ರಾಘವೇಶ್ವರ ಶ್ರೀಗಳಿಗೆ ವೈದ್ಯಕೀಯ ಪರೀಕ್ಷೆ ಆಗಬೇಕು
ಬೆಂಗಳೂರು, ಡಿ. 3 : ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವೈದ್ಯಕೀಯ ಪರೀಕ್ಷೆ ಆಗಲೇಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ವೈದ್ಯಕೀಯ ಪರೀಕ್ಷೆಗೆ ತಡೆ ಕೋರಿ ಸ್ವಾಮೀಜಿಗಳ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ಶ್ರೀಗಳ ವೈದ್ಯಕೀಯ ಪರೀಕ್ಷೆಗೆ ತಡೆ ನೀಡಿರುವ ಕುರಿತು ಸಿಐಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿ ಬುಧವಾರ ತೀರ್ಪು ನೀಡಿದ ಹೈಕೋರ್ಟ್ನ ನ್ಯಾ.ಎ.ಎನ್.ವೇಣುಗೋಪಾಲ ಗೌಡ ಅವರ ಏಕಸದಸ್ಯ ಪೀಠ, ವೈದ್ಯಕೀಯ ಪರೀಕ್ಷೆ ಸಂವಿಧಾನ ಬದ್ಧವಾಗಿದೆ. ಆದ್ದರಿಂದ ಪರೀಕ್ಷೆ ನಡೆಯಲೇಬೇಕು ಎಂದು ಸ್ಪಷ್ಟಪಡಿಸಿದೆ. [ಪುರುಷತ್ವ ಪರೀಕ್ಷೆ ಎಂದರೇನು?]
ರಾಘವೇಶ್ವರ ಶ್ರೀಗಳ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಗಾಯಕಿ ಪ್ರೇಮಲತಾ ದಿವಾಕರ್ ಶಾಸ್ತ್ರೀ ಅವರ ಬಟ್ಟೆಯಲ್ಲಿ ವೀರ್ಯ ಪತ್ತೆಯಾಗಿತ್ತು. ಅದು ಯಾರದ್ದು? ಎಂದು ತಿಳಿಯಲು ಸಿಐಡಿ ಪೊಲೀಸರು ಶ್ರೀಗಳ ವೈದ್ಯಕೀಯ ಪರೀಕ್ಷೆ ನಡೆಸಲು ನೋಟಿಸ್ ನೀಡಿದ್ದರು. [ರಾಘವೇಶ್ವರ ಶ್ರೀ ಸಮರ್ಥ ಪುರುಷರು, ಪರೀಕ್ಷೆ ಏಕೆ?]
ಆದರೆ, ಹೈಕೋರ್ಟ್ಗೆ ಶ್ರೀಗಳ ಪರ ವಕೀಲರು ಅರ್ಜಿಸಲ್ಲಿಸಿ ಪರೀಕ್ಷೆಗೆ ತಡೆಯಾಜ್ಞೆ ತಂದಿದ್ದರು. ಇದನ್ನು ಪ್ರಶ್ನಿಸಿ ಸಿಐಡಿ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು ಮತ್ತು ತಡೆಯಾಜ್ಞೆ ತೆರವುಗೊಳಿಸುವಂತೆ ಮನವಿ ಮಾಡಿತ್ತು. ಈ ಕುರಿತು ತೀರ್ಪು ಇಂದು ಹೊರಬಂದಿದ್ದು, ಶ್ರೀಗಳ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿ, ವೈದ್ಯಕೀಯ ಪರೀಕ್ಷೆ ನಡೆಯಲೇಬೇಕು ಎಂದು ಆದೇಶ ನೀಡಿದೆ.[ಗಾಯಕಿ ಬಟ್ಟೆಯಲ್ಲಿ ವೀರ್ಯಾಣು ಪತ್ತೆ]
ಸ್ಪಷ್ಟನೆ ಕೇಳಿದ್ದರು : ರಾಘವೇಶ್ವರ ಶ್ರೀಗಳ ಪರ ವಾದ ಮಂಡಿಸಿದ್ದ ವಕೀಲ ರಾಘವನ್ ಅವರು, ನಿತ್ಯಾನಂದ ಸ್ವಾಮಿ ಅವರು ಹೇಳಿಕೊಂಡಂತೆ ಸ್ವಾಮೀಜಿ ತಾವು ಪುರುಷರಲ್ಲ ಎಂದು ಎಲ್ಲೂ ಹೇಳಿಲ್ಲ. ಸಿಐಡಿ ಅಧಿಕಾರಿಗಳು ಯಾವ-ಯಾವ ಪರೀಕ್ಷೆ ನಡೆಸುತ್ತಾರೆ ಎಂದು ಸ್ಪಷ್ಟಪಡಿಸಿಲ್ಲ. ಆದ್ದರಿಂದ ಪರೀಕ್ಷೆಗೆ ಅನುಮತಿ ನೀಡಬಾರದು ಎಂದು ವಾದ ಮಂಡಿಸಿದ್ದರು.
ಈ ಬಗ್ಗೆ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿರುವ ಕೋರ್ಟ್, ವೈದ್ಯಕೀಯ ಪರೀಕ್ಷೆಯ ಸ್ವರೂಪವನ್ನು ತನಿಖಾಧಿಕಾರಿಗಳು ಅರೋಪಿಗೆ ತಿಳಿಸುವ ಅಗತ್ಯವಿಲ್ಲ ಮತ್ತು ವೈದ್ಯಕೀಯ ಪರೀಕ್ಷೆ ಸಂವಿಧಾನಕ್ಕೆ ಬದ್ಧವಾಗಿದೆ. ಆದ್ದರಿಂದ, ಸ್ವಾಮೀಜಿಗಳು ಪರೀಕ್ಷೆಗೆ ಒಳಪಡಬೇಕು ಎಂದು ತಿಳಿಸಿದೆ.