“ಸಾಧನಾ ಸಮಾವೇಶ” ಸಮಾವೇಶವಲ್ಲ, ಕಾಂಗ್ರೆಸ್ನ ವೈಫಲ್ಯೋತ್ಸವ: ಆರ್. ಅಶೋಕ್
ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದ ಬಗ್ಗೆ ವಿರೋಧ ಪಕ್ಷ ನಾಯಕ ಆರ್. ಅಶೋಕ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ ಅಭಿವೃದ್ಧಿಗಿಂತ ಭ್ರಷ್ಟಾಚಾರ, ಬೆಲೆ ಏರಿಕೆ, ರೈತರ ಸಂಕಷ್ಟ ಮತ್ತು ದುರಾಡಳಿತದಲ್ಲೇ ನಂ.1 ಆಗಿದೆ ಎಂದು ಆರೋಪಿಸಿರುವ ಅವರು, ಈ ಸಮಾವೇಶವನ್ನು "ಸಾಧನಾ ಸಮಾವೇಶ" ಅಲ್ಲ, "ವೈಫಲ್ಯೋತ್ಸವ" ಎಂದು ಟೀಕಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿಕಾರಿರುವ ಆರ್. ಅಶೋಕ್, ರೈತರ ಆತ್ಮಹತ್ಯೆ, ಹಗರಣಗಳು, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರ ಮೇಲೆ ಆರ್ಥಿಕ ಹೊರೆ ಹಾಗೂ ಯುವಕರ ಭವಿಷ್ಯದ ಜೊತೆ ಆಟವಾಡಿರುವ ಆರೋಪಗಳನ್ನು ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿನ್ನೆ ತುಮಕೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಕರ್ನಾಟಕವನ್ನು "ನಂ.1" ಮಾಡಿದ್ದೇವೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದೀರಲ್ಲಾ?
ಹೌದು... ನಿಮ್ಮ ಆಡಳಿತದಲ್ಲಿ ಕರ್ನಾಟಕ ನಂ.1 ಆಗಿದೆ, ಆದರೆ ಅಭಿವೃದ್ಧಿಯಲ್ಲಿ ಅಲ್ಲ!
ಭ್ರಷ್ಟಾಚಾರದಲ್ಲಿ, ಬೆಲೆ ಏರಿಕೆಯಲ್ಲಿ, ರೈತರ ಕಣ್ಣೀರಿನಲ್ಲಿ, ಯುವಕರ ನಿರಾಶೆಯಲ್ಲಿ ಮತ್ತು ರಾಜ್ಯವನ್ನು ಸಾಲದ ಸುಳಿಗೆ ತಳ್ಳುವುದರಲ್ಲಿ ನೀವು ನಂ.1 ಆಗಿದ್ದೀರಿ!

* ರೈತರ ಆತ್ಮಹತ್ಯೆಯಲ್ಲಿ ನಂ.1!
ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಬರೋಬ್ಬರಿ 5,394 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗುತ್ತಿದ್ದರೆ, ಕರ್ನಾಟಕದಲ್ಲಿ ಮಾತ್ರ 22% ಕ್ಕೂ ಹೆಚ್ಚು ಏರಿಕೆಯಾಗಿದೆ.
ರೈತನ ಬದುಕು ಉಳಿಸುವ ಬದಲು, ಅವನ ಬದುಕಿನ ಆಶೆಯನ್ನೇ ಕೊಂದ ಸರ್ಕಾರ ನಿಮ್ಮದು!
ಇದೇನಾ ನಿಮ್ಮ "ರೈತಪರ" ಆಡಳಿತ?
* ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ನಂ.1!
ಮುಡಾ ಹಗರಣದಲ್ಲಿ ತಮ್ಮ ಹೆಸರು ಕೇಳಿಬಂದಿದೆ. ತಮ್ಮ ಪತ್ನಿಯವರ ಹೆಸರಿನಲ್ಲಿದ್ದ 14 ಸೈಟುಗಳನ್ನು ವಾಪಸ್ಸು ಕೊಡುವ ಮೂಲಕ ಪರೋಕ್ಷವಾಗಿ ತಪ್ಪೊಪ್ಪಿಕೊಂಡಿದ್ದೀರಿ. ನಿಮ್ಮ ಅತ್ಯಾಪ್ತರ ₹100 ಕೋಟಿ ಮೌಲ್ಯದ ಆಸ್ತಿಯನ್ನು ED ಜಪ್ತಿ ಮಾಡಿದೆ. CBI ತನಿಖೆ ತಪ್ಪಿಸಲು ಕನ್ನಡಿಗರ ತೆರಿಗೆ ಹಣದಲ್ಲಿ ಕೋಟ್ಯಂತರ ರೂಪಾಯಿ ವಕೀಲರ ಫೀಸ್ ಪಾವತಿಸಿದ್ದೀರಿ!
ರಾಜ್ಯ ಸರ್ಕಾರದ ಬೊಕ್ಕಸದ ಹಣ ನಿಮ್ಮ ಖಾಸಗಿ ಆಸ್ತಿನಾ?
ವಾಲ್ಮೀಕಿ ಹಗರಣ, KIADB ಹಗರಣ, KPSC ಹಗರಣ, ನಕಲಿ ಚೆಕ್ ಹಗರಣ,
ನಿಮ್ಮ ಸರ್ಕಾರ ಆಡಳಿತ ನಡೆಸುತ್ತಿದೆಯೋ ಅಥವಾ ಹಗರಣಗಳ ಕಾರ್ಖಾನೆ ನಡೆಸುತ್ತಿದೆಯೋ?
* ಗ್ಯಾರಂಟಿ ಹೆಸರಿನಲ್ಲಿ ಲೂಟಿ - ಬೆಲೆ ಏರಿಕೆಯಲ್ಲಿ ನಂ.1!
ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು, ಇನ್ನೊಂದು ಕೈಯಲ್ಲಿ ಕನ್ನಡಿಗರ ಜೇಬಿಗೆ ಕತ್ತರಿ ಹಾಕುತ್ತಿದ್ದೀರಿ!
▪️ ಹಾಲಿನ ದರ ಏರಿಕೆ
▪️ ವಿದ್ಯುತ್ ದರ ಏರಿಕೆ
▪️ ನೀರಿನ ದರ ಏರಿಕೆ
▪️ KSRTC ಬಸ್ ಟಿಕೆಟ್ ದರ ಏರಿಕೆ
▪️ ಆಸ್ತಿ ತೆರಿಗೆ ಏರಿಕೆ
▪️ ಸ್ಟಾಂಪ್ ಡ್ಯೂಟಿ ಏರಿಕೆ
▪️ ಕಸದ ಸುಂಕ ಏರಿಕೆ!
ಜನರಿಗೆ ಕೊಟ್ಟದ್ದು ಗ್ಯಾರಂಟಿಯಲ್ಲ... ಆರ್ಥಿಕ ಶಿಕ್ಷೆ!
* ರೌಡಿಸಂ ರಾಜಕಾರಣದಲ್ಲಿ ನಂ.1!
ಉಪಮುಖ್ಯಮಂತ್ರಿ @DKShivakumar ಅವರ "ನೆಟ್ ಬೋಲ್ಟ್ ಟೈಟ್ ಮಾಡ್ತೀವಿ", "ಹರಿದಾಕಿದ್ದೀರಾ" ಭಾಷೆ ಕೇಳಿದರೆ ರಾಜ್ಯದಲ್ಲಿ ಸರ್ಕಾರ ಇದೆಯೋ ಅಥವಾ ರೌಡಿಗಳ ಗ್ಯಾಂಗ್ ಮಾಫಿಯಾ ಇದೆಯೋ ಅನ್ನೋ ಅನುಮಾನ ಬರುತ್ತದೆ.
* ಯುವಕರ ಭವಿಷ್ಯ ಹಾಳು ಮಾಡುವುದರಲ್ಲಿ ನಂ.1!
KPSC ಪರೀಕ್ಷೆಯಲ್ಲಿಯಲ್ಲಿ ಪದೇ ಪದೇ ಎಡವಟ್ಟು, ತಪ್ಪು ಪ್ರಶ್ನೆಪತ್ರಿಕೆ, ಅಭ್ಯರ್ಥಿಗಳಿಗೆ ಕಿರುಕುಳ, ರಾತ್ರೋ ರಾತ್ರಿ ವೇಳಾಪಟ್ಟಿ ಬಿಡುಗಡೆ. ಮೈಸೂರಿನ ಅಭ್ಯರ್ಥಿಗೆ ಬೆಳಗಾವಿಯಲ್ಲಿ ಪರೀಕ್ಷಾ ಕೇಂದ್ರ ನೀಡಿ ಯುವಕರ ಬದುಕಿನ ಜೊತೆ ಚೆಲ್ಲಾಟವಾಡಿದ್ದೀರಿ. ರದ್ದಾದ ಪರೀಕ್ಷೆಯಿಂದ ₹13.40 ಕೋಟಿ ಸಾರ್ವಜನಿಕ ಹಣ ಪೋಲಾಗಿದೆ. ಇದಕ್ಕೆ ಯಾರು ಹೊಣೆ?
* ದುರಾಡಳಿತದಲ್ಲಿ ನಂ.1!
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ಅಮಾಯಕರು ಮೃತಪಟ್ಟರು. ಲೋಕಾಯುಕ್ತರೇ ಇದನ್ನು "ದುರಾಡಳಿತದ ಫಲ" ಎಂದು ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ. ವೈದ್ಯರಿಲ್ಲ. ಸ್ಕ್ಯಾನಿಂಗ್ ಸೇವೆಗಳಿಲ್ಲ. ಬಡವರ ಪಾಲಿನ ಆಸ್ಪತ್ರೆಗಳನ್ನು ಸ್ಮಶಾನಗಳನ್ನಾಗಿ ಮಾಡಿದ್ದೀರಿ!
* ಜನರು ಅಭಿವೃದ್ಧಿ ಕೇಳಿದರು - ನೀವು ಜಾಹೀರಾತು ಕೊಟ್ಟಿರಿ.
* ಜನರು ಉದ್ಯೋಗ ಕೇಳಿದರು - ನೀವು ಸುಳ್ಳು ಭರವಸೆ ಕೊಟ್ಟಿರಿ.
* ಜನರು ಒಳ್ಳೆಯ ಆಡಳಿತ ಕೇಳಿದರು - ನೀವು ಲೂಟಿ, ಹಗರಣ ಮತ್ತು ಅರಾಜಕತೆ ಕೊಟ್ಟಿರಿ.
ನಿನ್ನೆ ನಡೆದಿದ್ದು "ಸಾಧನಾ ಸಮಾವೇಶ" ಅಲ್ಲ.
ಅದು ಕಾಂಗ್ರೆಸ್ ಸರ್ಕಾರದ "ವೈಫಲ್ಯೋತ್ಸವ"!
ಇದು ಕನ್ನಡಿಗರ ನಂಬಿಕೆಗೆ ಬಗೆದ ದ್ರೋಹದ ಸಾರ್ವಜನಿಕ ಪ್ರದರ್ಶನ!
ಕನ್ನಡಿಗರು ಮೌನವಾಗಿರಬಹುದು ಆದರೆ ಮೂಕರಲ್ಲ. ನಿಮ್ಮ ಅಹಂಕಾರ, ದಬ್ಬಾಳಿಕೆ ಮತ್ತು ಭ್ರಷ್ಟಾಚಾರಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡುವ ದಿನ ದೂರವಿಲ್ಲ ಎಂದು ಆರ್ ಅಶೋಕ್ ಅವರು ದೂರಿದ್ದಾರೆ.














Click it and Unblock the Notifications