ರಾಜ್ಯಸಭಾ ಚುನಾವಣೆ; 4ನೇ ಸ್ಥಾನ ಯಾವ ಪಕ್ಷಕ್ಕೆ?
ಬೆಂಗಳೂರು, ಮೇ29: ರಾಜ್ಯಸಭಾ ಚುನಾವಣೆಯ ಮೇಲೆ ಮೂರು ಪಕ್ಷಗಳ ಕಣ್ಣು ಬಿದ್ದಿದೆ. 4 ಸ್ಥಾನಗಳಿಗೆ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಸಜ್ಜಾಗಿದೆ. ಬಿಜೆಪಿ ಎರಡು ಸ್ಥಾನ ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಅನಾಯಾಸವಾಗಿ ಪಡೆಯಲಿದೆ. ಆದರೆ 4ನೇ ಸ್ಥಾನಕ್ಕೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸ್ಥಾನಗಳ ಕೊರತೆ ಎದುರಾಗಲಿದೆ.
ಎರಡು ರಾಷ್ಟೀಯ ಪಕ್ಷಗಳು ತಮ್ಮ ಸ್ವಸಾಮರ್ಥ್ಯದಿಂದ ಗೆಲ್ಲಬಹುದಾದ ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಜೆಡಿಎಸ್ ತಮ್ಮ ಬಳಿಯಲ್ಲಿರುವ ಶಾಸಕರ ಜೊತೆ 14 ಶಾಸಕರ ಕೊರತೆಯನ್ನು ಎದುರಿಸುತ್ತಿದ್ದು ನಾಲ್ಕನೇ ಸ್ಥಾನವನ್ನು ವಶಕ್ಕೆ ಪಡೆಯುವ ನಿರೀಕ್ಷೆಯಲ್ಲಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಗೆಲುವನ್ನು ಪಡೆಯಲು ಒಬ್ಬ ಅಭ್ಯರ್ಥಿಗೆ 46 ಮತಗಳ ಅವಶ್ಯಕತೆ ಇದೆ. ಬಿಜೆಪಿಯು ಓರ್ವ ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿಗೆೆ 122 ಶಾಸಕರ ಮತಗಳನ್ನು ಹೊಂದಿದೆ. ಇದರಿಂದಾಗಿ ಸ್ವಂತ ಬಲದ ಮೇಲೆ ಎರಡು ಸ್ಥಾನಗಳನ್ನು ಪಡೆಯಲಿದ್ದು ಇನ್ನು 30 ಮತಗಳು ಹೆಚ್ಚುವರಿಯಾಗಿ ಇರಲಿದೆ.
ಕಾಂಗ್ರೆಸ್ 70 ಶಾಸಕರ ಮತಗಳನ್ನು ಹೊಂದಿದ್ದು ಸ್ವಂತ ಬಲದ ಮೇಲೆ ಒಂದು ಸ್ಥಾನವನ್ನು ಗೆಲ್ಲಲಿದೆ ಇದರೊಂದಿದೆ 24 ಮತಗಳು ಹೆಚ್ಚವರಿಯಾಗಿ ಸಿಗಲಿದೆ. ಇನ್ನು ಪ್ರಾದೇಶಿಕ ಪಕ್ಷ ಜೆಡಿಎಸ್ 32 ಶಾಸಕರನ್ನು ಹೊಂದಿದೆೆ. ಜೆಡಿಎಸ್ಗೆ ಸ್ವಂತ ಬಲದ ಮೇಲೆ ರಾಜ್ಯಸಭಾ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಿಲ್ಲ. ಇದರಿಂದಾಗಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ ಅಥವಾ ಬಿಜೆಪಿಯ ಹೆಚ್ಚುವರಿ ಮತಗಳ ಮೇಲೆ ಕಣ್ಣಿಡಬೇಕಿದೆ.

ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭೇಟಿ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ರನ್ನು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಭೇಟಿಯಾಗಿದ್ದಾರೆ. ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭೇಟಿಯಾಗಿದ್ದು ಹೆಚ್ಚುವರಿ ಮತಗಳನ್ನು ಕೇಳಿದ್ದಾರೆ ಎನ್ನಲಾಗುತ್ತಿದೆ. ಡಿಕೆ ಶಿವಕುಮಾರ್ ಸಹ ಜೆಡಿಎಸ್ಗೆ ಬೆಂಬಲವನ್ನು ನೀಡುವ ಮನಸ್ಸನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ. ಆದರೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯಗೆ ಜೆಡಿಎಸ್ಗೆ ಬೆಂಬಲ ನೀಡಲು ಮನಸ್ಸಿಲ್ಲ ಎನ್ನಲಾಗಿದ್ದು ಜೆಡಿಎಸ್ ಅಭ್ಯರ್ಥಿಯ ಕೋರಿಕೆಗೆ ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಕೈ ಜೋಡಿಸಿದರೇ ಜೆಡಿಎಸ್ ಅಭ್ಯರ್ಥಿಯ ಗೆಲವು ಕಟ್ಟಿಟ್ಟಬುತ್ತಿ.

ಬಿಜೆಪಿ ಹೈಕಮಾಂಡ್ ಕಡೇ ಗಳಿಗೆಯ ತೀರ್ಮಾನವೇನು?
ರಾಜ್ಯಸಭಾ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಅನಾಯಾಸವಾಗಿ ಗೆಲ್ಲಿಸಿಕೊಂಡು ಬರುವ ಶಕ್ತಿ ಬಿಜೆಪಿಗಿದೆ. ಬಿಜೆಪಿಯು ಹೆಚ್ಚುವರಿ ಮತಗಳೊಂದಿಗೆ ಮತ್ತೊಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲು ಕಾಂಗ್ರೆಸ್ ಅಥವಾ ಜೆಡಿಎಸ್ ಬೆಂಬಲವನ್ನು ಪಡೆಯಬೇಕು. ಆದರೆ ಬಿಜೆಪಿ ಕಾಂಗ್ರೆಸ್ ಬೆಂಬಲವನ್ನು ಹೇಳುವ ಮಾತಿಲ್ಲ. ಜೆಡಿಎಸ್ ತನ್ನ ಅಭ್ಯರ್ಥಿಯ್ನು ಕಣಕ್ಕಿಳಿಸುತ್ತಿರುವುದರಿಂದ ಜೆಡಿಎಸ್ ಬೆಂಬಲ ಪಡೆಯಲು ಅಸಾಧ್ಯದ ಸಂಗತಿ. ಇದರಿಂದಾಗಿ 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸೋಲುವ ಬದಲು ತಟಸ್ಥವಾಗಿರುವುದೇ ಲೇಸು ಎಂದು ಹೈಕಮಾಂಡ್ ತಿಳಿಸಿದೆ ಎನ್ನಲಾಗುತ್ತಿದೆ. ಆದರೂ ಸದಾ ಕಡೇಯ ಸಮಯದಲ್ಲಿ ಬಿಜೆಪಿ ಹೈಕಮಾಂಡ್ ಏನಾದರೂ ತೀರ್ಮಾನ ಕೈಗೊಳ್ಳುತ್ತಾ? ಎಂದು ರಾಜ್ಯ ಬಿಜೆಪಿ ಎದುರು ನೋಡುತ್ತಿದೆ.

ವಿಧಾನಸಭಾ ಚುನಾವಣೆಯ ವ್ಯತಿರಿಕ್ತ ಪರಿಣಾಮ ಭಯ
ರಾಜ್ಯ ವಿಧಾನ ಸಭೆಯ ಚುನಾವಣೆ ಸಮೀಪಿಸುತ್ತಿರುವುದರಿಂದಾಗಿ ಜೆಡಿಎಸ್ ಬಿಜೆಪಿಯ ಬೆಂಬಲ ಪಡೆಯಲು ಹಿಂದೇಟು ಹಾಕುತ್ತಿದೆ. ಬಿಜೆಪಿಯ ಬೆಂಬಲವನ್ನು ಪಡೆದುಕೊಂಡರೇ ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂದು ಕಾಂಗ್ರೆಸ್ ಆರೋಪಿಸುತ್ತದೆ. ಇದು ವಿಧಾನಸಭಾ ಚುನಾವಣೆಯ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುವ ಸಾಧ್ಯತೆಯಿದೆ. ಇದರಿಂದಾಗಿ ನೇರವಾಗಿ ಬಿಜೆಪಿಯ ಬೆಂಬಲವನ್ನು ಜೆಡಿಎಸ್ ಪಡೆದುಕೊಳ್ಳುತ್ತಿಲ್ಲ. ಕಾಂಗ್ರೆಸ್ ಬೆಂಬಲವನ್ನು ನೀಡದಿದ್ದರೇ ಜೆಡಿಎಸ್ ವರಿಷ್ಠ ಪ್ರಧಾನಿ ಮೋದಿ ಜೊತೆ ಮಾತನಾಡಿ ಹೆಚ್ಚುವರಿ ಮತ ಕೇಳುವ ಅನಿವಾರ್ಯತೆ ಸೃಷ್ಟಿಯಾಗಬಹುದು. ಮೇ 31, ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುವುದರಿಂದ ರಾಷ್ಟ್ರೀಯ ಪಕ್ಷಗಳ ತೀರ್ಮಾನ ಜೆಡಿಎಸ್ಗೆ ಪ್ರಮುಖವಾಗಲಿದೆ.

ಮೂರು ಪಕ್ಷಗಳ ಜೊತೆ ಉತ್ತಮ ಬಾಂಧವ್ಯ
ಜೆಡಿಎಸ್ ತನ್ನ ಅಭ್ಯರ್ಥಿ ಕುಪೇಂದ್ರ ರೆಡ್ಡಿಯನ್ನು ಕರೆದು ನೇರವಾಗಿ ಮಾತನಾಡಿದೆ ಎಂಬ ಸುದ್ದಿ ಇದೆ. ಜೆಡಿಎಸ್ನ 32 ಮತಗಳು ಸಿಗಲಿವೆ. ಗೆಲುವಿಗೆ ಬೇಕಿರುವ 14 ಮತಗಳ ಕೊರತೆಯನ್ನು ನೀಗಿಸಿಕೊಳ್ಳಲು ಅಭ್ಯರ್ಥಿಗೆ ಸೂಚಿಸಿದೆ. ಇದಕ್ಕಾಗಿಯೇ ಬೆಂಬಲವನ್ನು ಕೊರಲು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ರನ್ನು ಭೇಟಿಯಾದ ಕುಪೇಂದ್ರ ರೆಡ್ಡಿ ಹೆಚ್ಚುವರಿ ಮತವನ್ನು ತಮಗೆ ನೀಡಲು ಕೋರಿಕೊಂಡಿದ್ದಾರೆ. ಇನ್ನು ವೈಯಕ್ತಿಕವಾಗಿ ಮೂರು ಪಕ್ಷಗಳ ಜೊತೆಗೆ ಕುಪೇಂದ್ರ ರೆಡ್ಡಿ ಚನ್ನಾಗಿರುವುದರಿಂದ ಬಿಜೆಪಿಯ ಕೆಲವು ಮತವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುದು ಜೆಡಿಎಸ್ ಅಭ್ಯರ್ಥಿಗೆ ಪ್ಲಸ್ ಪಾಯಿಂಟ್ ಆಗಿದೆ. ಇನ್ನು ಕುಪೇಂದ್ರ ರೆಡ್ಡಿ ಡಿ. ಕೆ. ಶಿವಕುಮಾರ್ ಭೇಟಿಯ ಬಳಿಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್ರನ್ನು ಭೇಟಿಯಾಗಿ ಬೆಂಬಲ ಯಾಚಿಸಿದ್ದಾರೆ.












Click it and Unblock the Notifications