ಭಿನ್ನಾಭಿಪ್ರಾಯ ಇದ್ದರೂ ಜೆಡಿಎಸ್ ನಿಷ್ಠೆ ಮೆರೆದ ಅರಸೀಕೆರೆ ಶಿವಲಿಂಗೇಗೌಡ
ಬೆಂಗಳೂರು, ಜೂ. 10: ತನ್ನದೇ ಶೈಲಿಯ ನೇರ- ನಿಷ್ಠುರ ಮಾತುಗಳ ಮೂಲಕ ರಾಜ್ಯದಲ್ಲಿ ಖ್ಯಾತಿ ಗಳಿಸಿರುವ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಜೆಡಿಎಸ್ ಪಕ್ಷದ ಬಗ್ಗೆ ಬೇಸರವಿದ್ದರೂ ರಾಜ್ಯ ಸಭೆ ಚುನಾವಣೆಯಲ್ಲಿ ಪಕ್ಷ ಅಭ್ಯರ್ಥಿಗೆ ಮತ ನೀಡಿದ್ದಾರೆ. ಈ ಮೂಲಕ ಪಕ್ಷ ನಿಷ್ಠೆ ಮೆರೆದಿದ್ದಾರೆ.
ಜೆಡಿಎಸ್ ಗೆ ಮತ ನೀಡಿದ ಬಗ್ಗೆ ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಶಿವಲಿಂಗೇಗೌಡ, ನಾನು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ. ನನಗೆ ಕುಮಾರಣ್ಣ ಪೋನ್ ಮಾಡಿದ್ದರು. ರೇವಣ್ಣ ಕೂಡ ಮಾತನಾಡಿದ್ದರು. ನನಗೆ ನನ್ನ ಕ್ಷೇತ್ರದ ಮತದಾರರು ಜೆಡಿಎಸ್ ಗೆ ಮತ ಹಾಕುವಂತೆ ಹೇಳಿದ್ದಾರೆ. ಹೀಗಾಗಿ ಅವರ ಮಾತಿನಂತೆ ಮತ ಹಾಕಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷ ತೊರೆಯುವ ಬಗ್ಗೆ ಕೇಳಿದ ಪ್ರಶ್ನೆಗೆ, ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ ಶಿವಲಿಂಗೇಗೌಡ, ಹಿಂದೇನು, ಮುಂದೇನು ಅನ್ನೋದನ್ನು ಮುಂದಿನ ದಿನಗಳಲ್ಲಿ ನೋಡೋಣ. ಮನೆಯಲ್ಲಿ ಮಲಗಿದ್ದೆ. ಎದ್ದು ಈಗ ಎದ್ದು ಬಂದಿದ್ದೇನೆ. ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ಸ್ಪಷ್ಟಪಡಿಸಿದರು. ನಿಮ್ಮ ಪಕ್ಷದ ಅಭ್ಯರ್ಥಿ ಜಯ ಸಾಧಿಸುತ್ತಾರೆಯೇ ಎಂಬ ಪ್ರಶ್ನೆಗೆ, ಅದನ್ನು ಅವರಿಗೆ ಕೇಳ್ರೀ.. ನನಗ್ಯಾಕೆ ಕೇಳ್ತೀರಿ ? ಅದನ್ನೆಲ್ಲಾ ಕೇಳಬಾರದು ಎಂದು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿಮ್ಮ ಪಕ್ಷದ ಶಾಸಕರಿಗೆ ಪತ್ರ ಬರೆದು ಮತ ನೀಡುವಂತೆ ಕೇಳಿದ್ದರಲ್ಲಾ ಎಂದು ಕೇಳಿದ ಪ್ರಶ್ನೆಗೆ, ಅವರನ್ನು ಯಾಕೆ ಎಳೆದು ತರುತ್ತೀರಿ ಪಾಪ. ನನಗೆ ಯಾವ ಪತ್ರನೂ ಬಂದಿಲ್ಲ. ನನ್ನ ಕ್ಷೇತ್ರದ ಜನರು ಹೇಳಿದಂತೆ ಮತ ಹಾಕಿದ್ದೇನೆ ಎಂದು ಶಿವಲಿಂಗೇಗೌಡ ಅವರು ಪ್ರತಿಕ್ರಿಯೆ ನೀಡಿದರು.

ಅರಸೀಕೆರೆಯ ಶಾಸಕ ಶಿವಲಿಂಗೇಗೌಡ ಅವರು ಹಾಸ್ಯ ಮಿಶ್ರಣ ಮಾಡಿ ಗ್ರಾಮೀಣ ಜನರ ಮಾತಿನಲ್ಲೇ ಸದನದಲ್ಲಿ ಮಾತನಾಡುವ ಮೂಲಕ ರಾಜ್ಯಕ್ಕೆ ಪರಿಚಯವಾಗಿದ್ದಾರೆ. ಶಿವಲಿಂಗೇಗೌಡರ ಮಾತು ಸಾಮಾಜಿಕ ಜಾಲ ತಾಣದಲ್ಲಿ ಕೂಡ ವೈರಲ್ ಅಗಿವೆ. ಅರಸೀಕೆರೆ ಶಾಸಕ ಜೆಡಿಎಸ್ ಪಕ್ಷದೊಳಗಿನ ಬೆಳವಣಿಗೆ ಬಗ್ಗೆ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು. ಅಲ್ಲದೇ ಜೆಡಿಎಸ್ ತೊರೆಯುತ್ತಾರೆ ಎಂಬ ಮಾತು ಕೇಳಿ ಬಂದಿತ್ತು.












Click it and Unblock the Notifications