Rain Alert: ಕರ್ನಾಟಕದಲ್ಲಿ ಮುಂಗಾರು ಮಳೆ ತಾತ್ಕಾಲಿಕ ವಿರಾಮ, ಈ ಜಿಲ್ಲೆಗಳಿಗಷ್ಟೇ ಭಾರೀ ಮಳೆ
ಬೆಂಗಳೂರು, ಸೆಪ್ಟಂಬರ್ 02: ಕರ್ನಾಟಕ ರಾಜ್ಯದಲ್ಲಿ ನಿರಂತರವಾಗಿ ಅಬ್ಬರಿಸಿದ್ದ ಮುಂಗಾರು ಮಳೆಯು ಸದ್ಯ ತಾತ್ಕಾಲಿಕ ವಿರಾಮ ನೀಡಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ವಿಜ್ಞಾನಿಗಳು ಮಂಗಳವಾರ ಮುನ್ಸೂಚನೆ ವರದಿಯಲ್ಲಿ ತಿಳಿಸಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದೆ. ಕೆಲವೇ ಕೆಲ ಜಿಲ್ಲೆಗಳಿಗೆ ಮಾತ್ರವೇ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಮಳೆಯಿಂದ ಕಂಗೆಟ್ಟ ಜಿಲ್ಲೆಗಳಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಕರ್ನಾಟಕ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಾದ್ಯಂತ ವಾರಗಳಿಂದಲೂ ಧಾರಾಕಾರ ಮಳೆ ಆಗುತ್ತಲೆ ಇದೆ. ಇದೀಗ ಬಂಗಾಳಕೊಲ್ಲಿ ಹಾಗೂ ಉತ್ತರ ಭಾರತದ ಒಂದೆಡೆರು ಕಡೆ ಚಂಡಮಾರುತ ಪ್ರಸರಣದ ಹೊರತಾಗಿಯೂ ಕರ್ನಾಟಕಕ್ಕೆ ಮಳೆ ಅಬ್ಬರ ಇಳಿಕೆ ಆಗಿದೆ. ಸೆಪ್ಟಂಬರ್ 03ರಿಂದ ಮುಂದಿನ ದಿನಗಳ ಕಾಲ ಮೂರು ಜಿಲ್ಲೆಗಳಿಗೆ ಮಾತ್ರ ಭಾರೀ ಮಳೆ ಆಗಲಿದೆ.

ಹೌದು, ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗಳ ಹಲವೆಡೆ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಇಲ್ಲಿ ಗರಿಷ್ಠ 115 ಮಿಲಿ ಮೀಟರ್ ಮಳೆ ನಿರೀಕ್ಷೆ ಇದೆ. ಮೂರು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದರ ಹೊರತಾಗಿ ಒಳನಾಡಿನ ಬೀದರ್, ಯಾದಗಿರಿ, ಕಲಬುರಗಿಯಲ್ಲಿ ನಾಳೆ ಬುಧವಾರ ಒಂದು ದಿನ ಮಾತ್ರ ಧಾರಾಕಾರ ಮಳೆ ಹಿನ್ನೆಲೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇದರ ಹೊರತು ಬೇರಾವ ಜಿಲ್ಲೆಗಳಿಗೂ ಹೆಚ್ಚು ಮಳೆಯ ಸಂಭವವಿಲ್ಲ ಎಂದು ಇಂದಿನ ಮಳೆ ಮುನ್ಸೂಚನೆ ವರದಿ ತಿಳಿಸಿದೆ.
ಒಳನಾಡು ಜಿಲ್ಲೆಗಳಿಗೆ ಏನಿದೆ ಮುನ್ಸೂಚನೆ?
ಮಲೆನಾಡು ಸೇರಿದಂತೆ ಎಲ್ಲ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಬ್ಬು ಕವಿದ ವಾತಾವರಣ, ಸೋನೆ ಮಳೆ ಇಲ್ಲವೇ ಹಗುರ ಮಳೆ ನಿರೀಕ್ಷೆ ಇದೆ. ಇದರ ಹೊರತು ಗಂಭೀರ ಸ್ವರೂಪದ ಬದಲಾವಣೆ, ಭಾರೀ ಮಳೆಯ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಖಚಿತಪಡಿಸಿದೆ.
ಒಂದು ವೇಳೆ ಮುಂದಿನ ದಿನಗಳಲ್ಲಿ ಚಂಡಮಾರುತ ಪ್ರಸರಣ, ಸ್ಟ್ರಫ್, ವಾಯುಭಾರ ಕುಸಿತದಂತಹ ವಾತಾವರಣ ಸೃಷ್ಟಿಯಾದರೆ, ಉಲ್ಬಣಿಸಿದರೆ ಮತ್ತೆ ಮುಂಗಾರು ಚುರುಕುಗೊಳ್ಳುವ ಸಾಧ್ಯತೆ ಇದೆ. ಅಲ್ಲಿಯವರೆಗೆ ರಾಜ್ಯದಲ್ಲಿ ಮಳೆ ತಾತ್ಕಾಲಿಕ ವಿರಾಮ ನೀಡಲಿದೆ. ಮತ್ತೆ ಎಂದಿನಂತೆ ಬಿಸಲಿನ ಪ್ರಮಾಣ ಹೆಚ್ಚಾಗಲಿದೆ.
ಬೆಂಗಳೂರಿಗೆ ತುಂತುರು ಮಳೆ, ತಾಪಮಾನ?
ಬೆಂಗಳೂರಿನಲ್ಲಿ ಅಲ್ಲಲ್ಲಿ ಸೆಪ್ಟಂಬರ್ 6ರವರೆಗೆ ಹಗುರ ಮಳೆ ಆಗುವ ಸಂಭವವಿದೆ. ಮಧ್ಯಾಹ್ನ ಬಳಿಕ ಮಬ್ಬು ಕವಿಯಬಹುದು. ರಾತ್ರಿ ತಂಪು ಗಾಳಿಯ ಅನುಭವವಾಗಲಿದೆ. ಇದರ ಹೊರತು ಜೋರು, ಭಾರೀ ಮಳೆಯ ಸಂಭವವು ಸದ್ಯಕ್ಕೆ ಇಲ್ಲ. ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಮುಂದುವರಿಯಲಿದೆ.












Click it and Unblock the Notifications