ರಾಹುಲ್ ಗಾಂಧಿ ಜತೆ ಚುನಾವಣೆಗೆ ರಣತಂತ್ರ ಹೆಣೆದ ಸಿಎಂ-ಪರಂ
ನವದೆಹಲಿ, ಅಕ್ಟೋಬರ್ 12: 2018ರ ರಾಜ್ಯ ವಿಧಾನಸಭೆ ಚುನಾವಣೆಗೆ ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಕೇಂದ್ರ ನಾಯಕರು ಒಟ್ಟಾಗಿ ರಣತಂತ್ರ ಹೆಣೆಯಲು ಆರಂಭಿಸಿದ್ದಾರೆ.
ಮುಂದಿನ ಚುನಾವಣೆಯ ರಣತಂತ್ರ ಹೇಗಿರಬೇಕು ಎಂಬ ಬಗ್ಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಇಂದು ನವದೆಹಲಿಯಲ್ಲಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್, ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ವೀರಪ್ಪ ಮೋಯ್ಲಿ, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್ ಪಾಟೀಲ್ ಉಪಸ್ಥಿತರಿದ್ದರು.
ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದ ಪರಮೇಶ್ವರ್, 'ವಿಧಾನಸಭೆ ಚುನಾವಣೆಗೆ ಬೇಕಾದ ನೀಲನಕ್ಷೆ'ಯನ್ನು ವಿವರವಾಗಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದು ಹೇಳಿದ್ದಾರೆ.
"ಚುನಾವಣೆಯನ್ನು ಹೇಗೆ ಎದುರಿಸಬೇಕು. ರಣತಂತ್ರ ಏನಾಗಿರಬೇಕು - ಮೊದಲಾದವನ್ನೆಲ್ಲಾ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಕೆಲವು ಸಲಹೆಗಳನ್ನೂ ನೀಡಿದ್ದಾರೆ," ಎಂದು ಅವರು ಸಭೆಯ ನಂತರ ಹೇಳಿದರು.
ಇದೇ ವೇಳೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷ ಮತ್ತು ಸರಕಾರದ ಕಡೆಯಿಂದ ಮಾಡಿಕೊಂಡ ಸಿದ್ದತೆಗಳನ್ನೂ ಹೈಕಮಾಂಡ್ ಗಮನಕ್ಕೆ ತರಲಾಯಿತು. ಚುನಾವಣೆಗೆ ಸಂಬಂಧಿಸಿದಂತೆ ಕೆಪಿಸಿಸಿಯ ಕೆಲಸಗಳನ್ನು ಮತ್ತಷ್ಟು ತ್ವರಿತಗೊಳಿಸುವಂತೆ ರಾಹುಲ್ ಗಾಂಧಿ ಸೂಚಿಸಿದ್ದಾರೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.
ಇನ್ನು ಟಿಕೆಟ್ ಹಂಚಿಕೆಯ ವಿಳಂಬದ ಬಗ್ಗೆ ಮಾತನಾಡಿದ ಅವರು, "ನಾವಿದನ್ನು ಸಭೆಯಲ್ಲಿ ಚರ್ಚೆ ನಡೆಸಿದ್ದೇವೆ. ಇದೂ ನಮ್ಮ ರಣತಂತ್ರವಾಗಿದೆ. ನಮಗೆ ಸರಿ ಹೊಂದುವ ಸಂದರ್ಭ ಟಿಕೆಟ್ ಹಂಚಿಕೆ ಮಾಡುತ್ತೇವೆ," ಎಂದು ಸಮಜಾಯಿಷಿ ನೀಡಿದರು.
ತಮ್ಮ ಮತ್ತು ಸಿದ್ದರಾಮಯ್ಯನವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದ ಪರಮೇಶ್ವರ್, "2018ರ ಲೋಕಸಭೆ ಚುನಾವಣೆಯನ್ನು ಮುಖ್ಯಮಂತ್ರಿಗಳ ನೇತೃತ್ವದಲ್ಲೇ ಎದುರಿಸಲಾಗುತ್ತದೆ," ಎಂದು ಸ್ಪಷ್ಟಪಡಿಸಿದರು.
ಎರಡು ತಿಂಗಳ ನಂತರ ಮತ್ತೆ ಚುನಾವಣಾ ರಣತಂತ್ರದ ಬಗ್ಗೆ ಚರ್ಚೆ ನಡೆಸಲು ಮತ್ತೊಂದು ಸಭೆ ನಡೆಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ನಾಯಕರು ರಾಜ್ಯದಾದ್ಯಂತ ಸಂಚಾರ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಜನರಿಗೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿ ಹೇಳಲಿದ್ದಾರೆ. ಪಕ್ಷವು ಕಾಂಗ್ರೆಸ್ ಸರಕಾರದ ಸಾಧನೆಗಳ ಬಗ್ಗೆ 1.10 ಕೋಟಿ ಕುಟುಂಬಗಳಿಗೆ ಪುಸ್ತಕವನ್ನು ಹಂಚಲಿದೆ ಎಂದು ಪರಮೇಶ್ವರ್ ಮುಂದಿನ ಹಾದಿಗಳ ಬಗ್ಗೆ ವಿವರ ನೀಡಿದರು.