ಹೈಕಮಾಂಡ್ ನಾಯಕರ ಬುಲಾವ್, ದೆಹಲಿಗೆ ಆರ್.ಅಶೋಕ!
ಬೆಂಗಳೂರು, ಜುಲೈ 24 : ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿದೆ. ಬಿಜೆಪಿ ಸರ್ಕಾರ ರಚನೆ ಎಂದು ಆಗಲಿದೆ? ಎಂಬುದು ಸದ್ಯ ರಾಜ್ಯದ ಜನರ ಮುಂದಿರುವ ಪ್ರಶ್ನೆ. ಈ ವಾರದಲ್ಲಿ ಹೊಸ ಸರ್ಕಾರ ರಚನೆಯಾಗುವ ಯಾವುದೇ ಸೂಚನೆಗಳು ಸಿಗುತ್ತಿಲ್ಲ.
ಕರ್ನಾಟಕದ ರಾಜಕೀಯ ಬೆಳವಣಿಗೆ ಹಿನ್ನಲೆಯಲ್ಲಿ ಹಿರಿಯ ಬಿಜೆಪಿ ನಾಯಕ ಆರ್.ಅಶೋಕ ದೆಹಲಿಗೆ ತೆರಳಿದರು. ಹೈಕಮಾಂಡ್ ನಾಯಕರ ಕರೆ ಹಿನ್ನಲೆಯಲ್ಲಿ ಅವರು ದೆಹಲಿ ವಿಮಾನ ಹತ್ತಿದ್ದು, ಸಂಜೆ ನಾಯಕರನ್ನು ಭೇಟಿಯಾಗಲಿದ್ದಾರೆ.
ಹೈಕಮಾಂಡ್ ನಾಯಕರ ಸೂಚನೆಗಾಗಿ ಕಾದು ಕುಳಿತ ಯಡಿಯೂರಪ್ಪ!
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲು ಹೈಕಮಾಂಡ್ ಇನ್ನೂ ಒಪ್ಪಿಗೆ ಕೊಟ್ಟಿಲ್ಲ. ಇಂದು ಸಂಜೆ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಸರ್ಕಾರ ರಚನೆ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.
ಕಾಂಗ್ರೆಸ್ ಜತೆ ಮೈತ್ರಿ ಮುಂದುವರಿಕೆ: ಎಚ್ಡಿಕೆ ಹೇಳಿದ್ದೇನು?
15 ಶಾಸಕರ ರಾಜೀನಾಮೆ ಅಂಗೀಕಾರವಾಗುವ ತನಕ ಸರ್ಕಾರ ರಚನೆ ಪ್ರಕ್ರಿಯೆಗೆ ಕೈ ಹಾಕದಿರಲು ಬಿಜೆಪಿ ತೀರ್ಮಾನಿಸಿದೆ. ಸ್ಪೀಕರ್ ರಮೇಶ್ ಕುಮಾರ್ ಭೇಟಿಯಾದ ಬಿಜೆಪಿ ನಾಯಕರ ನಿಯೋಗ ರಾಜೀನಾಮೆ ಅಂಗೀಕಾರ ಮಾಡಬೇಕು ಎಂದು ಬುಧವಾರ ಮನವಿ ಸಲ್ಲಿಸಿದೆ.
"ಸಿಎಂ ಪಟ್ಟಕ್ಕೇರುವ ಮೊದಲೇ ರೈತರ ಹಿತ ಕಾಯುವ ಆಶ್ವಾಸನೆ"
ಹೈಕಮಾಂಡ್ ನಾಯಕರು ತಕ್ಷಣ ದೆಹಲಿಗೆ ಬರುವಂತೆ ಸೂಚಿಸಿದ ಹಿನ್ನಲೆಯಲ್ಲಿ ಮಧ್ಯಾಹ್ನ 1 ಗಂಟೆಯ ವಿಮಾನದಲ್ಲಿ ಅವರು ದೆಹಲಿಗೆ ತೆರಳಿದ್ದಾರೆ. ಕರ್ನಾಟಕದ ರಾಜಕೀಯ ಪರಿಸ್ಥಿತಿ ಕುರಿತು ಸಂಪೂರ್ಣ ವಿವರವನ್ನು ಅವರು ಹೈಕಮಾಂಡ್ ನಾಯಕರಿಗೆ ನೀಡಲಿದ್ದಾರೆ.
ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ರಾಜ್ಯಪಾಲ ವಜುಭಾಯಿ ವಾಲಾರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸುವ ನಿರೀಕ್ಷೆ ಇದೆ. ಅದಕ್ಕೂ ಮೊದಲು ಶಾಸಕಾಂಗ ಪಕ್ಷದ ಸಭೆ ನಡೆಸಿ, ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕಿದೆ.
ದೆಹಲಿಯಿಂದ ವೀಕ್ಷಕರು ಬಂದ ಬಳಿಕ ಎಲ್ಲಾ 105 ಶಾಸಕರ ಸಮ್ಮುಖದಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಎಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳಲು 2 ರಿಂದ 3 ದಿನ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.