ್ದಾರೆ. [ರಾಮದಾಸ್ ಕೇಸ್: 'ಪ್ರೇಮಾ' ಪುರಾಣ ಬಯಲು]

ನನ್ನ ಮಕ್ಕಳ ಭವಿಷ್ಯಕ್ಕಾಗಿ ರಾಮದಾಸ್ ಅವರ ಬಳಿ ನ್ಯಾಯ ಕೇಳಿದ್ದೆ. ಪ್ರಕರಣದಿಂದ ನನ್ನ ಗೌರವಕ್ಕೆ ಚ್ಯುತಿಯಾಗಿದ್ದು, ನನ್ನ ಕಷ್ಟವನ್ನು ಕರ್ನಾಟಕದ ಜನತೆ ನೋಡಿದ್ದಾರೆ. ಪ್ರಕರಣ ಬಳಕಿಗೆ ಬಂದಾಗ ಜೀವನ ಮಾಡಲು ನನಗೆ ಆಧಾರವಿರಲಿಲ್ಲ. ಆದ್ದರಿಂದ ನಾನು ಜೀವನಾಂಶ ಕೇಳಿದೆ. ಈಗಲೂ ಅವರು ನನ್ನನ್ನು ಒಪ್ಪಿಕೊಂಡು ಮದುವೆಮಾಡಿಕೊಂಡರೆ ನೀಡಿರುವ ದೂರನ್ನು ಹಿಂಪಡೆಯುತ್ತೇನೆ ಎಂದು ಪ್ರೇಮಾಕುಮಾರಿ ಹೇಳಿದ್ದಾರೆ.
ಹಿಂದಿನ ಸುದ್ದಿ : ಮಾಜಿ ಸಚಿವ, ಬಿಜೆಪಿ ನಾಯಕ ಎಸ್.ಎ.ರಾಮದಾಸ್ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ. ರಾಮದಾಸ್ ಮತ್ತು ಪ್ರೇಮಕುಮಾರಿ ನಡುವಿನ ದೂರವಾಣಿ ಸಂಭಾಷಣೆಯ ಸಿಡಿಯ ಪರೀಕ್ಷೆ ನಡೆಸಿರುವ ವಿಧಿವಿಜ್ಞಾನ ಪ್ರಯೋಗಾಲಯ ತನ್ನ ವರದಿಯನ್ನು ಸಿಐಡಿಗೆ ಸಲ್ಲಿಸಿದೆ. [ರಾಮದಾಸ್ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ]
ಮಾಜಿ ಸಚಿವ ರಾಮದಾಸ್ ತನ್ನನ್ನು ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ್ದಾರೆ ಮತ್ತು ತನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಪ್ರೇಮಕುಮಾರಿ ಅವರು ಫೆ.14ರಂದು ಮೈಸೂರಿನ ಸರಸ್ವತೀಪುರಂ ಠಾಣೆಯಲ್ಲಿ ರಾಮದಾಸ್ ಮತ್ತು ಅವರ ಸಹೋದರ ಶ್ರೀಕಾಂತ್ ದಾಸ್ ವಿರುದ್ಧ ದೂರು ದಾಖಲಿಸಿದ್ದರು.
ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ರಾಮದಾಸ್ ಮತ್ತು ತನಗೆ ಪರಿಚಯವಿತ್ತು ಎಂದು ಹೇಳಿದ್ದ ಪ್ರೇಮಕುಮಾರಿ ಅವರು ರಾಮದಾಸ್ ಮತ್ತು ಅವರ ನಡುವಿನ ದೂರವಾಣಿ ಸಂಭಾಷಣೆಯ ಸಿಡಿಯನ್ನು ತನಿಖೆ ನಡೆಸುತ್ತಿದ್ದ ಸಿಐಡಿಗೆ ಸಲ್ಲಿಸಿದ್ದರು. ಸಿಐಡಿ ಅದನ್ನು ಪರೀಕ್ಷೆಗಾಗಿ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಲ್ಲಿಸಿತ್ತು. [ಬಿಜೆಪಿ ಮಾಜಿ ಸಚಿವ ರಾಮದಾಸ್ ಆತ್ಮಹತ್ಯೆಗೆ ಯತ್ನ]

ಸಿಡಿಯಲ್ಲಿರುವ ಧ್ವನಿಯ ಪರೀಕ್ಷೆ ನಡೆಸಿರುವ ವಿಧಿವಿಜ್ಞಾನ ಪ್ರಯೋಗಾಲಯ ಮಂಗಳವಾರ ಸಿಐಡಿಗೆ ತನ್ನ ವರದಿಯನ್ನು ಸಲ್ಲಿಸಿದೆ. ವರದಿಯ ಪ್ರಕಾರ ಸಿಡಿಯಲ್ಲಿರುವ ಧ್ವನಿ ರಾಮದಾಸ್ ಅವರದ್ದು ಎಂಬುದು ಸಾಬೀತಾಗಿದೆ ಎಂದು ತಿಳಿದುಬಂದಿದ್ದು, ಇದರಿಂದ ರಾಮದಾಸ್ಗೆ ಹೊಸ ಸಂಕಷ್ಟ ಎದುರಾಗಿದೆ.
2014ರ ಫೆಬ್ರವರಿಯಲ್ಲಿ ರಾಮದಾಸ್ ಮತ್ತು ಪ್ರೇಮಕುಮಾರಿ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರೇಮಕುಮಾರಿ ಎಂಬುವವರು ಮಾಧ್ಯಮದ ಮುಂದೆ ಮಾಜಿ ಸಚಿವ ರಾಮದಾಸ್ ಅವರು ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಹೇಳಿದ್ದರು. ಪ್ರಕರಣ ಬೆಳಕಿಗೆ ಬಂದ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದ ರಾಮದಾಸ್ ಅವರನ್ನು ಕುಟುಂಬದವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ವಿಧಿವಿಜ್ಞಾನ ಪ್ರಯೋಗಾಲಯ, ರಾಮದಾಸ್ ಮತ್ತು ಪ್ರೇಮಕುಮಾರಿ ಅವರ ಹೇಳಿಕೆಗಳನ್ನು ಪಡೆದುಕೊಂಡಿದ್ದು, ಅದನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದೆ. ನಂತರ ಪ್ರಕರಣದ ಅಂತಿಮ ಆದೇಶ ಹೊರಬೀಳಲಿದೆ.












Click it and Unblock the Notifications