ಗೊಂದಲ ಬೇಡ, ಎಲ್ಲರಿಗೂ ಕೋವಿಡ್ ಪರಿಹಾರ: ಅದನ್ನು ಪಡೆಯುವುದು ಹೇಗೆ?
ಬೆಂಗಳೂರು, ಸೆ. 29: "ಯಾರಿಗೂ ಯಾವುದೇ ಗೊಂದಲ ಬೇಡ, ಕೋವಿಡ್ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ರಾಜ್ಯ ಸರ್ಕಾರ 1 ಲಕ್ಷ ರೂಪಾಯಿ ಪರಿಹಾರ ಕೊಡುತ್ತದೆ" ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟನೆ ಕೊಟ್ಟಿದ್ದಾರೆ. ಜೊತೆಗೆ ಪರಿಹಾರ ಪಡೆಯಲು ಏನು ಮಾಡಬೇಕು ಎಂಬುದನ್ನೂ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಮಾತನಾಡಿರುವ ಅವರು, "ರಾಜ್ಯ ಸರ್ಕಾರ ಜನರ ಪರವಾಗಿ ಇದೆ. ನಮ್ಮದು ಜನಸ್ನೇಹಿ ಸರ್ಕಾರ. ಬಿಪಿಎಲ್ ಕುಟುಂಬದ ದುಡಿಯುವ ಸದಸ್ಯನನ್ನು ಕಳೆದುಕೊಂಡವರಿಗೆ 1 ಲಕ್ಷ ರೂ ವಿಪತ್ತು ಪರಿಹಾರ ನಿಧಿಯಿಂದ ಕೊಡುತ್ತೇವೆ. ಕೇಂದ್ರ ಸರ್ಕಾರ ಕೋವಿಡ್ನಿಂದ ಮೃತಪಟ್ಟ ಎಲ್ಲರಿಗೂ 50 ಸಾವಿರ ರೂ. ನೀಡುತ್ತದೆ. ಬಿಪಿಎಲ್ ಕಾರ್ಡ್ ಇರುವವರಿಗೆ ಒಟ್ಟು 1.5 ಲಕ್ಷ ರೂ. ಪರಿಹಾರ ಸಿಗುತ್ತದೆ" ಎಂದು ಭರವಸೆ ಕೊಟ್ಟಿದ್ದಾರೆ.
ರಾಜ್ಯ ಸರ್ಕಾರ ಮಂಗಳವಾರ ಪರಿಷ್ಕೃತ ಆದೇಶ ಹೊರಡಿಸಿದ್ದರಿಂದ ಎದ್ದಿದ್ದ ಗೊಂದಲಗಳನ್ನು ವಿಪತ್ತು ಪರಿಹಾರ ಮಂಡಳಿ ಅಧ್ಯಕ್ಷರೂ ಆಗಿರುವ ಕಂದಾಯ ಸಚಿವ ಆರ್. ಅಶೋಕ ಪರಿಹರಿಸಿದ್ದಾರೆ. ಜೊತೆಗೆ ಪರಿಹಾರ ಪಡೆಯಲು ಇರುವ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ. ಮಾರ್ಗಸೂಚಿ ಮುಂದಿದೆ.

ಕೋವಿಡ್ ಪರಿಹಾರಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೇಕು?
"ರಾಜ್ಯದ ಎಲ್ಲ ತಾಲ್ಲೂಕು ಕಚೇರಿ, ನಾಡ ಕಚೇರಿ, ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಕಚೇರಿಯಲ್ಲಿ ಕೋವಿಡ್ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು. ಎಲ್ಲೇ ಮೃತಪಟ್ಟಿದ್ದರೂ ಮೃತರ ವಾಸಸ್ಥಳ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಬೇಕು. ಅಧಿಕೃತ ಮರಣ ಪ್ರಮಾಣ ಪತ್ರ ಹೊಂದಿರಬೇಕು. ಬಿಪಿಎಲ್ ಕುಟುಂಬದ ದುಡಿಯುವ ಸದಸ್ಯ ನಾಗಿರಬೇಕು ಜೊತೆಗೆ ಮೃತರ ವಯಸ್ಸು 18 ವರ್ಷ ತುಂಬಿರಬೇಕು' ಎಂದು ಮಾರ್ಗಸೂಚಿ ಬಿಡುಗಡೆ ಆರ್. ಅಶೋಕ್ ವಿವರಿಸಿದ್ದಾರೆ. ಜೊತೆಗೆ ಯಾವ್ಯಾವ ದಾಖಲಾತಿಗಳನ್ನು ಅರ್ಜಿ ಸಲ್ಲಿಸುವಾಗ ಹೊಂದಿರಬೇಕು ಎಂಬುದನ್ನೂ ಹೇಳಿದ್ದಾರೆ.

ಅರ್ಜಿ ಸಲ್ಲಿಸಲು ಈ ದಾಖಲೆಗಳು ಬೇಕು!
ಕೋವಿಡ್ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವಾಗ ಕೋವಿಡ್ ರೋಗಿಯ P ನಂಬರ್, ಮರಣ ಪ್ರಮಾಣ ಪತ್ರ, ಮೃತ ವ್ಯಕ್ತಿಯ ಆಧಾರ್ ಪ್ರತಿ, ಬಿಪಿಎಲ್ ಕಾರ್ಡ್, ಅರ್ಜಿದಾರರ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿನ ಖಾತೆ, ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ರಾಜ್ಯ ಸರ್ಕಾರವು ಸಂಧ್ಯಾ ಸುರಕ್ಷಾ ಯೋಜನೆಯ ಅನುದಾನದಿಂದ ನೇರವಾಗಿ ಖಾತೆಗೆ ವರ್ಗಾವಣೆ ಮಾಡುತ್ತದೆ" ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದ ಎಷ್ಟು ದಿನಗಳ ಬಳಿಕ ಪರಿಹಾರ ಸಂದಾಯವಾಗುತ್ತದೆ ಎಂಬುದನ್ನೂ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಿದ ಬಳಿಕ ಎಷ್ಟು ದಿನಕ್ಕೆ ಪರಿಹಾರ ಬರುತ್ತದೆ?
"ಅರ್ಜಿ ಸಲ್ಲಿಸಿದ ನಂತರ ಗ್ರಾಮ ಲೆಕ್ಕಾಧಿಕಾರಿಗಳು 7 ದಿನಗಳ ಒಳಗಾಗಿ ಭೌತಿಕ ಪರಿಶೀಲನೆ ನಡೆಸಿ ತಹಶಿಲ್ದಾರರಿಗೆ ವರದಿ ನೀಡಬೇಕು. ಕುಂದು ಕೊರತೆ ನಿವಾರಣೆಗೆ ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯ ಜಂಟಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ" ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಹೀಗಾಗಿ ಕೊರೊನಾದಿಂದ ಮೃತರಾದವರಿಗೆ ಸರ್ಕಾರ ಘೊಷಣೆ ಮಾಡಿದ್ದ ಪರಿಹಾರದ ಕುರಿತು ಎದ್ದಿದ್ದ ಸಂಶಯಗಳಿಗೆ ಸರ್ಕಾರ ಸ್ಪಷ್ಟನೆ ಕೊಟ್ಟಿದೆ. ಆದರೆ ಇದು ಎಲ್ಲ ಅರ್ಹರಿಗೆ ತಲುಪುತ್ತದೆಯಾ? ಎಂಬುದರ ಮೇಲೆ ಗೊಂದಲ ನಿರಾರಣೆ ನಿಂತಿದೆ ಎನ್ನಬಹುದು. ಜೊತೆಗೆ ಮತ್ತೊಂದು ಮಹತ್ವದ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ.

ಮತಾಂತರದ ಬಗ್ಗೆ ಅಸೋಕ್ ಸ್ಪಷ್ಟನೆ!
ಇದೇ ವೇಳೆ ಯಾದಗಿರಿಯಲ್ಲಿನ ಮತಾಂತರ ಪ್ರಕರಣದ ಬಗ್ಗೆ ಕಂದಾಯ ಸಚಿವ ಆರ್. ಅಶೋಕ ಮಾತನಾಡಿದ್ದಾರೆ. "ಇದೊಂದು ಪಿಡುಗು, ದೇಶದ್ರೋಹದ ಕೆಲಸ. ಮತಾಂತರ ನಿಷೇಧ ಕಾಯಿದೆ ತರುವ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಚರ್ಚೆ ಮಾಡುತ್ತೇನೆ. ಶಾಸಕರ ತಾಯಿಯನ್ನೇ ಮತಾಂತರ ಮಾಡುತ್ತಾರೆ ಅಂದರೆ ಇದರ ಗಂಭೀರತೆ ಅರಿಯಬೇಕು. ವಿದೇಶಿ ಹಣದಿಂದ ಇದೆಲ್ಲ ನಡೆಯುತ್ತಿದೆ. ಇದಕ್ಕೆ ಸೂಕ್ತ ಕಾನೂನು ತರುವ ಬಗ್ಗೆ ಚರ್ಚಿಸುತ್ತೇನೆ. ಬಿಜೆಪಿ, ಆರ್ ಎಸ್ ಎಸ್ ಇಲ್ಲದಿದ್ದರೆ ದೇಶದಲ್ಲಿ ಈ ಪಿಡುಗು ಇನ್ನು ಹೆಚ್ಚಾಗುತ್ತಿತ್ತು. ಇದನ್ನು ನಮ್ಮ ಸರ್ಕಾರ ಮಟ್ಟ ಹಾಕುತ್ತದೆ" ಎಂದು ಹೇಳಿದ್ದಾರೆ.












Click it and Unblock the Notifications