ರಾಜ್ಯಸಭೆ ಚುನಾವಣೆ : ಮುಂಬೈಗೆ ಹಾರಿದ ಪಕ್ಷೇತರ ಶಾಸಕರು
ಬೆಂಗಳೂರು, ಜೂನ್ 06 : ಕರ್ನಾಟಕದಲ್ಲಿ ಮತ್ತೊಮ್ಮೆ ರೆಸಾರ್ಟ್ ರಾಜಕೀಯ ಆರಂಭವಾಗಿದೆ. ಕುದುರೆ ವ್ಯಾಪಾರದ ಭೀತಿ ಹಿನ್ನಲೆಯಲ್ಲಿ 11 ಪಕ್ಷೇತರ ಶಾಸಕರು ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಮುಂಬೈಗೆ ತೆರಳಿದ್ದಾರೆ. ಈ ಮೂಲಕ ರಾಜ್ಯಸಭೆ ಚುನಾವಣೆಯಲ್ಲಿಯೂ ರೆಸಾರ್ಟ್ ರಾಜಕೀಯ ಆರಂಭವಾಗಿದೆ.
ಬೆಂಗಳೂರಿನ ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ 11 ಪಕ್ಷೇತರ ಶಾಸಕರು ಮುಂಬೈಗೆ ತೆರಳಿದ್ದಾರೆ. ಭಾನುವಾರ ರಾತ್ರಿ ಬೆಂಗಳೂರಿನಿಂದ ಶಾಸಕರ ತಂಡ ಮುಂಬೈಗೆ ತೆರಳಿದ್ದು, ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದೆ. [ಸ್ಟಿಂಗ್ ಆಪರೇಶನ್: ಜಿಟಿ ದೇವೇಗೌಡ ಹೇಳುವುದೇನು?]

ಜೆಡಿಎಸ್ ರಾಜ್ಯಸಭೆ ಚುನಾವಣೆಗೆ ಪಕ್ಷೇತರ ಶಾಸಕರನ್ನು ಸೆಳೆಯುವ ಸಾಧ್ಯತೆ ಇದೆ. ಆದ್ದರಿಂದ, ಶಾಸಕರು ಮುಂಬೈಗೆ ಹಾರಿದ್ದಾರೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಅನ್ವಯ ಶಾಸಕರು ಜೂನ್ 9ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಜೂನ್ 10 ರಂದು ವಿಧಾನಪರಿಷತ್ ಮತ್ತು ಜೂನ್ 11ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ.
ಚುನಾವಣೆ ಮುಂದೂಡಿಕೆ? : ರಾಜ್ಯದ 7 ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಮತ ಹಾಕಲು ಕೋಟಿ-ಕೋಟಿ ಹಣ ಕೇಳಿರುವ ರಹಸ್ಯ ಕಾರ್ಯಾಚರಣೆ ವರದಿ ಬಹಿರಂಗವಾದ ಬಳಿಕ ಚುನಾವಣೆ ಮುಂದೂಡುವ ಸಾಧ್ಯತೆ ಇದೆ. ಚುನಾವಣಾ ಆಯೋಗ ಇಂದು ಈ ಕುರಿತು ಅಧಿಕೃತ ಆದೇಶ ಹೊರಡಿಸಲಿದೆ. [ರಾಜ್ಯಸಭೆ ಚುನಾವಣೆ ಹೇಗೆ ನಡೆಯುತ್ತದೆ?]
ಮುಂಬೈಗೆ ಹೋಗಿರುವ ಶಾಸಕರು : ಕಾರವಾರ ಶಾಸಕ ಸತೀಶ್ ಸೈಲ್, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಸಂಭಾಜಿ ಪಾಟೀಲ್, ಭಟ್ಕಳ ಶಾಸಕ ಮಂಕಾಳ ವೈದ್ಯ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಅಶೋಕ್ ಖೇಣಿ ಮುಂತಾದವರು ಮುಂಬೈಗೆ ತೆರಳಿದ್ದಾರೆ. [ವೋಟಿಗಾಗಿ ನೋಟು: ಯಾರು, ಏನು ಹೇಳಿದರು?]












Click it and Unblock the Notifications