ವಿಷಾದ, ಪ್ರಸಾದಗಳು ಜೀವನದ ಸಂಗಾತಿಗಳು: ರಾಘವೇಶ್ವರ ಶ್ರೀ
ಬೆಂಗಳೂರು, ಆಗಸ್ಟ್ 11: ಪೂಜೆ ನಮ್ಮ ಪ್ರಸನ್ನತೆಗಾಗಿ, ವಿಷಾದ - ಪ್ರಸಾದಗಳು ಜೀವನದ ಸಂಗಾತಿಗಳು ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಸಾದವೆಂದರೆ ಪ್ರಸನ್ನತೆ, ಪ್ರಸನ್ನತೆ ಮನಸ್ಸು ತಿಳಿಯಾದಾಗ ಉಂಟಾಗುತ್ತದೆ. ವಿಷಾದ ಮನಸ್ಸು ಕಲಕುವುದರಿಂದ ಆಗುತ್ತದೆ. ಮನಸ್ಸು ಅಲೆಯಿಲ್ಲದಂತಾಗಬೇಕು. ಹಾಗಾಗಲು ಮಾನಸ ಸರೋವರದಂತೆ ಮನಸ್ಸು ಕೂಡ ಕೈಲಾಸದ ಪದ ತಳದಲ್ಲಿರಬೇಕು ಎಂದು ಶ್ರೀಗಳು ಹೇಳಿದ್ದಾರೆ.

ನಗರದ ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಛಾತ್ರ ಚಾತುರ್ಮಾಸ್ಯದ ಧರ್ಮ ಸಭೆಯಲ್ಲಿ ಮಂಗಳವಾರ (ಆ 11) ಮಾತನಾಡುತ್ತಿದ್ದ ಶ್ರೀಗಳು, ಪೂಜೆಯ ಮುಖ್ಯ ಉದ್ದೇಶ ಪ್ರಸನ್ನತೆ. ಭಗವಂತನ ಪ್ರಸನ್ನತೆ ಹೂವು ಹಾಗೂ ನೈವೇದ್ಯದಲ್ಲಿ ಹರಿದು ಬರುವುದರಿಂದ ಅದಕ್ಕೆ ಪ್ರಸಾದ ಎಂದು ಕರೆಯುತ್ತಾರೆ. (ಮಾಧ್ಯಮಗಳೇ ಹೀಗೆ ಮಾಡಿದ್ರೆ, ಸ್ವಲ್ಪ ಯೋಚಿಸಿ)
ಆ ಪ್ರಸಾದವನ್ನು ಸೇವಿಸಿದಾಗ ನಮ್ಮಲ್ಲಿ ಪ್ರಸನ್ನತೆ ಬರುತ್ತದೆ. ಅಷ್ಟೇ ಅಲ್ಲದೆ ಪೂಜೆಯಲ್ಲಿ ಬಳಸುವ ಎಲ್ಲ ಸುವಸ್ತುಗಳೂ ಮನಸ್ಸನ್ನು ಪ್ರಸನ್ನಗೊಳಿಸುತ್ತವೆ. ಹಾಗಾಗಿ ಪೂಜೆ ನಮಗಾಗಿ ಇರುವುದೇ ಹೊರತು ಭಗವಂತನಿಗಾಗಿ ಅಲ್ಲ ಎಂದು ಶ್ರೀಗಳು ಅಭಿಮತ ವ್ಯಕ್ತ ಪಡಿಸಿದ್ದಾರೆ.
ಶ್ರೀಭಾರತಿ ಪ್ರಕಾಶನದ ವತಿಯಿಂದ ಪ್ರಕಟವಾದ 'ಗೋಕಥೆ - 3' ಕೃತಿಯನ್ನು ಲೋಕಾರ್ಪಣೆ ಮಾಡಿ ಆಶೀರ್ವಚನ ನೀಡಿದ ಶ್ರೀಗಳು, ನಾವು ಏನನ್ನು ಸಮಾಜಕ್ಕೆ ಕೊಡುತ್ತೇವೆಯೋ ಅದೇ ನೂರಾಗಿ ಹಿಂದಿರುಗಿ ಬರುತ್ತದೆ.
ನಾವು ಭಗವಂತನಿಗೆ ಹಾಗೂ ಸಮಾಜಕ್ಕೆ ಕೊಡುವುದು ಎಂದರೆ, ನಮಗೆ ನಾವೇ ಕೊಟ್ಟುಕೊಂಡಂತೆ. ಏಕೆಂದರೆ ಅವೆಲ್ಲವೂ ಹಿಂದಿರುಗಿ ಬರುತ್ತದೆ.

ಹಾಗಾಗಿ ದಾನ ಮಾಡುವಾಗ ಮತ್ತು ದೇವರಿಗೆ ಸಮರ್ಪಿಸುವಾಗ ಉತ್ತಮವಾದುದನ್ನೇ ಕೊಡಬೇಕು. ಕೊಟ್ಟದ್ದು ನಮಗೆ ಸೇರುತ್ತದೆ ಹೊರತು ಇಟ್ಟದ್ದು ನಮಗೆ ಸಿಗದು ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಜಾದೂ ಪ್ರದರ್ಶನದಲ್ಲಿ ವಿಶ್ವದಾಖಲೆ ನಿರ್ಮಿಸಿ, "ಮಳಿ" ಸಹೋದರಿಯರು ಎಂದೇ ಖ್ಯಾತರಾದ ಅಪೂರ್ವ ಮಳಿ ಹಾಗೂ ಅಂಜನಾ ಮಳಿ ಇವರಿಗೆ ಈ ಸಂದರ್ಭದಲ್ಲಿ ಛಾತ್ರಪುರಸ್ಕಾರ ನೀಡಲಾಯಿತು. ಗೋಕಥೆ ಪುಸ್ತಕದ ಲೇಖಕಿ ಚಂಪಕಾ ಭಟ್ ಮಾತನಾಡಿದರು.
ಛಾತ್ರ ಚಾತುರ್ಮಾಸ್ಯ ಸಮಿತಿಯ ಯು ಎಸ್ ಜಿ ಭಟ್, ಶ್ರೀಮಠದ ಸಿಇಒ ಕೆ ಜಿ ಭಟ್, ಪ್ರಕಾಶನದ ಕಾರ್ಯದರ್ಶಿ ವಿದ್ವಾನ್ ಜಗದೀಶ ಶರ್ಮಾ, ಸಾಹಿತಿ ಗಜಾನನ ಶರ್ಮಾ, ರಾಜೇಶ ಮಳಿ, ಸವಾರಿ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥ, ಶಾನುಬೋಗ ಅರವಿಂದ ಶರ್ಮಾ, ಗಣಪತಿ ಹೆಗಡೆ ಉಪಸ್ಥಿತರಿದ್ದರು. ಕುಮಾರಿ ಪೌಷಾ ಭಟ್ ನಿರೂಪಿಸಿದರು.












Click it and Unblock the Notifications